Advertisement

ರಾಜ್ಯದ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ನಿರ್ಧಾರ; ಎಸ್ ಟಿ ಸೋಮಶೇಖರ್

12:30 PM Jun 28, 2022 | Team Udayavani |

ದಾವಣಗೆರೆ: ರಾಜ್ಯದಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ಕೊಡಲು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗುವುದು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದವಿಲ್ಲ. ಎಸ್ ಸಿ, ಎಸ್ ಟಿ ವರ್ಗದವರಿಗೆ ಎಷ್ಟು ಸಾಲ ಕೊಡಬೇಕು ಎನ್ನುವುದರ ಬಗ್ಗೆಯೂ ನಿರ್ದೇಶನ ನೀಡಲಾಗಿದೆ ಎಂದರು.

ಯಶಸ್ವಿನಿ ಆರಂಭ: ರಾಜ್ಯ ಸರ್ಕಾರದ ಮಹತ್ವದ ಯಶಸ್ವಿನಿ ಯೋಜ‌ನೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ತಯಾರಿಯಾಗಿದ್ದು, ಈ ಬಗ್ಗೆ ಸಿಎಂ ಅವರ ಜೊತೆ ಮಾತಾಡಲಾಗಿದೆ. ಮುಂದಿನ ಅಕ್ಟೋಬರ್ ಎರಡರಂದು ಯೋಜನೆ ಉದ್ಘಾಟನೆಯಾಗುವ ಸಾಧ್ಯತೆಯಿದೆ ಎಂದು ಸೋಮಶೇಖರ್ ಹೇಳಿದರು.

ಹಾಲು ಉತ್ಪಾಕರಿಗೆ ಅನುಕೂಲವಾಗುವಂತೆ ಕ್ಷೀರ ಸಹಕಾರ ಬ್ಯಾಂಕ್ ಆರಂಭಿಸುವ ಯೋಜನೆ ಇದೆ. ಇದರಲ್ಲಿ ಒಂಬತ್ತು ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶವಿದೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಎಸ್.ಟಿ.ಸೋಮಶೇಖರ್, ಅವರು ಹತಾಶರಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದವರು ಘನತೆಯಿಂದ ಮಾತಾಡಲಿ. ಆರ್ ಎಸ್ಎಸ್ ನವರಿಗೆ 40 ರಷ್ಟು ಕಮಿಷನ್ ಕೊಡುತ್ತಾರೆ ಎಂದರೆ ಏನು ಅರ್ಥ? ಆರ್ ಎಸ್ಎಸ್ ಒಂದು ದೇಶಭಕ್ತ ಸಂಘಟನೆ.  ಇದರ ಬಗ್ಗೆ ಮಾತಾಡುವುದು ಸರಿಯಲ್ಲ‌. ಮೇಲಾಗಿ ಕುಮಾರಸ್ವಾಮಿ ಅವರಿಗೆ ಎನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಇದೇ ಕಾರಣಕ್ಕೆ ಈ ರೀತಿಯಾದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ಸ್ವಲ್ಪ ವಿಚಾರಿಸಿ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.

Advertisement

ಬೇರೆ ಅರ್ಥ ಬೇಡ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಸಚಿವ ಬೈರತಿ ಬಸವರಾಜ್, ಕಾಗಿನೆಲೆ ಶ್ರೀ ಜತೆ ಸಿಎಂ ಬಳಿ ನಾನೂ ಹೋಗಿದ್ದೆ. ಅದಕ್ಕೆ ಬೇರೆ ಆರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ಹಿಂದಿನ ಅವಧಿಯಲ್ಲಿ ಕೂಡ ಅನೇಕ ತಪ್ಪುಗಳಾಗಿವೆ. ಅದನ್ನು ಸರಿಪಡಿಸಿ ವಿತರಣೆ ಮಾಡಲಾಗಿದೆ. ಸಿಎಂ ಸಕಾರಾತ್ಮಕವಾಗಿ ಒಪ್ಪಿ, ಪರಿಷ್ಕರಣೆ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ:40% ಕಮಿಷನ್ ಆರೋಪ: ಮಾಹಿತಿ ನೀಡಲು ಗುತ್ತಿಗೆದಾರರ ಸಂಘಕ್ಕೆ ಪ್ರಧಾನಿ ಕಾರ್ಯಾಲಯದ ಕರೆ

ಕಾಂಗ್ರಸ್ ನವರು ಪಠ್ಯ ಪುಸ್ತಕ ವಿಚಾರದಲ್ಲಿ ವೈಭವೀಕರಣ ಮಾಡುತ್ತಿದ್ದಾರೆ. ಅವರ ಅವಧಿಯಲ್ಲೂ ತಪ್ಪುಗಳಾಗಿದೆ, ಅವರ ಬೆನ್ನನ್ನು ಕೂಡ ಅವರು ನೋಡಿಕೊಳ್ಳಬೇಕು. ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಸರ್ಕಾರ ಮುಕ್ತವಾಗಿದೆ ಎಂದರು.

ಕಾಂಗ್ರೆಸ್ ನಿಂದ ಬಿಜೆಪಿಗೆ ಬಹಳಷ್ಟು ಜನರ ಬರುತ್ತಾರೆ. ಮುಂದಿನ ದಿನಗಳಲ್ಲಿ ಬಹಿರಂಗವಾಗುತ್ತದೆ ಎಂದು ಸಚಿವ ಬೈರತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next