Advertisement

ಕೊರೊನಾ ಕರ್ಫ್ಯೂ; ಡೇ-1 ಯಶಸ್ವಿ

05:35 PM Apr 25, 2021 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಹೊರಸಿದ ವಾರಾಂತ್ಯ ಕರ್ಫ್ಯೂಗೆ ಜಿಲ್ಲೆಯ ಜನತೆ ಸಂಪೂರ್ಣ ಬೆಂಬಲ ನೀಡಿದ್ದು, ಶನಿವಾರ ಇಡೀ ದಿನ ಜಿಲ್ಲೆ ಸ್ತಬ್ಧವಾಗಿತ್ತು. ಬಸ್‌ ಸಂಚಾರ, ಕೃಷಿ ಪೂರಕ ಚಟುವಟಿಕೆ ಸೇರಿದಂತೆ ಕೆಲವು ಸೇವೆಗಳಿಗೆ ವಿನಾಯಿತಿ ನೀಡಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದರೂ ಜನರು ಮನೆಯಿಂದ ಹೊರಗೆ ಬರಲಿಲ್ಲ, ಹಾಗಾಗಿ ವಾರಾಂತ್ಯದ ಕರ್ಫ್ಯೂ ಜನತಾ ಕರ್ಫ್ಯೂ ಆಗಿ (ಲಾಕ್‌ಡೌನ್‌) ಮಾರ್ಪಟ್ಟಿತ್ತು.

Advertisement

ತುರ್ತು ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಪೆಟ್ರೊಲ್‌ ಬಂಕ್‌ಗಳು ಮಾತ್ರ ತೆರೆದಿದ್ದವು. ಆಟೋ, ಖಾಸಗಿ ಬಸ್‌ ಸಂಚಾರ ಸಹ ಸಂಪೂರ್ಣ ಬಂದ್‌ ಆಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಸೇವೆ ಸಿದ್ಧವಾಗಿದ್ದವು. ಆದರೆ ಸಂಚಾರಕ್ಕೆ ಪ್ರಯಾಣಿಕರೇ ಇರಲಿಲ್ಲ. ಹೀಗಾಗಿ ಬಸ್‌ ಸಂಚಾರವೂ ವಿರಳವಾಗಿತ್ತು. ಕಳೆದ ವರ್ಷ ಜಾರಿಯಾಗಿದ್ದ ಜನತಾ ಕರ್ಫ್ಯೂ ಬಗ್ಗೆ ಅನುಭವ ಹೊಂದಿದ್ದ ಜನತೆ, ವಾರಾಂತ್ಯದ ಕರ್ಫ್ಯೂವನ್ನೂ ಜನತಾ ಕರ್ಫ್ಯೂ ಥರ ಪರಿಗಣಿಸಿ ಮನೆಯಿಂದ ಹೊರಬರುವ ವಿಚಾರ ಮಾಡಲಿಲ್ಲ. ಇನ್ನು ರಸ್ತೆಯಲ್ಲಿ ಸುತ್ತಾಡುವ ರೂಢಿ ಇರುವ ಯುವ ಸಮೂಹ ಕಳೆದ ವರ್ಷ ಪೊಲೀಸರು ಬೀಸಿದ ಲಾಠಿ ರುಚಿಯನ್ನು ನೆನಪಿಸಿಕೊಂಡು ರಸ್ತೆಗಿಳಿಯುವ ಸಾಹಸ ಮಾಡಲಿಲ್ಲ.

ತರಕಾರಿಗೆ ಮುಗಿಬಿದ್ದರು: ಕರ್ಫ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಜನರು ಮುಗಿ ಬಿದ್ದು ಹಾಲು, ತರಕಾರಿ ಖರೀದಿಸಿದರು. ಕೆಲವರು ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆಯೇ ಹಾಲು, ತರಕಾರಿ ಖರೀದಿಸಿದ್ದರು. ಬೆಳಿಗ್ಗೆಯೂ ಜನರು ಮುಗಿ ಬಿದ್ದಿದ್ದರಿಂದ ಹಾಲು, ತರಕಾರಿ ಕೊರತೆ ಸಂಭವಿಸಿತು.

ಇದೇ ಸಂದರ್ಭ ಬಳಸಿಕೊಂಡು ಕೆಲವು ಅಂಗಡಿಕಾರರು ದರ ದುಬಾರಿ ಮಾಡಿ ತರಕಾರಿ ಮಾರಾಟ ಮಾಡಿದರು. ಅಗತ್ಯ ವಸ್ತುಗಳಲ್ಲೊಂದಾದ ತರಕಾರಿಯನ್ನು ಹೋಲ್‌ ಸೇಲ್‌ನಲ್ಲಿ ಖರೀದಿಸಲು ಚಿಲ್ಲರೆ ವ್ಯಾಪಾರಿಗಳು ಎಪಿಎಂಸಿಗೆ ಬಂದಿದ್ದರು. ಆದರೆ ಎಪಿಎಂಸಿ ಅಧಿಕಾರಿಗಳು ಆವರಣದಲ್ಲಿ ವ್ಯಾಪಾರ ಮಾಡಲು ಬಿಡದೇ ಇರುವುದರಿಂದ ವ್ಯಾಪಾರಸ್ಥರಿಗೆ ತರಕಾರಿ ಸಿಗಲಿಲ್ಲ.

ಇದರಿಂದ ಗ್ರಾಹಕರಿಗೆ ತಾಜಾ ತರಕಾರಿ ಕೈಗೆ ಸಿಗದಾಯಿತು. ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರುವವರ ಸಂಚಾರಕ್ಕೂ ಪೊಲೀಸರು ಬ್ರೇಕ್‌ ಹಾಕಿದ್ದರಿಂದ ಜನರು ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಸಿಗದೆ ಪರದಾಡಿದರು. ಇನ್ನು ಕಿರಾಣಿ ಅಂಗಡಿಗಳು ಸಹ ಬೆಳಿಗ್ಗೆ 10 ಗಂಟೆ ಬಳಿಕ ಸಂಪೂರ್ಣ ಬಂದ್‌ ಆದವು.

Advertisement

ರಸ್ತೆಗಳೆಲ್ಲ ಭಣ ಭಣ: ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಅವಧಿ ಮುಗಿಯುತ್ತಿದ್ದಂತೆ ಬೆಳಿಗ್ಗೆ 10 ಗಂಟೆ ಬಳಿಕ ಪೊಲೀಸರು ರಸ್ತೆಯಲ್ಲಿ ಸಂಚರಿಸುವವರನ್ನು ತಡೆದು ವಿಚಾರಣೆ ಮಾಡಲು ಶುರು ಮಾಡಿದರು. ಅಪರಾಹ್ನ 11 ಗಂಟೆ ಹೊತ್ತಿಗೆ ರಸ್ತೆಯಲ್ಲಿ ಜನ ಸಂಚಾರ, ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಆಯಿತು. ಮಹಾನಗರ ವ್ಯಾಪ್ತಿಯ ಜನದಟ್ಟಣೆಯ ಪ್ರದೇಶಗಳಾದ ಬಸ್‌ ನಿಲ್ದಾಣ, ರೇಲ್ವೆ ನಿಲ್ದಾಣ, ಮಂಡಿಪೇಟೆ, ಚೌಕಿಪೇಟೆ, ಕಾಯಿಪೇಟೆ, ಚಾಮರಾಜಪೇಟೆ, ನರಸಿಂಹರಾಜ ರಸ್ತೆ, ಕಾಳಿಕಾಂಬಾದೇವಿ ರಸ್ತೆ, ವಿಜಯ ರಸ್ತೆ ಸೇರಿದಂತೆ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪ್ರದೇಶಗಳು, ರಸ್ತೆಗಳು ಜನ, ವಾಹನ ಸಂಚಾರವಿಲ್ಲದೇ ಬಿಕೋ ಎಂದವು. ಕರ್ಫ್ಯೂನಿಂದಾಗಿ ಜನರು ಹೊರಗೆ ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಸ್ವಯಂ ಬಂಧಿಯಾದರು.

ಕೆಲವರು ಮನೆಯಲ್ಲಿ ಪೇಪರ್‌ ಓದುತ್ತ, ಟಿವಿ ನೋಡುತ್ತ, ಮನೆಯಲ್ಲಿ ಹರಟೆ, ಚರ್ಚೆ ಮಾಡುತ್ತ ಕಾಲ ಕಳೆದರು. ಒಟ್ಟಾರೆ ವಾರಾಂತ್ಯ ಕರ್ಫ್ಯೂ ಮೊದಲ ದಿನ ಸಂಪೂರ್ಣ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next