Advertisement

ಸ್ವಾರ್ಥ ತ್ಯಜಿಸಿ ಕೊಡುಗೈ ದಾನಿಗಳಾಗಿ

06:25 PM Apr 09, 2021 | Team Udayavani |

ದಾವಣಗೆರೆ: ಬದುಕಿನಲ್ಲಿ ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದ್ದು, ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ ಎಂದು ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಮತ್ತು ಶಿಕ್ಷಣ ತಜ್ಞ ಡಾ| ಗುರುರಾಜ ಕರಜಗಿ ಹೇಳಿದರು. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಎಂಟನೇ ಘಟಿಕೋತ್ಸವದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

Advertisement

ಕೊಡಲು ನಮ್ಮ ಬಳಿ ಏನೂ ಇಲ್ಲದೆ ಇದ್ದರೂ ಚಿಂತೆಯಿಲ್ಲ. ಆದರೆ ನೀಡುವ ಮನಸ್ಸು ಇದ್ದರೆ ಸಾಕು. ಕೊಡಲು ಇಂಥದ್ದೇ ಬೇಕೆಂದು ಹೃದಯ ಬೇಡುವುದಿಲ್ಲ. ಕೆಲವರಿಗೆ ಸಮಯ ನೀಡಿದರೂ ಸಾಕು. ಮತ್ತೆ ಕೆಲವರಿಗೆ ಒಳ್ಳೆಯ ಮಾತು, ಪ್ರೀತಿ ತೋರಿಸಿದರೂ ಸಾಕಾಗುತ್ತದೆ ಎಂದರು. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಮದರ್‌ ತೆರೇಸಾ, ಮಾರ್ಟಿನ್‌ ಲೂಥರ್‌ ಕಿಂಗ್‌ ಅವರೆಲ್ಲ ಎಷ್ಟು ವರ್ಷವಾದರೂ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಷ್ಟೇ ಅಲ್ಲ, ರಾಮ, ಕೃಷ್ಣ, ಶಂಕರಾಚಾರ್ಯ ಮೊದಲಾದವರು ಶತ ಶತಮಾನ ಕಳೆದರೂ ಎಲ್ಲರ ಬಾಯಿಯಲ್ಲಿ, ಹದಯದಲ್ಲಿ ನೆಲೆಸಿದ್ದಾರೆ. ಇದಕ್ಕೆ ಅವರು ಸಮಾಜಕ್ಕೆ ನೀಡಿದ ಕೊಡುಗೆಯೇ ಕಾರಣ. ಮನುಷ್ಯ ಸತ್ತಾಗ ಏನು ಗಳಿಸಿದ ಎಂದು ವಿಚಾರಿಸುವುದಿಲ್ಲ. ಸಮಾಜಕ್ಕೆ ಏನು ಕೊಟ್ಟ ಎಂಬುದನ್ನು ಮಾತ್ರ ಅವಲೋಕಿಸುತ್ತಾರೆ ಎಂದರು. ನಾನು ನನ್ನದು ಎಂಬ ಸ್ವಾರ್ಥ ಬಿಟ್ಟು ನಮ್ಮದು, ನಮ್ಮವರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಆಗ ಪ್ರೀತಿ, ಆತ್ಮೀಯತೆಯಿಂದ ಸಂಬಂಧ ಹತ್ತಿರವಾಗುತ್ತದೆ. ನಾವು ನೀಡುವ ವಿಚಾರ ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ್ದಾಗಿದೆ. ಹೃದಯ ಮಿಡಿತಕ್ಕೆ ಮೆದುಳು ಸ್ಪಂದಿಸುತ್ತದೆ. ಒಳ್ಳೆಯ ವಿಚಾರ ಕೊಟ್ಟಾಗ ಹೃದಯ ಹಾಗೂ ಮೆದುಳು ಎರಡೂ ನೆಮ್ಮದಿಯಾಗಿರುತ್ತವೆ. ನೆಮ್ಮದಿ ಇದ್ದಾಗ ಆರೋಗ್ಯ ಸುಧಾರಿಸುತ್ತದೆ. ಆರೋಗ್ಯಪೂರ್ಣ ದೇಹಕ್ಕೆ ಆರೋಗ್ಯವಂತ ಮನಸ್ಸು ಮುಖ್ಯ ಎಂಬುದು ಭಾವನಾತ್ಮಕ ಕಲ್ಪನೆಯ ವಿಚಾರವಲ್ಲ. ವೈಜ್ಞಾನಿಕವಾಗಿಯೂ ದೃಢಪಟ್ಟಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾಲಯ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗಿರದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹತ್ತು ಕುಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದೆ ಎಂದರು. ಮೌಲ್ಯಮಾಪನ ಕುಲಸಚಿವೆ ಪ್ರೊ| ಅನಿತಾ ಎಚ್‌. ಎಸ್‌., ಕುಲಸಚಿವೆ ಪ್ರೊ| ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಪ್ರಿಯಾಂಕ ಡಿ., ಪ್ರೊ|ಜೆ.ಕೆ .ರಾಜು,  ಕೆ.ಬಿ. ರಂಗಪ್ಪ, ಸಿಂಡಿಕೇಟ್‌ ಸದಸ್ಯರು ಮತ್ತು ವಿದ್ಯಾ ವಿಷಯಕ ಪರಿಷತ್‌ ಸದಸ್ಯರು, ವಿವಿಧ ನಿಕಾಯದ ಡೀನ್‌ಗಳು, ವಿಭಾಗದ ಅಧ್ಯಕ್ಷರು, ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next