Advertisement

ಸಂಚಾರಿ ಪಶು ಚಿಕಿತ್ಸಾ ಘಟಕ ಲೋಕಾರ್ಪಣೆ

03:29 PM Jul 20, 2022 | Team Udayavani |

ಬೆಳಗಾವಿ: ಶಿಕ್ಷಣ, ನಗರೀಕರಣ, ಉದ್ಯೋಗದ ಭರದಲ್ಲಿ ಇತ್ತೀಚೆಗೆ ರೈತರ ಮಕ್ಕಳು ಕೃಷಿ, ಜಾನುವಾರು ಸಾಕಾಣಿಕೆ ಕುರಿತು ನಿರುತ್ಸಾಹ ತೋರುತ್ತಿದ್ದಾರೆ. ಇದರ ಪರಿಣಾಮ ದೇಶದಲ್ಲಿ ಜನಸಂಖ್ಯೆ ಅನುಪಾತಕ್ಕೆ ಹೋಲಿಸಿದರೆ ಜಾನುವಾರು ಸಾಕಾಣಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.

Advertisement

ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ ಹಾಗೂ ಇಲಾಖೆಯ ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ರೈತರ ತರಬೇತಿ ಕೇಂದ್ರ ಹಾಗೂ ಪಶು ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ನಂತರ ಮಾತನಾಡಿದ ಅವರು, ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿರುವುದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ.

ಇದರಿಂದಾಗಿ ಭೂಮಿಯಲ್ಲಿ ಬೆಳೆದು ನಾವೆಲ್ಲ ಸೇವಿಸುತ್ತಿರುವ ಆಹಾರ ವಿಷಪೂರಿತಗೊಳ್ಳುತ್ತಿದೆ. ಇದು ಕ್ಯಾನ್ಸರ್‌ ಕಾಯಿಲೆಗೆ ಕಾರಣವಾಗುತ್ತಿದೆ. ಆದ್ದರಿಂದ ದನ, ಎಮ್ಮೆ, ಕರು, ಹಸು, ಕುರಿಗಳನ್ನು ಸಾಕುವ ಮೂಲಕ ಸಾವಯವ ಗೊಬ್ಬರವನ್ನು ಬಳಸಿ ಭೂಮಿ ಫಲವತ್ತತೆ ಹೆಚ್ಚಿಸುವ ಜತೆಗೆ ಗುಣಮಟ್ಟದ ಬೆಳೆ ಬೆಳೆಯಬಹುದು ಎಂದರು.

ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸುಮಾರು 44 ಕೋಟಿ ವೆಚ್ಚದಲ್ಲಿ ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಆರಂಭಿಸಿವೆ. ಮುಂದಿನ ಹಂತದಲ್ಲಿ ಸಾವಯವ ಕೃಷಿ ಪದ್ಧತಿ, ಜಾನುವಾರು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಿವೆ. ಕೇಂದ್ರ ಸರ್ಕಾರ ಪಶು ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯವನ್ನೂ ದ್ವಿಗುಣಗೊಳಿಸುತ್ತಿದೆ ಎಂದರು.

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಒಂದು ಗೋ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಬದಲು ಗೋಶಾಲೆಗೆ ಕಳುಹಿಸಿ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈಗಾಗಲೇ ನಾನು 20 ಸಾವಿರ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದೇನೆ.

Advertisement

ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 900 ಪ್ರಕರಣಗಳನ್ನು ದಾಖಲಿಸಿ ಕ್ರಮಕ್ಕೂ ಮುಂದಾಗಿದ್ದೇನೆ. ಜನರಿಗೆ ತೊಂದರೆಯಾದರೆ 108ಕ್ಕೆ ಕರೆ ಮಾಡಿ, ಜಾನುವಾರುಗಳಿಗೆ ತೊಂದರೆಯಾದರೆ 1962ಕ್ಕೆ ಕರೆ ಮಾಡಬೇಕು. ಪಶು ಚಿಕಿತ್ಸೆ ಸಲುವಾಗಿ ಈಗಾಗಲೇ ರಾಜ್ಯಕ್ಕೆ 275 ಸಂಚಾರಿ ಚಿಕಿತ್ಸಾ ಘಟಕಗಳು ಮಂಜೂರಾಗಿದ್ದು ಜನರ ಜತೆಗೆ ಜಾನುವಾರುಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

2021-22ನೇ ಸಾಲಿನಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಲಾಗಿದ್ದು ಅದರಲ್ಲಿ ಬೆಂಗಳೂರು ವಿಭಾಗಕ್ಕೆ 75, ಮೈಸೂರು ವಿಭಾಗಕ್ಕೆ 68, ಬೆಳಗಾವಿ ವಿಭಾಗಕ್ಕೆ 82, ಕಲಬುರಗಿ ವಿಭಾಗಕ್ಕೆ 62 ವಾಹನಗಳನ್ನು ಹಂಚಿಕೆ ಮಾಡಲಾಗಿದೆ. ಈ ವಾಹನಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಇದಕ್ಕೆ ಪಶು ವೈದ್ಯರು ಮತ್ತು ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌, ಪ್ರತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ರೈತರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಪಶು ಸಂರಕ್ಷಣೆಗಾಗಿ ಈಗಾಗಲೇ ಲೋಕಾರ್ಪಣೆಗೊಂಡಿರುವ ಸಂಚಾರಿ ಚಿಕಿತ್ಸಾ ಘಟಕಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಇಲಾಖೆಯ ವಿವಿಧ ಯೋಜನೆಗಳಡಿ 18 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳ ಚೆಕ್‌ ವಿತರಣೆ ಮಾಡಲಾಯಿತು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ ಎಚ್‌.ವಿ., ಪೊಲೀಸ್‌ ಆಯುಕ್ತ ಡಾ|ಎಂ.ಬಿ. ಬೋರಲಿಂಗಯ್ಯ, ಎಸ್‌ಪಿ ಸಂಜೀವ್‌ ಪಾಟೀಲ, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ನಿರ್ದೇಶಕ ಡಾ| ಎಂ.ಎಸ್‌.ಪಾಳೇಗಾರ್‌, ಇಲಾಖೆ ಆಯುಕ್ತ ಎಚ್‌. ಜಿ. ಬಸವರಾಜೇಂದ್ರ, ಉಪ ನಿರ್ದೇಶಕ ಡಾ| ರಾಜೀವ್‌ ಕೂಲೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next