Advertisement

ಹರ ಜಾತ್ರೆ ಜಾತ್ಯತೀತ ಸಂಭ್ರಮವಾಗಲಿ

11:45 AM Jan 06, 2020 | Naveen |

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15 ರಂದು ನಡೆಯುವ ಹರ ಜಾತ್ರೆ ಜಾತ್ಯತೀತ ಜಾತ್ರೆ ಆಗಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಶಿಸಿದ್ದಾರೆ.

Advertisement

ಭಾನುವಾರ ದಾವಣಗೆರೆಯ ರೇಣುಕಾ ಮಂದಿರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರರು ಎಲ್ಲರೂ ಒಂದು ಕಡೆ ಸೇರಬೇಕು. ಸಂಕ್ರಾಂತಿಯನ್ನು ಜಾತ್ರೆಯಂತೆ ಆಚರಿಸಬೇಕು. ಆ ಹರ ಜಾತ್ರೆಯಲ್ಲಿ ಬರೀ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಮಾತ್ರವಲ್ಲ, ಎಲ್ಲ ಸಮಾಜದವರು ಭಾಗಿಯಾಗುವ ಮೂಲಕ ಜಾತ್ಯತೀತ ಜಾತ್ರೆ ಆಗಬೇಕು. ಹರ ಜಾತ್ರೆಯನ್ನು 5 ಅಂಶಗಳೊಂದಿಗೆ ಆಚರಿಸಲಾಗುವುದು ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ
ಬಾಂಧವರು ಎಲ್ಲರೂ ಭಾಗವಹಿಸಬೇಕು. ಎರಡು ದಿನ ಮನೆಗಳಲ್ಲಿ ಅಡುಗೆ ಮಾಡುವ ಪ್ರಮಯವೇ ಇಲ್ಲ. ಪೀಠದಲ್ಲೇ ತಿಂಡಿ, ಊಟ ಮಾಡಬೇಕು. ನಮ್ಮ ಸಮಾಜದವರು ಮಾತ್ರವಲ್ಲ. ಇತರ ಸಮಾಜದವರನ್ನೂ ಕರೆ ತರಬೇಕು. ಇನ್ನು ಮುಂದೆ ಪ್ರತಿ ಸಂಕ್ರಾಂತಿಯಂದು ಹರ ಜಾತ್ರೆ ನಡೆಯಲಿದೆ.

ಮುಂದೆ ಹರ ಜಾತ್ರೆ ಜಗತ್‌ ಜಾಗೃತಿ ಜಾತ್ರೆ ಆಗಲಿದೆ ಎಂದು ಶ್ರೀಗಳು ತಿಳಿಸಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಈಗ ಜಾಗೃತ ಪೀಠವಾಗಿದೆ. ತನ್ನದೇ ಆದ ಇತಿಹಾಸ ಇದೆ. ಪೀಠವನ್ನು ಬೆಳೆಸುವ ಸವಾಲು ನಮ್ಮ ಮುಂದೆ ಇದೆ.  ಹಾಗಾಗಿ ಯಾವುದೇ ರಾಜಕೀಯ ಪಕ್ಷಗಳು ಒಳಗೊಂಡಂತೆ ಯಾರೂ ಸಹ ಹರಿಹರ ಪೀಠವನ್ನು ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ. ಹರಿಹರ ಪೀಠ ಈಗ 1 ಕೋಟಿಯಷ್ಟು ಜನಸಂಖ್ಯೆಯ ಪೀಠವಾಗಿದೆ. ಎಲ್ಲಾ ಪಕ್ಷಗಳ ಮುಖಂಡರು ಬಂದು ಹೋಗುವಂತಾಗಿದೆ. ಹರಿಹರ ಪೀಠ ಒಂದೇ ಅಖಂಡ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವಾಗಿದೆ. ರಾಜಕೀಯ ಪಕ್ಷಗಳಿಗೆ ಹರಿಹರ ಪೀಠದ ಬೆಂಬಲ ಅನಿವಾರ್ಯ ಆಗುವಂತೆ ನಾವೆಲ್ಲರೂ ಸಂಘಟಿತರಾಗಿ ಬೆಳೆಸಬೇಕು ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್‌ ಸಚಿವರಾಗಿದ್ದಾಗ ಹರಿಹರ ಪೀಠಕ್ಕೆ ಶುದ್ಧ ಸಿಹಿ ನೀರಿನ ಸೌಲಭ್ಯ
ಒದಗಿಸಬೇಕು ಎಂದು ಕೇಳಿದ್ದೆವು. ಅದರಂತೆ ಅವರು ಮಂಜೂರು ಮಾಡಿದ್ದರು. ಇನ್ನು ಕೆಲವೇ ದಿನಗಳಲ್ಲಿ ಪೀಠದಲ್ಲಿ ಸಿಹಿ ನೀರಿನ ಸೌಲಭ್ಯ ಇರಲಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಪೀಠಕ್ಕೆ ಬಂದ ಸಂದರ್ಭದಲ್ಲಿ 4 ಕೋಟಿ ಅನುದಾನ ಮಂಜೂರು ಮಾಡಿದ್ದರು. ಈಗ ಪೀಠದಲ್ಲಿ ಸಿಮೆಂಟ್‌ ರಸ್ತೆ ಎಲ್ಲವೂ ಆಗುತ್ತಿವೆ. ಕೆಲವೇ ದಿನಗಳಲ್ಲಿ ಪೀಠದ ಚಿತ್ರಣವೇ ಬದಲಾಗಲಿದೆ. ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುವಂತಹ ಅಧಿಕಾರ ನೀಡಿರುವ ಮಠ ಅಧಿಕಾರ ಪಡೆಯುವಂತಾಗಬೇಕು ಎಂದು ತಿಳಿಸಿದರು.

Advertisement

ಸಮಾಜದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ದೊರೆಯಬೇಕಾದ ಸೌಲಭ್ಯ, ತಮ್ಮದೇ ಗುರುಪೀಠ, ಗುರುಗಳನ್ನ ಹೊಂದಬೇಕು ಎನ್ನುವ ಕಾರಣಕ್ಕೆ 1994 ರಲ್ಲಿ ಹನುಮನಾಳ್‌ರವರು ಪ್ರಾರಂಭಿಸಿದ ಸಂಘಟನೆ ಈಗ ಬೆಳೆಯುತ್ತಿದೆ. ಈವರೆಗೆ 1036 ಸಾಮೂಹಿಕ ಮದುವೆ, 3,800 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗಿದೆ. ರಾಜ್ಯದ ಅತಿ ದೊಡ್ಡ ಸಮಾಜವಾಗಿದ್ದರೂ ಸಂಘಟನೆಯ ಕೊರತೆಯಿಂದ ಸಮಾಜ ಬೆಳೆದಿಲ್ಲ. ಸಮಾಜದ ಪ್ರತಿಯೊಬ್ಬರು ನನ್ನ ಸಮಾಜ, ನನ್ನ ಪೀಠ, ನಮ್ಮ ಗುರುಗಳು ಎಂಬ ಭಾವನೆಯಿಂದ ಸಮಾಜ ಬೆಳೆಸಿದಲ್ಲಿ ಮುಂದಿನ ಪೀಳಿಗೆಗೆ ಸಾಕಷ್ಟು ಅನುಕೂಲ ಆಗಲಿದೆ. ನಾವೆಲ್ಲರೂ ಸಂಘಟಿತರಾಗಿ ಹರಿಹರದ ಪೀಠವನ್ನು ರಾಜ್ಯದಲ್ಲಿ ಅತ್ಯುತ್ತಮ ಪೀಠವನ್ನಾಗಿ ಬೆಳೆಸೋಣ ಎಂದು ಮನವಿ ಮಾಡಿದರು.

ಸಮಾಜದ ಮುಖಂಡರಾದ ಬಾದಾಮಿ ಕರಿಬಸಪ್ಪ, ಎಂ. ದೊಡ್ಡಪ್ಪ, ಮಲ್ಲಿನಾಥ್‌,
ಮಂಜುನಾಥ್‌ ಪುರವಂತರ್‌, ಕಂಚೀಕೆರೆ ಸುಶೀಲಮ್ಮ, ರಶ್ಮಿ ಕುಂಕೋದ್‌, ಪಾರ್ವತಿ
ಕೊಟ್ರಗೌಡ, ಅಂದನೂರು ಮುರುಗೇಶ್‌, ಸತೀಶ್‌ ಮತ್ತೋಡು, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್‌ ಇತರರು ಇದ್ದರು. ಪ್ರಧಾನ ಕಾರ್ಯದರ್ಶಿ ಎಸ್‌.ಸಿ. ಕಾಶೀನಾಥ್‌ ಸ್ವಾಗತಿಸಿದರು. ಉಚ್ಚಂಗಿದುರ್ಗದ ಬಸವರಾಜ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next