Advertisement

ಅನ್ಯ ಭಾಷಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ: ರಮೇಶ

05:27 PM Sep 08, 2022 | Team Udayavani |

ನ್ಯಾಮತಿ: ರಾಜ್ಯದಲ್ಲಿ ಅನ್ಯ ಭಾಷಿಕರ ಜೊತೆ ಕನ್ನಡದಲ್ಲಿಯೇ ಮಾತನಾಡಿ ವ್ಯವಹರಿಸುವ ಮೂಲಕ ಅವರಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡುವಂತೆ ಮಾಡುವ ಕೆಲಸ ಆಗಬೇಕಿದೆ ಎಂದು ಪಿಎಸ್‌ಐ ಪಿ.ಎಸ್‌. ರಮೇಶ ಹೇಳಿದರು.

Advertisement

ಸಮೀಪದ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿರುವ ತಾಲೂಕು ಕಸಾಪ ನಿರ್ದೇಶಕ ಜೆ.ಪಿ. ಚಂದನ್‌ ಅವರ ಮನೆ ಮೇಲೆ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯಷ್ಟು ಸುಲಲಿತವಾದ ಭಾಷೆ ಮತ್ತೂಂದಿಲ್ಲ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಕರು, ಕನ್ನಡಾಭಿಮಾನಿಗಳು ಹೆಚ್ಚು ಗಮನ ಹರಿಸುವಂತೆ ಮನವಿ ಮಾಡಿದರು. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಹುದ್ದೆಗಳನ್ನು ಪಡೆಯಬಹುದು. ಕಸಾಪದಿಂದ ಪ್ರತಿ ಮನೆ ಮೇಲೆ ಕನ್ನಡ ಧ್ವಜ ಹಾರಿಸುವ ಉದ್ದೇಶ ಶ್ಲಾಘನೀಯ ಎಂದರು.

ನಿವೃತ್ತ ಉಪ ತಹಶೀಲ್ದಾರ್‌ ಎನ್‌. ನಾಗರಾಜ ಮಾತನಾಡಿ, ತಾಲೂಕಿನಲ್ಲಿ ಕಸಾಪ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಕನ್ನಡ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕರಿಸಬೇಕೆಂದು ಮನವಿ ಮಾಡಿದರು. ತಾಲೂಕು ಕಸಾಪ ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಮಾತನಾಡಿ, ಶಾಶ್ವತ ಕನ್ನಡ ಧ್ವಜಸ್ತಂಭ ಮೊದಲು ಗ್ರಾಮದಲ್ಲಿ ಆಗಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರಾಗಬೇಕು. ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸಲು ಇಚ್ಛಿಸುವವರು ಕಸಾಪ ಸಹಕರಿಸುತ್ತದೆ ಎಂದರು.

ಪ್ರಧಾನ ಕಾರ್ಯದರ್ಶಿ ಬಿ.ಜಿ. ಚೈತ್ರಾ ಮಾತನಾಡಿ, ಹೊಸದಾಗಿ ಸದಸ್ಯರಾಗಬಯಸುವವರಿಗೆ ಮೊಬೈಲ್‌ನಲ್ಲಿ ನೋಂದಣಿ ಮಾಡಲು ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದ ಡಾ| ರೇಣುಕಾನಂದ ಮೆಣಸಿನಕಾಯಿ, ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ, ಕೋಶಾಧ್ಯಕ್ಷ ಬಸವರಾಜ, ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ, ನಿರ್ದೇಶಕರಾದ ಡಿ.ಎಂ. ವಿಜೇಂದ್ರ ಮಹೇಂದ್ರಕರ, ಚಂದ್ರೇಗೌಡ, ಜೆ.ಪಿ. ಚಂದನ, ಬಂಡಿ ಈಶ್ವರಪ್ಪ, ವೆಂಕಟೇಶ ನಾಯ್ಕ, ತೀರ್ಥಪ್ಪ, ಕುಬೇರಪ್ಪ, ಜಗದೀಶ, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next