Advertisement

ಜಲಶಕ್ತಿ ಪ್ರಗತಿ ವೆಬ್‌ಸೈಟ್‌ನಲ್ಲಿ ಹಾಕಿ

01:15 PM Jul 21, 2019 | Naveen |

ದಾವಣಗೆರೆ: ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶ ನೀರಿನ ಸಂರಕ್ಷಣೆಯಾಗಿದ್ದು, ನಿಗದಿತ ಅವಧಿಯಲ್ಲಿ ನೀರಿನ ಸಂರಕ್ಷಣೆ ಕುರಿತಾದ ಸಮರ್ಪಕ ಕ್ರಿಯಾಯೋಜನೆ ತಯಾರಿಸಿ, ಕಾರ್ಯ ಪ್ರವೃತ್ತರಾಗಬೇಕೆಂದು ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಸೂಚಿಸಿದ್ದಾರೆ.

Advertisement

ಶನಿವಾರ, ಜಿಲ್ಲಾಡಳಿತ ಭವನದಲ್ಲಿ ಜಲಶಕ್ತಿ ಅಭಿಯಾನ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನ ಐದು ಪ್ರಮುಖ ಕಾರ್ಯಕ್ರಮಗಳನ್ನು ಹೊಂದಿದೆ. ನೀರು ಸಂರಕ್ಷಣೆ ಮತ್ತು ಮಳೆಕೊಯ್ಲು, ಸಾಂಪ್ರದಾಯಿಕ ನೀರಿನ ಮೂಲಗಳ ನವೀಕರಣ, ನೀರಿನ ಮರುಬಳಕೆ ಮತ್ತು ಮರುಪೂರಣ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ಕುರಿತು ಜಿಲ್ಲೆಯಲ್ಲಿ ಸಾಧಿಸಬಹುದಾದಂತಹ ಕ್ರಿಯಾ ಯೋಜನೆ ರಚಿಸಲು ಹಾಗೂ ಜಲಶಕ್ತಿ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಪ್ರಗತಿಯನ್ನು ನಿಯಮತಿವಾಗಿ ಅಪ್‌ಲೋಡ್‌ ಮಾಡಲು ಕ್ರಮ ಕೈಗೊಳ್ಳಬೇಕೆಂದರು.

ಪ್ರಸ್ತುತ ಟಾಪ್‌ 20 ಜಿಲ್ಲೆಯಲ್ಲಿ ದಾವಣಗೆರೆ 12ನೇ ಸ್ಥಾನದಲ್ಲಿ ಇದೆ. ಸಾಧನೆ ಇನ್ನೂ ಆಗಬೇಕಿದೆ. ಆದ ಸಾಧನೆ ಬಗ್ಗೆ ಅಪ್‌ಲೋಡ್‌ ಮಾಡುವುದು ಮುಖ್ಯ. ಇದಕ್ಕಾಗಿ ನೋಡಲ್ ಅಕಾರಿಗಳನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಹಿಂದೆ ಜಲಾನಯನ ಕಾರ್ಯಕ್ರಮಗಳು ತುಂಬಾ ಚುರುಕಾಗಿದ್ದವು. ಪ್ರಸ್ತುತ ಎಲ್ಲೆಡೆ ಗಿಡ ನೆಡುವ ಕಾರ್ಯ ಅತ್ಯಂತ ವೇಗದಲ್ಲಿ ಸಾಗಲು ಕ್ರಮ ವಹಿಸಲಾಗುವುದು. ಅರಣ್ಯ ಇಲಾಖೆಯವರು ಗುಡ್ಡಗಾಡು ಪ್ರದೇಶಗಳು ಹಾಗೂ ಮುಖ್ಯವಾಗಿ ಗ್ರಾಮೀಣ ಮತ್ತು ನಗರ ಭಾಗದ ಎಲ್ಲ ಮುಖ್ಯ ಕೆರೆಗಳ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪ್ರಗತಿಯ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ಈ ಕಾರ್ಯಕ್ಕೆ ಕೃಷಿ ವಿಜ್ಞಾನ ಕೇಂದ್ರದ ಸಲಹೆ ಮತ್ತು ಸಹಕಾರ ಅತ್ಯಗತ್ಯವಾಗಿದ್ದು, ಐಇಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದ ಅವರು, ಇದೊಂದು ಅಭಿಯಾನ ಅನ್ನುವುದಕ್ಕಿಂತ ಜಿಲ್ಲೆಯ ಜಲಮೂಲದ ಕುರಿತಾದ ಸಮಗ್ರ ವೈಜ್ಞಾನಿಕ ಅಧ್ಯಯನವಾಗಿದೆ. ಕ್ರಿಯಾ ಯೋಜನೆ ಪ್ರಕಾರ ಅನುದಾನ ಬಿಡುಗಡೆಯಾಗುತ್ತದೆ. ಅದಕ್ಕೆ ಅನುಗುಣವಾಗಿ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಲಶಕ್ತಿ ಅಭಿಯಾನದ ಐದು ಕಾರ್ಯಕ್ರಮಗಳ ಪೈಕಿ ಸಾಧಿಸಬಹುದಾದಂತಹ ಯೋಜನೆ ಮೊದಲು ತಯಾರಿಸಲು ಆದ್ಯತೆ ನೀಡಲಾಗುವುದು. ಬೋರ್‌ವೆಲ್ ರೀಚಾರ್ಜ್‌, ನೀರಿನ ಮರುಬಳಕೆ, ಸರ್ಕಾರಿ ಜಾಗದಲ್ಲಿ, ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಆಸ್ಪತ್ರೆ ಸೇರಿದಂತೆ ರೈತರ ಹೊಲಗಳಲ್ಲಿ ಗಿಡ ನೆಡುವ ಯೋಜನೆ ರೂಪಿಸಿದರೆ ಉತ್ತಮ ಎಂದು ಸಭೆ ಗಮನ ಸೆಳೆದರು.

Advertisement

ಡಿ.ಡಿ.ಪಿ.ಐ ಪರಮೇಶ್ವರಪ್ಪ, ನಮ್ಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 505 ಶಾಲೆಗಳಲ್ಲಿ ಕಳೆದ ಏಳೆಂಟು ವರ್ಷಗಳ ಹಿಂದೆ ಮಳೆಕೊಯ್ಲು ಅಳವಡಿಸಲಾಗಿತ್ತು. ಆದರೆ ಈಗ ಇವ್ಯಾವು ಕೆಲಸ ಮಾಡುತ್ತಿಲ್ಲವೆಂದಾಗ, ಜಿಲ್ಲಾಧಿಕಾರಿಗಳು ಜಲಶಕ್ತಿ ಯೋಜನೆಯಡಿ ಅವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿದರು.

ಕೇಂದ್ರ ಸರ್ಕಾರದ ಜಲಶಕ್ತಿ ಯೋಜನೆಯ ದಾವಣಗೆರೆ ಜಿಲ್ಲಾ ನೋಡಲ್ ಅಧಿಕಾರಿ ವಿಶಾಲ್ ಪ್ರತಾಪ್‌ ಸಿಂಗ್‌ ಮಾತನಾಡಿ, ಈ ಅಭಿಯಾನದಡಿ 2-3 ತಿಂಗಳ ಒಳಗೆ ಕ್ರಿಯಾಯೋಜನೆ ತಯಾರಿಸಬೇಕು. ಐದು ಕಾರ್ಯಕ್ರಮಗಳ ಆಧಾರದಲ್ಲಿ ಜಲಸಂರಕ್ಷಣೆ ಕುರಿತ ಯೋಜನೆಯನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು.

ಚನ್ನಗಿರಿ, ಜಗಳೂರು ಮತ್ತು ದಾವಣಗೆರೆ ತಾಲ್ಲೂಕುಗಳಲ್ಲಿ ಕ್ಷೇತ್ರ ಭೇಟಿ ನೀಡಿ ಐದು ಜಲಸಂರಕ್ಷಣಾ ವಿಭಾಗಗಳಲ್ಲಿ ಈಗಾಗಲೇ ಆಗಿರುವ ಕಾರ್ಯಕ್ರಮಗಳು, ಪ್ರಗತಿ ಬಗ್ಗೆ ಹಾಗೂ ಮುಂದೆ ಯಾವ ವಿಭಾಗದ ಮೇಲೆ ಹೆಚ್ಚಿನ ಒತ್ತು ನೀಡಬೇಕೆಂಬುದನ್ನ ಅಧ್ಯಯನ ನಡೆಸಲಾಗುತ್ತಿದೆ. ಈ ಅಭಿಯಾನದಡಿ ಪ್ರತಿ ಜಿಲ್ಲೆಗೆ ಒಬ್ಬ ಸೆಂಟ್ರಲ್ ನೋಡಲ್ ಅಧಿಕಾರಿ, ಬ್ಲಾಕ್‌ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಸೇರಿದಂತೆೆ ಜಿಲ್ಲಾಧಿಕಾರಿಗಳಿಗೆ ಒಂದೊಂದು ವಿಭಾಗದ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.

ಜಲಶಕ್ತಿ ಅಭಿಯಾನ ವೆಬ್‌ಸೈಟ್‌ನಲ್ಲಿ ಜಲಸಂರಕ್ಷಣೆ ಕುರಿತಾದ ಐದೂ ವಿಭಾಗಗಳಲ್ಲಿ ನಡೆಸಲಾಗುವ ಕಾರ್ಯ ಚಟುವಟಿಕೆಗಳ ಕುರಿತು ಕೆಲಸ ಆಗುವ ಮುನ್ನ ಮತ್ತು ನಂತರದ‌ ಫೋೕಟೊಗಳನ್ನು ಅಪ್‌ಲೋಡ್‌ ಮಾಡಬೇಕು ಎಂದು ತಿಳಿಸಿದರು.

ಜಿಪಂ ಸಿಇಓ ಎಚ್.ಬಸವರಾಜೇಂದ್ರ ಮಾತನಾಡಿ, ಈಗಾಗಲೇ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮೀಣ ಭಾಗದಲ್ಲಿ ಜಲಮೂಲಗಳು, ಜಲಸಂರಕ್ಷಣೆ ಕುರಿತು ಶ್ರಮದಾನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಪಂ ಉಪಕಾರ್ಯದರ್ಶಿ ಭೀಮಾ ನಾಯ್ಕ, ಡಾ|ಡೇವಿತ್‌ ರಾಜ್‌, ಡಿಎಚ್ಓ ಡಾ| ರಾಘವೇಂದ್ರಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ದೂಡಾ ಆಯುಕ್ತ ಆದಪ್ಪ,ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next