Advertisement

ಬಂಧು ಬಾಂಧವರ ಹಿತರಕ್ಷಣೆಗೆ ಸರ್ಕಾರ ಬದ್ದ : ಸಾಗರೋತ್ತರ ಕನ್ನಡಿಗರಿಗೆ ಗೋವಿಂದ ಕಾರಜೋಳ ಅಭಯ

06:11 PM Jun 20, 2020 | sudhir |

ಬೆಂಗಳೂರು : ರಾಜ್ಯದಲ್ಲಿರುವ ತಮ್ಮ ಪೋಷಕರು, ಬಂಧು- ಬಾಂಧವರ ಆರೋಗ್ಯ ಹಾಗೂ ಹಿತರಕ್ಷಣೆಯನ್ನು ರಾಜ್ಯ ಸರ್ಕಾರವು ಮುತುವರ್ಜಿಯಿಂದ ಕೈಗೊಳ್ಳುತ್ತಿದೆ ಎಂದು ಉಪಮುಖ್ಯಂತ್ರಿಯವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸಾಗರೋತ್ತರ ಕನ್ನಡಿಗರಿಗೆ ಅಭಯ ನೀಡಿದರು.

Advertisement

ಸಾಗರೋತ್ತರ ಕನ್ನಡಿಗರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಅನೇಕ ದೇಶಗಳು, ಉತ್ತರ ಕರ್ನಾಟಕದ ಅನೇಕ ಸಾಗರೋತ್ತರ ಕನ್ನಡಿಗರೊಂದಿಗೆ ಈ ಸಂವಾದದಲ್ಲಿ ಮಾತನಾಡಿ, ಸಂತಸವಾಯಿತು. ಸಾಗರೋತ್ತರ ಕನ್ನಡಿಗರು ಕನ್ನಡಿಗರ ಏಳಿಗೆಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅನೇಕ ಸಲಹೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ತಮ್ಮೊಂದಿಗೆ ಇದೆ. ಆತ್ಮ ಸ್ಥೈರ್ಯದಿಂದ ಇರುಬೇಕು ಎಂದು ಡಿಸಿಎಂ ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರವು ಕೋವಿಡ್ ನಿಯಂತ್ರಣಕ್ಕಾಗಿ ಶಕ್ತಿ ಮೀರಿ ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಶ್ರಮಿಸುತ್ತಿದೆ. ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಹಲವಾರು ಪ್ಯಾಕೇಜ್‍ಗಳನ್ನು ಜಾರಿಗೊಳಿಸುವ ಮೂಲಕ ಸಂಕಷ್ಟದಲ್ಲಿರುವ ಕುಲಕಸುಬು ಮಾಡುವವರಿಗೆ, ಕಾರ್ಮಿಕರಿಗೆ ಪರಿಹಾರವನ್ನು ವಿತರಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನಗಳೊಂದಿಗೆ ರಾಜ್ಯ ಸರ್ಕಾರವು ಕೆಲವು ನಿಬಂಧನೆಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ದೇಶನಗಳನ್ನು ಪಾಲಿಸುವಂತೆ ನಿರಂತರವಾಗಿ ಮನವಿ ಮಾಡಲಾಗುತ್ತಿದೆ. ಸರ್ಕಾರೇತರ ಸಂಘ ಸಂಸ್ಥೆಗಳು, ವಿದ್ಯಾವಂತರು, ಯುವಕರು ಜಾಗೃತಿ ಮೂಡಿಸಬೇಕು. ಪ್ರಯಾಣದ ವಿವರವನ್ನು ನೀಡದಿರುವ ಹಿನ್ನೆಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಶಂಕಿತರು ಹಾಗೂ ಸೋಂಕಿತರು ತಮ್ಮ ಪ್ರಯಾಣದ ವಿವರವನ್ನು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಶಿಕ್ಷಣ ಇಲಾಖೆಯು ಪಿಯುಸಿ ಪರೀಕ್ಷೆಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ನಡೆಸಿದೆ. ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ಅವರು ಶಿಕ್ಷಣ ತಜ್ಞರೊಂದಿಗೆ ಸುಧೀರ್ಘವಾಗಿ ಚರ್ಚಿಸಿ, ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತಹ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ. ದೇವಸ್ಥಾನಗಳಲ್ಲೂ ಮುಂಜಾಗ್ರತಾ ಕ್ರಮಕೈಗೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮಕೈಗೊಳ್ಳಲಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಭಿಯಾಗುತ್ತಿದೆ. ಸಮಪರ್ಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಇಂಗ್ಲೆಂಡ್ ನ ಗೋಪಾಲ್ ಕುಲಕರ್ಣಿ, ಇಟಲಿಯ ಹೇಮೇಗೌಡ ಮಧು, ಯುಕೆಯ ಬಸವ ಪಾಟೀಲ್, ಯುಎಇಯ ಚಂದ್ರು ಅಂಗದಲ್ಲಿ, ಸೌದಿ ಅರೇಬಿಯದ ರವಿ ಮಾಹಾದೇವ ಅವರು ಈ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಎಲ್ಲಾ ದೇಶಗಳ ಪ್ರತಿನಿಧಿಗಳಾಗಿ ಹಲವಾರು ಸಾಗರೋತ್ತರ ಕನ್ನಡಿಗರು ಸಂವಾದದಲ್ಲಿ ಪಾಲ್ಗೊಂಡು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next