Advertisement

ಬದುಕು-ಬರಹ ಒಂದಾದ್ರೆ ಸತ್ವಭರಿತ ಸಾಹಿತ್ಯ

10:09 AM Jul 22, 2019 | Naveen |

ದಾವಣಗೆರೆ: ಬದುಕು ಮತ್ತು ಬರಹ ಒಂದೇ ಆಗಿರುವ ಸಾಹಿತ್ಯ ಸದಾ ಸತ್ವಭರಿತವಾಗಿರುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷ ಡಾ| ವೈ.ಎಂ. ಭಜಂತ್ರಿ ಪ್ರತಿಪಾದಿಸಿದ್ದಾರೆ.

Advertisement

ಭಾನುವಾರ ರೋಟರಿ ಬಾಲಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕಾವ್ಯ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳಾಡಿದ ಅವರು, ಯಾವ ಸಾಹಿತಿಯ ಬದುಕು ಮತ್ತು ಬರಹ ಒಂದೇ ತೆರನಾಗಿ ಇರುವುದೋ ಅದಕ್ಕೆ ಅದರದೇ ಆದ ಶಕ್ತಿ ಮತ್ತು ಸತ್ವ ಇರುತ್ತದೆ ಎಂಬುದಕ್ಕೆ ದಲಿತ ಸಾಹಿತ್ಯ ನಿದರ್ಶನ ಎಂದರು.

ಕಳೆದ 25 ವರ್ಷದ ಹಿಂದೆ ಗದಗನಲ್ಲಿ ಪ್ರಾರಂಭವಾಗಿರುವ ದಲಿತ ಸಾಹಿತ್ಯ ಪರಿಷತ್ತು ಈವರೆಗೆ ಬರಿಗಾಲಲ್ಲಿ ನಡೆದು ಬಂದಿದೆ. ಬುದ್ಧ-ಬಸವ-ಅಂಬೇಡ್ಕರ್‌ರವರ ಆಶಯ, ಭಾವನೆ, ತತ್ವಗಳಡಿಯಲ್ಲಿ ಸಾಗಿ ಬಂದಿರುವ ಪರಿಷತ್ತು ಕಷ್ಟಗಳ ಬಿಸಿಲು, ಸಂಭ್ರಮದ ಬೆಳಂದಿಂಗಳು ಎರಡನ್ನೂ ಕಂಡಿದೆ. 25 ವರ್ಷದ ನಂತರ ಈ ಕಾಲಘಟ್ಟದಲ್ಲಿ ದಲಿತ ಸಾಹಿತ್ಯ ಕಾಲ, ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ಹೊಂದಬೇಕು ಎಂದು ಆಶಿಸಿದರು.

ಸಾಮಾಜಿಕ ಶೋಷಣೆ, ದಬ್ಟಾಳಿಕೆ ಮುಂತಾದ ಕಾರಣಗಳಿಂದ ತಮ್ಮ ಬದುಕನ್ನು ಕಳೆದುಕೊಂಡವರು ತಮ್ಮ ಮಾತುಗಳನ್ನು ತಮ್ಮನ್ನು ತುಳಿದವರಿಗೆ ಮುಟ್ಟಿಸುವಂತಾಗಬೇಕು ಎಂಬುದು ಬುದ್ಧ-ಬಸವ- ಅಂಬೇಡ್ಕರ್‌ರವರ ಆಶಯವಾಗಿತ್ತು. ಆ ಕೆಲಸವನ್ನು ದಲಿತ ಸಾಹಿತ್ಯ ಪರಿಷತ್ತು ಮಾಡುತ್ತಾ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ದಲಿತ ಸಾಹಿತ್ಯ ಪ್ರಾಯೋಗಿಕವಾಗಿ ಬರೆಯುವಂತದ್ದಲ್ಲ. ಮುದ್ದಾಂ ಆಗಿಯೂ ಬರೆಯುವಂತದ್ದಲ್ಲ. ಏಕೆಂದರೆ ದಲಿತ ಸಾಹಿತ್ಯ ಜೀವನದ ವಿವಿಧ ಘಟ್ಟದಲ್ಲಿ ಕಂಡುಂಡ ಅನುಭವ, ನೋವು ಒಳಗೊಂಡಿದೆ. ದಲಿತ ಸಾಹಿತ್ಯವನ್ನು ಆರಾಮವಾಗಿ ಉಂಡು ಬರೆಯುವಂತದ್ದಲ್ಲ. ದಲಿತ ಕಾವ್ಯ ಪ್ರತಿಯೊಬ್ಬ ದಲಿತರ ನೋವಿನ ಸಂಕೇತ. ಶ್ರಮದ ಬೆವರು, ಬದುಕಿನ ಚಡಪಡಿಕೆ ನಡುವೆ ದಲಿತ ಸಾಹಿತ್ಯ ಹುಟ್ಟಿ ಬಂದಿದೆ ಎಂದು ತಿಳಿಸಿದರು.

Advertisement

ನೆಲದ ಒಡಲನಿಂದ ಬಂದಿರುವ ದಲಿತ ಸಾಹಿತ್ಯವನ್ನು ಸಂಭ್ರಮಿಸಲೇಬೇಕು. ಏಕೆಂದರೆ ದಲಿತ ಸಾಹಿತ್ಯ ಬದುಕಿಗಿಂತ ವಿಭಿನ್ನವಾದುದಲ್ಲ. ದಲಿತ ಸಾಹಿತ್ಯ ಪರಿಷತ್ತು ನೇರವಾಗಿ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ, ಸಾಮಾಜಿಕ ಹೋರಾಟಕ್ಕೆ ಸಾಹಿತ್ಯಕವಾಗಿ ಬೆಂಬಲ ನೀಡುತ್ತಾ ತನ್ನದೆ ನೆಲೆಯಲ್ಲಿ ಹೋರಾಟ ನಡೆಸುತ್ತಲೇ ಇದೆ ಎಂದು ತಿಳಿಸಿದರು.

ದಲಿತ ಸಮುದಾಯ ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣಕ್ಕೆ ಮಹತ್ವ ಮತ್ತು ಆದ್ಯತೆ ನೀಡಬೇಕು. ಅಕ್ಷರ ಕಲಿತವರಿಗೆ ಸಮಾಜ ಗೌರವ ಕೊಡುತ್ತದೆ. ವಿದ್ಯಾವಂತ ದಲಿತ ಸಮುದಾಯದವರು ಯಾವುದೇ ಕಾರಣಕ್ಕೂ ತಾವು ಸಾಗಿ ಬಂದ ಹಾದಿಯನ್ನ ಮರೆಯಬಾರದು. ದಲಿತ ಕೇರಿಗಳತ್ತ ದಲಿತ ಸಾಹಿತ್ಯ ಸಾಗಬೇಕು. ದಲಿತ ಕೇರಿಯಲ್ಲಿನ ಪ್ರತಿಯೊಬ್ಬರ ಬದುಕು ಹಸನಾಗಲು ಕಾರಣೀಭೂತವಾಗಬೇಕು ಎಂದು ಆಶಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಉದ್ಘಾಟಿಸಿದ ರಾಜ್ಯ ಅಧ್ಯಕ್ಷ ಡಾ|ಎಚ್.ಬಿ. ಕೊಲ್ಕೂರ, ದಲಿತ ಸಾಹಿತ್ಯ ಹೊಸ ಚಿಂತನೆ, ನೇರ, ಸರಳ ಮತ್ತು ನಿಷ್ಠುರವಾಗಿ ಇರುವುದನ್ನ ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಾಲಿಕೆ ರೂಪದಲ್ಲಿ ದಲಿತ ಸಾಹಿತ್ಯವನ್ನು ಹೊರ ತರುವ ಕೆಲಸ ಮಾಡಿದೆ. ದಲಿತ ಸಾಹಿತ್ಯ ಪರಿಷತ್ತು ಮೂಲಕ ಎಲೆ ಮರೆ ಕಾಯಿಯಂತಿರುವ ಅನೇಕ ಸಾಹಿತಿ, ಲೇಖಕರನ್ನು ಹೊರ ತರುವ ಕೆಲಸ ಮಾಡಲಾಗುತ್ತಿದೆ. ಸಾಹಿತ್ಯಕ ನೆಲೆಯಲ್ಲಿ ಸಾಮಾಜಿಕ ಹೋರಾಟ ಮುನ್ನಡೆಸುತ್ತಿದೆ. ದಲಿತ ಸಾಹಿತ್ಯ ಬದುಕು ಮತ್ತು ಬರಹ ಒಂದೇ ಎಂದು ಪ್ರಬಲವಾಗಿ ಪ್ರತಿಪಾದಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಓ.ಎಸ್‌. ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್‌ ಸದಸ್ಯ ಆಲೂರು ನಿಂಗರಾಜ್‌, ಡಾ| ಅರ್ಜುನ ಗೊಳಸಂಗಿ, ಕೆ. ಮಂಜುನಾಥ್‌, ಬುಳಸಾಗರದ ಸಿದ್ದರಾಮಣ್ಣ ಇತರರು ಇದ್ದರು.

ಗಂಗನಕಟ್ಟೆ ಹನುಮಂತಪ್ಪ, ಮಾಂತೇಶ್‌ ಜಾಗೃತಿ ಗೀತೆಗಳಾಡಿದರು. ಅನಿಲ್ ಬಾಪುಲೆ ಸ್ವಾಗತಿಸಿದರು. ಹುಚ್ಚಂಗಿ ಪ್ರಸಾದ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next