Advertisement

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

09:04 PM May 03, 2024 | Team Udayavani |

ಮಡಿಕೇರಿ: ಅತ್ತೆಯನ್ನು ಸೊಸೆಯೇ ಹತ್ಯೆ ಮಾಡಿದ ನಿಗೂಢ ರಹಸ್ಯಕಾರಿ ಸಿನಿಮಾ ಮಾದರಿ ಘಟನೆ ಮಡಿಕೇರಿಯಲ್ಲಿ ನಡೆದಿದ್ದು, ಸಹಜ ಸಾವು ಎಂದು ನಂಬಲಾಗಿದ್ದ ಪ್ರಕರಣ ತಿರುವು ಪಡೆದುಕೊಂಡು ಕೊಲೆ ಎಂಬುದು ಬಯಲಾಗಿ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಡಿಕೇರಿ ತಾಲೂಕಿನ ಮರಗೋಡಿನ ನಿವಾಸಿ ಪೂವಮ್ಮ (73) ಎಂಬವರನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಆರೋಪದಲ್ಲಿ ಸೊಸೆ ಬಿಂದು (26) ಎಂಬಾಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಪೂವಮ್ಮ ಅವರ ಪುತ್ರ ಶಿಕ್ಷಕರಾಗಿರುವ ಪ್ರಸನ್ನ, ಪತ್ನಿ ಬಿಂದು ಮತ್ತು ಒಂದು ವರ್ಷದ ಪುತ್ರಿಯೊಂದಿಗೆ ವಾಸವಾಗಿದ್ದರು. ಅತ್ತೆ ಮತ್ತು ಸೊಸೆ ನಡುವೆ ತೀವ್ರ ಮನಸ್ತಾಪ ಇತ್ತು ಎಂದು ತಿಳಿದು ಬಂದಿದೆ.

ಏ.15 ರಂದು ಪ್ರಸನ್ನ ಮೌಲ್ಯಮಾಪನಕ್ಕಾಗಿ ಮಡಿಕೇರಿಗೆ ತೆರಳಿದ್ದ ಸಂದರ್ಭ ಪೂವಮ್ಮ ಕುಸಿದು ಬಿದ್ದಿದ್ದಾರೆ ಎಂದು ಬಿಂದು ಕರೆ ಮಾಡಿ ತಿಳಿಸಿದ್ದು, ಬಂದು ನೋಡುವ ವೇಳೆ ಮೃತಪಟ್ಟಿದ್ದರು. ಬಳಿಕ ಸಹಜ ಸಾವು ಎಂದು ಚಿತೆಯಲ್ಲಿರಿಸಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಪೂವಮ್ಮ ಹೃದ್ರೋಗಿಯಾಗಿದ್ದ ಕಾರಣ ಹೆಚ್ಚಿನ ಅನುಮಾನ ಬಂದಿರಲಿಲ್ಲ. ಅಂತ್ಯಸಂಸ್ಕಾರದ ಬಳಿಕ ಊಹಾಪೋಹಗಳು ಕೇಳಿ ಬರತೊಡಗಿದವು.

Advertisement

ಅನುಮಾನ ಮೂಡಿದ ಬಳಿಕ ಪ್ರಸನ್ನ ಅವರು ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲಾಗಿದ್ದ ರಕ್ತದ ಕಲೆ ಗಳು ಕಂಡು ಅನುಮಾನ ಮತ್ತಷ್ಟು ಹೆಚ್ಚಾಯಿತು. ಬಿಂದು ನಡವಳಿಕೆಯಲ್ಲೂ ಭಾರೀ ಬದಲಾವಣೆ ಪುಷ್ಠಿ ನೀಡಿತು.

ಮಾಡಿದ್ದೇನು?

ಬೆಳಗ್ಗೆ ತಿಂಡಿಗೆ ಬಂದಾಗ ವಾಗ್ವಾದ ನಡೆದಿದ್ದು, ಕೈಯಲ್ಲಿದ್ದ ಮೊಬೈಲ್‌ನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಬಿಂದು ಹೊಡೆದ ಪರಿಣಾಮ ಹಾಸಿಗೆ ಮೇಲೆ ಕುಸಿದು ಬಿದ್ದ ಪೂವಮ್ಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮೃತಪಟ್ಟಿದ್ದು ಅರಿತು ಇಳಿದ ರಕ್ತ ಸ್ವಚ್ಛ ಮಾಡಿ ಹಾಸಿಗೆ ಮೇಲಿದ್ದ ಬಟ್ಟೆಗಳನ್ನೂ ಬದಲಾಯಿಸಿ, ಧರಿಸಿದ್ದ ಬಟ್ಟೆಯನ್ನೂ ಬದಲಾಯಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಳು ಎಂದು ಪ್ರಸನ್ನ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ದಿನ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.

ಪೊಲೀಸರು ವಿಚಾರಣೆ ನಡೆಸಿದ್ದು, ತಪ್ಪೊಪ್ಪಿಕೊಂಡಿರುವ ಬಿಂದುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next