Advertisement

ಡಿಸಿಸಿ ಬ್ಯಾಂಕ್‌ ಪುನಶ್ಚೇತನಕ್ಕೆ ಸಿದ್ದು ಕಾರಣ

01:18 PM Feb 14, 2023 | Team Udayavani |

ಕೋಲಾರ: ನಷ್ಟದಲ್ಲಿ ಮುಳುಗಿದ್ದ ಕೋಲಾರ ಡಿಸಿಸಿ ಬ್ಯಾಂಕ್‌ ಪುನಶ್ಚೇತನಕ್ಕೆ ಕಾರಣರಾದವರು ಸಿದ್ದರಾಮಯ್ಯ, ಇದರಿಂದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ದೊರೆಯುವಂತಾಯಿತು. ಕೋಲಾರ ಜಿಲ್ಲೆಯ 360 ಕೋಟಿ ರೂ. ರೈತರ ಸಾಲ ಮನ್ನಾ ಆಗಿದೆ. ಬ್ಯಾಂಕ್‌ನಿಂದ 6.42 ಲಕ್ಷ ಮಂದಿ ಮಹಿಳೆಯರಿಗೆ ಸಾಲ ಸಿಕ್ಕಿದೆ. ಇದರಿಂದ ಹೈನುಗಾರಿಕೆ ಸಣ್ಣ ವ್ಯವಹಾರ ಮಾಡಿ ಸ್ವಾವಲಂಬಿಗಳಾಗಿದ್ದಾರೆ. ಇದಕ್ಕಾಗಿ ಧನ್ಯವಾದ ಹೇಳುವ ಕಾರ್ಯಕ್ರಮವನ್ನು ವೇಮಗಲ್‌ನಲ್ಲಿ ಆಯೋಜಿಸಿದ್ದೇವೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

Advertisement

ತಾಲೂಕಿನ ವೇಮಗಲ್‌ ಕ್ರೀಡಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಅಡುಗೆ ಅನಿಲ 400 ರೂ ಇದ್ದಿದ್ದು, 1100 ಆಗಿದೆ, ಕೇಂದ್ರ ಸರ್ಕಾರ ಎಲ್ಲಾ ಅಹಾರ ಪದಾರ್ಥಗಳ ಮೇಲೆ ತೆರಿಗೆ ಹಾಕಿದೆ, ಅವಲಕ್ಕಿಯನ್ನು ಬಿಟ್ಟಿಲ್ಲ. ಭಾರತೀಯರೆಲ್ಲಾ ದುಡಿಯಬೇಕು, ಅಂಬಾನಿ ಆದಾನಿ ಮಾತ್ರ ಶ್ರೀಮಂತರಾಗಬೇಕು ಎನ್ನುವುದು ಕೇಂದ್ರದ ಧೋರಣೆ. ಶ್ರೀಮಂತರ ತೆರಿಗೆ ಕಡಿಮೆ ಮಾಡಲು ಬಡವರ ಮೇಲೆ ತೆರಿಗೆ ಹಾಕುತ್ತಿದ್ದಾರೆ ಎಂದರು.

ಜನರನ್ನು ಸುಲಿಗೆ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ತೊಲಗಿಸಿ ಭಾಗ್ಯಗಳ ಯೋಜನೆಯನ್ನು ನೀಡುತ್ತಿರುವ ಕಾಂಗ್ರೆಸ್‌ ಸರ್ಕಾರ ಮತ್ತೂಮ್ಮೆ ಬರಬೇಕಿದೆ. ಆದಕ್ಕಾಗಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡ ಬೇಕು ಎಂದು ಅವರನ್ನು ಕರೆತಂದಿದ್ದೇವೆ ಎಂದರು.

ಮಾಜಿ ಮಂತ್ರಿ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್‌ ಬ್ಯಾಲಹಳ್ಳಿ ನೇತೃತ್ವದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಸ್ವಸಹಾಯ ಸಂಘಗಳನ್ನು ಆರಂಭಿಸಿದ್ದೇ ಕಾಂಗ್ರೆಸ್‌ ಸರ್ಕಾರ. ಮಹಿಳೆಯರ ಸಾಲದ ಬಡ್ಡಿಯನ್ನು ಸರ್ಕಾರ ಕಟ್ಟುತ್ತಿದೆ, ಇದನ್ನು ಆರಂಭಿಸಿದ್ದು ಸಿದ್ದರಾಮಯ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.

Advertisement

ಸಿದ್ದರಾಮಯ್ಯ ಕೋಲಾರಕ್ಕೆ ಬಂದಿರುವುದು ನಮ್ಮೆಲ್ಲರ ಅದೃಷ್ಟ, ಗೆದ್ದು ಹೋದರೆ ಬಯಲುಸೀಮೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಅತ್ಯಧಿಕ ಬಹುಮತದಿಂದ ಸಿದ್ದರಾಮಯ್ಯರನ್ನು ಗೆಲ್ಲಿಸಲು ಸಂಪೂರ್ಣವಾಗಿ ಜತೆಯಲ್ಲಿದ್ದು ಕೆಲಸ ಮಾಡುತ್ತೇನೆ. ಸ್ಥಳೀಯ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿಕೊಡಬೇಕು ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ, ಕೋಲಾರ ವಿಧಾನಸಭಾ 62,200 ಸ್ತ್ರೀಶಕ್ತಿ ಸಂಘಗಳಿಗೆ 210 ಕೋಟಿ ಸಾಲ ನೀಡಲಾಗಿದೆ, ಶೇ.99 ಸಾಲ ಮರು ಪಾವತಿ ಆಗುತ್ತಿದೆ, 50 ಸಾವಿರ ಸಾಲದ ಮಿತಿಯನ್ನು ಒಂದು ಲಕ್ಷಕ್ಕೇರಿಸಬೇಕು, ಸಾಲದ ಬಾಕಿ ಇರುವ ಕಂತುಗಳನ್ನು ಮನ್ನಾ ಮಾಡಬೇಕು, ರೈತರಿಗೆ 3 ಲಕ್ಷ ರೂ ಶೂನ್ಯಬಡ್ಡಿ ಸಾಲವನ್ನು 5 ಲಕ್ಷಕ್ಕೇರಿಸಬೇಕು, ಕುರಿ ಹಸು ರೇಷ್ಮೆ ಮನೆ ನಿರ್ಮಾಣಕ್ಕೆ ಶೇ.3 ಬಡ್ಡಿ ಸಾಲವನ್ನು 10 ಲಕ್ಷದಿಂದ 20 ಲಕ್ಷಕ್ಕೇರಿಸಬೇಕು, ಎಪಿಎಂಸಿ ಕಾಯ್ದೆ ರದ್ದುಮಾಡಬೇಕು, ಕೋಲಾರ ಎಪಿಎಂಸಿ ಮಾರುಕಟ್ಟೆ 18 ಎಕರೆ ಜಾಗವನ್ನು 100 ಎಕರೆ ಮಾರುಕಟ್ಟೆಯಾಗಿಸಬೇಕು, ಟೊಮೆಟೋ 40 ಸಾವಿರ ಕ್ವಿಂಟಾಲ್‌ ಉತ್ಪಾದನೆಯಾಗುತ್ತದೆ, ಸಂಸ್ಕರಣಾ ಘಟಕ ಆರಂಭವಾಗಬೇಕು ಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next