Advertisement

ದತ್ತಜಯಂತಿ : ಚಿಕ್ಕಮಗಳೂರಿನಲ್ಲಿ ಶಾಂತಿಯುತವಾಗಿ ನಡೆದ ಬೃಹತ್ ಶೋಭಾಯಾತ್ರೆ

11:01 PM Dec 07, 2022 | Team Udayavani |

ಚಿಕ್ಕಮಗಳೂರು: ಕಣ್ಣುಹಾಸಿದಷ್ಟೂ ಜನಸಾಗರ, ಕೇಸರಿಧ್ವಜ, ಕಲಾತಂಡಗಳ ವೈಭವ, ಜಗಮಗಿಸುತ್ತಿದ್ದ ವಿದ್ಯುತ್ ದೀಪಾಲಂಕಾರ, ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು, ಕುಣಿದು ಕುಪ್ಪಳಿಸಿದ ಮಕ್ಕಳು ಮಹಿಳೆಯರು ಇದು ನಗರದಲ್ಲಿ ನಡೆದ ಬೃಹತ್ ಶೋಭಾಯಾತ್ರೆಯ ದೃಶ್ಯಗಳು.

Advertisement

ದತ್ತಜಯಂತಿ ಎರಡನೇ ದಿನವಾದ ಬುಧವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಹಮ್ಮಿಕೊಂಡಿ ದ್ದ ಶೋಭಾಯಾತ್ರೆಗೆ ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್‌ಕುಮಾರ್ ಚಾಲನೆ ನೀಡಿದರು.

ಅಲ್ಲಿಂದ ಕೆಇಬಿ ರಸ್ತೆಯ ಮೂಲಕ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ರಾತ್ರಿವೇಳೆಗೆ ಆಜಾದ್‌ಪಾರ್ಕ್ ವೃತ್ತ ತಲುಪಿತು. ಪುಷ್ಪಾಲಂಕೃತಗೊಂಡ ತೆರದವಾಹನ ದಲ್ಲಿ ದತ್ತಾತ್ರೇಯಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ರಾಜ್ಯದ ವಿವಿಧ ಮೂಲೆಗಳಿಂದ ಶೋಭಾಯಾತ್ರೆಗೆ ಜನರು ಆಗಮಿಸಿದ್ದು, ಜನಸಾಗರದಿಂದ ಕೂಡಿತ್ತು. ಯಾತ್ರೆ ಸಾಗುತ್ತಿದ್ದರೇ ರಾಜ್ಯದ ವಿವಿಧ ಕಡೆಗಳಿಂದ ಕರೆಸಲಾಗಿದ್ದ ಕಲಾತಂಡಗಳು ಯಾತ್ರೆಯ ವೈಭವವನ್ನು ಹೆಚ್ಚಿಸಿದವು. ಚಿಕ್ಕಮಗಳೂರು ಚಂದ್ರ ನೇತೃತ್ವ ನಾದಸ್ವರವನ್ನು ವಿವಿಧ ಕಲಾತಂಡಗಳು ಹಿಂಬಾಲಿಸಿದ್ದು, ತಿಪಟೂರಿನ ನೆಲ್ಲಿಕೆರೆ ಮದಕರಿನಾಯಕ ಕಲಾಸಂಘದ ಚೋಮನಕುಣಿತ, ಮರಗಾಲು ಕುಣಿತ, ಶಿರಾ ತಾಲ್ಲೂಕು ಹುಣಸೆಹಳ್ಳಿಯ ರಾಜಣ್ಣ ನೇತೃತ್ವದ ಗೊರವರಕುಣಿತ, ಬೆಂಗಳೂರು ಮಾಗಡಿಯ ಅಜೇಯ್ ಮುಂದಾಳತ್ವದ ಪೂಜಾಕುಣಿತ, ಚಿತ್ರ ದುರ್ಗ ಜಿಲ್ಲೆಯ ಕೊಳಹಾಳು ಗ್ರಾಮದ ಪಟಕುಣಿತ, ಇದೇ ಜಿಲ್ಲೆಯ ಬೆಣ್ಣೆಹಳ್ಳಿಯ ಕೊಳ್ಳಿಕುಣಿತ, ಷಣ್ಮುಕಪ್ಪ ತಂಡದ ಸೈನಿಕರದಳ, ರವಿ ನೇತೃತ್ವದ ಕತ್ತಿವೀರಮಕ್ಕಳ ಕುಣಿತ, ಅಶೋಕ ಮತ್ತು ಉಪೇಂದ್ರ ನಾಯಕತ್ವದ ಭರ್ಜಿ ಕುಣಿತ, ಹುಲ್ಲೂರಿನ ದಾಸಬೇಡರ ಪಡೆ, ಚಿತ್ರದುರ್ಗ ಗಂಜಿಹಟ್ಟಿಯ ಚಂದ್ರ ಕುಣಿತ, ಮೈಸೂರಿನ ಬಣ್ಣಾರಿ ತಂಡ ಗಳು ಶೋಭಾಯಾತ್ರೆಯನ್ನು ಕಳೆಗಟ್ಟುವಂತೆ ಮಾಡಿದವು.

ರಾಜೇಂದ್ರ, ವಿನೋದ್ ಮತ್ತು ಶಿವು ಅವರ ವೀರಭದ್ರನ ಮತ್ತು ಬೆಳ್ತಂಗಡಿಯ ಗೊಂಬೆ ಕುಣಿತ ಸಾರ್ವಜನಿಕರ ಗಮನ ಸೆಳೆದವು. ಕುಳ್ಳನ ವೇಷಧಾರಿ ಮರಿಬಜರಂಗಿಗಳ ಮನ ಸೆಳೆದರೆ, ಸಾರ್ವಜನಿಕರು ಈ ವ್ಯಕ್ತಿಯ ಪಕ್ಕದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಿತ್ರದುರ್ಗದ ಕೋಲಹಾಳಿನ ಮಹಿಳೆಯರ ವೀರಗಾಸೆ ಕುಣಿತ, ಚಿತ್ರದುರ್ಗದ ಉರುವೆ ವಾದ್ಯದ ಭೂತನಕುಣಿತಗಳು ಮೆರಗು ಹೆಚ್ಚಿಸಿದವು.

Advertisement

ಶಿವಾಜಿ ಮಹಾರಾಜ್, ಆಂಜನೇಯನ ಬೃಹತ್ ಭಗವಾಧ್ವಜಗಳು ಹಾರಾಡಿದವು. ಡಿಜೆಸೌಂಡಿಗೆ ಯುವಕರು, ಯುವತಿಯರು, ಮಹಿಳೆಯರು ಹುಚ್ಚೆದ್ದು ಕುಣಿದರು. ನಾಸಿಕ್‌ಡೋಲ್ ವಾದನಕ್ಕೆ ಜನರು ಕುಣಿಯುತ್ತಿದ್ದರೆ, ಸಣ್ಣ ಮಕ್ಕಳು ಚಿಕ್ಕಭಗವಾಧ್ವಜಗಳನ್ನು ಹಿಡಿದು ಪುಟ್ಟಪುಟ್ಟ ಹೆಜ್ಜೆಹಾಕಿ ಕುಣಿಯುತ್ತಿದ್ದು ನೋಡುಗರ ಮನಸೆಳೆಯಿತು. ಜೈ ಶ್ರೀರಾಮ್, ಶಿವಾಜಿಮಹಾರಾಜ್ ಎಂದು ಡಿಜೆಯಲ್ಲಿ ಕೇಳಿಸುತ್ತಿದ್ದಂತೆ ಕುಣಿಯುತ್ತಿದ್ದ ಯುವಕರು ಉತ್ಸಹ ಹೆಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತೆರದವಾಹನದಲ್ಲಿ ಭಗವಾಧ್ವಜಗಳನ್ನು ತರುತ್ತಿದ್ದಂತೆ ಧ್ವಜಗಳನ್ನು ಕೈಯಲ್ಲಿ ಹಿಡಿದು ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಲು ಧ್ವಜಕ್ಕಾಗಿ ಯುವಕರು, ಯುವತಿಯರು, ಬಾಲಕರು ಮುಗಿಬಿದ್ದರು. ಅವುಗಳನ್ನು ಹಿಡಿದು ಮೆರಣಿಗೆ ಯಲ್ಲಿ ಅಮಿತೋತ್ಸವದಿಂದ ಹೆಜ್ಜೆಹಾಕಿದರು. ಮೆರವಣಿಗೆಯಲ್ಲಿ ಯುವರತ್ನ ಪುನೀತ್ ರಾಜ್‌ಕುಮಾರ್ ಭಾವಚಿತ್ರ ವನ್ನು ಹಿಡಿದು ಅಭಿಮಾನಿಗಳು ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಮೆರವಣಿಗೆ ಸಾಗುವ ಮಹಾತ್ಮಗಾಂಧಿರಸ್ತೆಯಲ್ಲಿ ನೀರಿನಿಂದ ರಸ್ತೆಯನ್ನು ಶುಭ್ರಗೊಳಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಲಾಗಿತ್ತು.

ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ದತ್ತಾತ್ರೇಯ ಚಿತ್ರಪಟವನ್ನಿಟ್ಟು ಪೂಜಿಸಲಾಗಿತ್ತು. ಕಟ್ಟಡ ಗಳನ್ನು ಏರಿದ ಜನರು ಮೆರವಣಿಗೆ ವೈಭವವನ್ನು ಸವಿದರು. ಹನುಮಂತಪ್ಪ ವೃತ್ತಕ್ಕೆ ಯಾತ್ರೆ ಆಗಮಿಸುತ್ತಿದ್ದಂತೆ ಮಬ್ಬು ಕತ್ತಲು ಆವರಿಸಿದ್ದು. ವಿದ್ಯುತ್ ದೀಪಗಳಿಂದ ಮೆರವಣಿಗೆ ಕಂಗೊಳಸಿತು. ಪ್ರತ್ಯೇಕ ಎರಡು ಜಿಡಿಗಳನ್ನು ವ್ಯವಸ್ಥೆ ಕಲ್ಪಿಸಿದ್ದು, ಯುವಕರು ತಂಡ ಒಂದು ಡಿಜೆ ಹಿಂಭಾಗದಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದರೇ, ಮತ್ತೊಂದು ಡಿ.ಜೆ ಹಿಂಭಾಗದಲ್ಲಿ ಮಹಿಳೆಯರ ಗುಂಪು ಕಣಿಯುತ್ತಿದ್ದದು ಕಂಡು ಬಂತು. ರಾತ್ರಿವೇಳೆಗೆ ಯಾತ್ರೆ ಶಾಂತಿಯುತವಾಗಿ ಆಜಾದ್‌ಪಾರ್ಕ್ ವೃತ್ತ ತಲುಪಿತು. ಅಲ್ಲಿ ಹಿಂದೂ ಸಂಘಟನೆಯ ಮುಖಂಡರು ಬಹಿರಂಗ ಸಭೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next