Advertisement

ವಾಲೀಕಿ ಜಾತ್ರೆಗೆ 1.99 ಕೋಟಿ ರೂ. ಬಿಡುಗಡೆ

01:09 PM Feb 02, 2021 | Team Udayavani |

ದಾವಣಗೆರೆ: ವಾಲ್ಮೀಕಿ ಜಯಂತಿ ಅಂಗವಾಗಿ ರಾಜನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಕ್ಕೆ ಸರ್ಕಾರ 1.99 ಕೋಟಿ ರೂ. ಬಿಡುಗಡೆ ಮಾಡಿದೆ. ಅಂದಾಜು 10 ಕೋಟಿ ಹಣವನ್ನು ಮಠದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದು, ಈ ಹಣದಲ್ಲಿ ರಾಮಾಯಣ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಜಗಳೂರು ಶಾಸಕ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ
ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ತಿಳಿಸಿದರು.

Advertisement

ಜಿಲ್ಲಾಡಳಿತದ ಸಹಯೋಗದೊಂದಿಗೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ 2021ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷದಂತೆ ಈ ಬಾರಿಯೂ ವಾಲ್ಮೀಕಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಆದರೆ, ಕಳೆದ ವರ್ಷಕ್ಕಿಂತ ಈ ವರ್ಷದ ಪರಿಸ್ಥಿತಿ ಭಿನ್ನವಾಗಿದ್ದು ಕೊರೊನಾ ಮಹಾಮಾರಿ ನಮ್ಮೆಲ್ಲರ ನಡುವೆ ಇದೆ. ಹಾಗಾಗಿ ನಾವೆಲ್ಲ ಅತ್ಯಂತ ಜಾಗರೂಕರಾಗಿ, ಎಚ್ಚರಿಕೆಯಿಂದ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಜಾತ್ರೆಯು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲರಿಗೆ ಸೇರಿದ್ದಾಗಿದೆ. ಹಿಂದುಳಿದ ಪರಿಶಿಷ್ಟ ಜನಾಂಗದ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆಯಾಗಲಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಸೇರಿದಂತೆ ಉತ್ತಮ ಮೂಲ
ಸೌಕರ್ಯವನ್ನು ಒದಗಿಸಲಾಗುವುದು. ಹಿಂದಿನ ವರ್ಷದ ಜಾತ್ರೆಯ ಅನುಭವಗಳೊಂದಿಗೆ ಈ ವರ್ಷ ಯಾವುದೇ ತೊಂದರೆಯಾಗದಂತೆ ಜನತೆಯ ಸಹಕಾರದೊಂದಿಗೆ ಯಶಸ್ವಿಗೊಳಿಸಲಾಗುವುದು ಎಂದರು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿ ಒಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ರಾಮಾಯಣ ಸಂಶೋಧನಾ ಕೇಂದ್ರ ಸಂಶೋಧನಾ ಆಸಕ್ತರಿಗೆ ಮತ್ತು ರಾಮಾಯಣದ ಬಗ್ಗೆ ಅಧ್ಯಯನ ನಡೆಸುವವರಿಗೆ
ಉತ್ತಮ ಕೇಂದ್ರ ಆಗಲಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಹೊರ ರಾಜ್ಯಗಳಿಂದ ಬರುವ ಕಲಾವಿದರು ತಮ್ಮ ರಾಜ್ಯಗಳ ಕಲಾಪ್ರಕಾರಗಳನ್ನು ಪರಿಚಯಿಸಲಿದ್ದು, ಸುಮಾರು 200 ಕಲಾವಿದರು ಭಾಗವಹಿಸುತ್ತಿದ್ದು, ಅವರಿಗೆ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಆ ಕಲಾವಿದರುಗಳಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿ ಒಂದೇ ದಿನದಲ್ಲಿ ವರದಿ ಪಡೆಯುವ ವ್ಯವಸ್ಥೆ ಮಾಡಲಾಗುವುದು
ಎಂದರು.

ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಮಾತನಾಡಿ, ಜಾತ್ರಾ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನ ಬರುವುದರಿಂದ ಎಲ್ಲ ಇಲಾಖೆಗಳ ಜವಾಬ್ದಾರಿ ಇರುತ್ತದೆ. ಪ್ರಮುಖವಾಗಿ ಬೆಸ್ಕಾಂನವರು ವಿದ್ಯುತ್‌ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ರಾಜ್ಯದ ತಾಲೂಕು ಹಾಗೂ
ಜಿಲ್ಲಾ ಕೇಂದ್ರಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುವುದರಿಂದ ಸ್ವಯಂ ಸೇವಕರು, ಪೊಲೀಸ್‌ ಸಿಬ್ಬಂದಿ
ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಹಿಂದಿನ ವರ್ಷದಂತೆ ವಾಹನ ಪಾರ್ಕಿಂಗ್‌ ಗಾಗಿ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ ಪಾರ್ಕಿಂಗ್‌ಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಚಲನಚಿತ್ರ ನಟರು ಕಾರ್ಯಕ್ರಮಕ್ಕೆ ಬರುವುದರಿಂದ ಸಮರ್ಪಕವಾಗಿ
ಬ್ಯಾರಿಕೇಡ್‌ ವ್ಯವಸ್ಥೆ, ಪ್ರಸಾದ ಪೂರೈಸುವ ಸ್ಥಳದಲ್ಲಿ ಜನಜಂಗುಳಿ ತಡೆಯಲು ಸಾಕಷ್ಟು ಬ್ಯಾರಿಕೇಡ್‌ ಹಾಕಿ ನಿಯಂತ್ರಿಸಲಾಗುವುದು ಎಂದರು.

ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಜಾತ್ಯತೀತವಾಗಿದ್ದು, ದೇಶದಾದ್ಯಂತ ಪ್ರಸಾರವಾಗಬೇಕಿದೆ. ಈ ಸಂಬಂಧ ವಾರ್ತಾ ಇಲಾಖೆಯವರು ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಹಕರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಪದ್ಮಾ ಬಸವಂತಪ್ಪ, ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಸಮಾಜದ ಮುಖಂಡರಾದ ಉಪನ್ಯಾಸಕ ರಾಮಚಂದ್ರಪ್ಪ, ವಕೀಲರಾದ ನಾಗೇಂದ್ರಪ್ಪ, ಟಿ. ಓಬಳಪ್ಪ, ಹೊದಿಗೆರೆ ರಮೇಶ್‌, ಈಶ್ವರ್‌,
ಪಾಲಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ, ಜಿ.ಪಂ. ಉಪಕಾರ್ಯದರ್ಶಿ ಆನಂದ್‌, ಡಿಎಚ್‌ಒ ಡಾ| ನಾಗರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ವಿಜಯಕುಮಾರ್‌, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಮಂಜಾನಾಯ್ಕ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಓದಿ : ತುಮಕೂರು: ಮಸ್ಕಲ್ ಗ್ರಾಮದಲ್ಲಿ ಜೆಲಿಟಿನ್ ಕಡ್ಡಿ ಸ್ಪೋಟ; ಮನೆ ಧ್ವಂಸ

Advertisement

Udayavani is now on Telegram. Click here to join our channel and stay updated with the latest news.

Next