Advertisement

ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ SDPI ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ

10:51 PM Mar 11, 2023 | Team Udayavani |

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ ಮಾಡಿದ್ದು ಶೀಘ್ರ ಅಭ್ಯರ್ಥಿ ಘೋಷಣೆ ಮಾಡಲಿದ್ದೇವೆ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರ.ಕಾ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಹೇಳಿದರು.

Advertisement

ಅವರು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮ್ಮಿಲನದಲ್ಲಿ ಮಾತನಾಡುತ್ತಿದ್ದರು.
ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರಕಾರದ ಆಡಳಿತದ ವೈಖರಿಯಿಂದ ಬೇಸತ್ತು ಹೋಗಿದ್ದು ಸಮಸ್ಯೆಗಳು ಜೀವಂತವಾಗಿವೆ. ಕೋಮುವಾದ ಮತ್ತು ನಕಲಿ ಜಾತ್ಯತೀತತೆಯ ರಾಜಕಾರಣದ ಮಧ್ಯೆ ಎಸ್‌ಡಿಪಿಐ ಮಾತ್ರ ಪರ್ಯಾಯವಾಗಲಿದೆ.

ಭಟ್ಕಳದಲ್ಲಿ ಬಿಜೆಪಿ ಶಾಸಕ ಸುನೀಲ ನಾಯ್ಕ ಕಳೆದ ಬಾರಿ ಕೇವಲ ಕೋಮುವಾದ ವಿಷಯವನ್ನು ಮುಂದಿಟ್ಟುಕೊAಡು ಚುನಾವಣೆ ಗೆದ್ದಿದ್ದಾರೆ. ಭಟ್ಕಳ ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಬಿಜೆಪಿಯದು ಈ ಸ್ಥಿತಿಯಾದರೆ ಇನ್ನು ಕಾಂಗ್ರೆಸ್ ಒಡೆದ ಮನೆಯಾಗಿದೆ. ದಿನಬೆಳಗಾದರೆ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಸ್ಥಳೀಯ ಮುಖಂಡ ಮಂಕಾಳ ವೈದ್ಯ ಅವರು ಕಾರ್ಯಕರ್ತರೊಂದಿಗಿಲ್ಲ. ಇಲ್ಲಿನ ಎರಡೂ ರಾಷ್ಟ್ರೀಯ ಪಕ್ಷಗಳ ಈ ಸ್ಥಿತಿಯಿಂದ ಇಲ್ಲಿನ ಜನ ಬೇಸತ್ತಿದ್ದಾರೆ. ಈ ಬಾರಿ ಬದಲಾವಣೆಗೆ ಕಾಯುತ್ತಿದ್ದಾರೆ ಎಂದ ಅವರು ಎಸ್‌ಡಿಪಿಐ ವತಿಯಿಂದ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪ್ರಸ್ತಾವನೆ ರಾಜ್ಯ ಸಮಿತಿಗೆ ಬಂದಿದೆ. ಈ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಎರಡು ಹಂತಗಳಲ್ಲಿ ಹತ್ತೊಂಬತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾಗೋಷ್ಠಿಗಳ ಮೂಲಕ ಘೋಷಿಸಿದ್ದಾರೆ ಮತ್ತು ಆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ ಎಂದರು. ಎಸ್‌ಡಿಪಿಐ ಎಲ್ಲರನ್ನೂ ಸಮಾನವಾಗಿ ಕಾಣುವ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡುತ್ತದೆ ಎಂದೂ ಹೇಳಿದರು.

ಕಾರ್ಯದರ್ಶಿ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಮತ್ತು ಸಾಮಾಜಿಕ ಅಸಮಾನತೆಗಳು ಇಂದಿಗೂ ತಾಂಡವಾಡುತ್ತಿವೆ. ಇದು ಜನರನ್ನು ನಿತ್ಯ ಕೊಲ್ಲುತ್ತಿವೆ. ಜನರ ತೆರಿಗೆ ಹಣ ನಿರಂತರ ಲೂಟಿಯಾಗುತ್ತಿದೆ. ಜಾತಿ ಬಲ, ಹಣ ಬಲ, ತೋಳ್ಬಲಗಳ ಮೆರೆದಾಟದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಆತಂಕದ ಬೆಂಕಿಯಲ್ಲಿ ಬೇಯಿಸಲಾಗುತ್ತಿದೆ. ಇದನ್ನು ತಡೆಯಲು, ಶುದ್ಧ ರಾಜಕಾರಣ ಮಾಡಲು, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನವನ್ನು ನಿಜ ಅರ್ಥದಲ್ಲಿ ಜಾರಿ ಮಾಡಲು, ಎಲ್ಲರಿಗೂ ಸಮಾನ ಅವಕಾಶದ ಜೊತೆಗೆ ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ಕಟ್ಟಲು, ಜನಪರವಾದ ಪ್ರಾಮಾಣಿಕ ಮತ್ತು ನಿಸ್ವಾರ್ಥ ಮನಸ್ಸಿನ ಶಾಸಕರುಗಳನ್ನು ನಾವು ಆಯ್ಕೆ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ತೌಫಿಕ್ ಬ್ಯಾರಿ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next