Advertisement

ದರ್ಶನ್‌ ಈಗ ಒಡೆಯ

11:28 AM Aug 04, 2018 | Team Udayavani |

ದರ್ಶನ್‌ ಅಭಿನಯದ “ಒಡೆಯರ್‌’ ಚಿತ್ರಕ್ಕೆ ಆಗಸ್ಟ್‌ 16 ರಂದು ಮೈಸೂರಿನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ ಎಂಬ ಬಗ್ಗೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಅದೆಲ್ಲವೂ ನಿಜ. ಆದರೆ, ಈಗ ಹೊಸ ಸುದ್ದಿಯೆಂದರೆ, ಚಿತ್ರದ ಶೀರ್ಷಿಕೆ ಬದಲಾಗಿದೆ. ಹೌದು, “ಒಡೆಯರ್‌’ ಬದಲಾಗಿ, “ಒಡೆಯ’ ಎಂದು ನಾಮಕರಣ ಮಾಡಲಾಗಿದೆ. ಯಾವಾಗ “ಒಡೆಯರ್‌’ ಚಿತ್ರಕ್ಕೆ ಮುಹೂರ್ತ ಫಿಕ್ಸ್‌ ಆಯ್ತೋ, ಅಂದಿನಿಂದಲೇ ಚಿತ್ರದ ಶೀರ್ಷಿಕೆ ವಿರುದ್ಧ ಜೋರಾದ ಧ್ವನಿ ಕೇಳಿಬಂತು.

Advertisement

ಯಾವ ಕಾರಣಕ್ಕೂ “ಒಡೆಯರ್‌’ ಶೀರ್ಷಿಕೆ ಇಡಬಾರದು ಎಂದು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಪೊಲೀಸ್‌ ಠಾಣೆಗೆ ದೂರು ಕೂಡಾ ನೀಡಿದವು. ಇದಕ್ಕೆ ಸಂಬಂಧಿಸಿದಂತೆ, ಸ್ವತಃ  ರಾಜಮಾತೆ ಪ್ರಮೋದಾ ದೇವಿಯರು ಕೂಡ “ಒಡೆಯರ್‌’ ಶೀರ್ಷಿಕೆ ಇಡುವುದಕ್ಕೆ ತಮ್ಮದೇನೂ ತಕರಾರಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ, ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರು, “ಒಡೆಯರ್‌’ ಚಿತ್ರದ ಶೀರ್ಷಿಕೆ ಬದಲು “ಒಡೆಯ’ ಎಂದು ಇಟ್ಟಿದ್ದಾರೆ.

ಅಲ್ಲಿಗೆ ಶೀರ್ಷಿಕೆ ವಿವಾದ ಈಗ ತಣ್ಣಗಾದಂತಾಗಿದೆ. ಅಂದಹಾಗೆ, ಇದು  “ವೀರಂ’ ಚಿತ್ರದ ರೀಮೇಕ್‌ ಆಗಿದ್ದು, ಎಂ.ಡಿ.ಶ್ರೀಧರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆಯಾಗಿಲ್ಲ. ದರ್ಶನ್‌ಗೆ ಸರಿಯಾದ ನಾಯಕಿಯ ಹುಡುಕಾಟದಲ್ಲಿ ನಿರ್ದೇಶಕರು ಬಿಜಿಯಾಗಿದ್ದು, ಆದಷ್ಟು ಕನ್ನಡದ ನಾಯಕಿಯನ್ನೇ ಆಯ್ಕೆ ಮಾಡಲು ಜೋರು ಹುಡುಕಾಟ ನಡೆಸಿದ್ದಾರೆ. ಈಗಾಗಲೇ ಕೆಲ ಪಾತ್ರಗಳಿಗೆ ಉಳಿದ ಕಲಾವಿದರ ಜೊತೆ ಮಾತನಾಡಿರುವ ನಿರ್ದೇಶಕರು, ಇಷ್ಟರಲ್ಲೇ ದೊಡ್ಡ ತಾರಾಬಳಗದ ಆಯ್ಕೆಯನ್ನೂ ಅಂತಿಮಗೊಳಿಸಲಿದ್ದಾರೆ.

ಇನ್ನು, ನಿರ್ದೇಶಕ ಎಂ.ಡಿ.ಶ್ರೀಧರ್‌ ಅವರು ಈ ಹಿಂದೆ ದರ್ಶನ್‌ ಅಭಿನಯದಲ್ಲಿ “ಪೊರ್ಕಿ’ ಮತ್ತು “ಬುಲ್‌ಬುಲ್‌’ ಚಿತ್ರವನ್ನು ನಿರ್ದೇಶಿಸಿದ್ದರು. ಆ ಎರಡು ಚಿತ್ರಗಳು ಭರ್ಜರಿ ಯಶಸ್ಸು ಪಡೆದಿದ್ದವು. ಈಗ ನಿರ್ದೇಶನದ ಮೂರನೇ ಚಿತ್ರ “ಒಡೆಯ’ ತಯಾರಿ ನಡೆಸಿದ್ದಾರೆ. ಆಗಸ್ಟ್‌ 16 ರಂದು ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ಹುಟ್ಟುಹಬ್ಬವಿದೆ. ಅಂದು “ಒಡೆಯ’ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಯಡಿಯೂರಪ್ಪ , ಅಂಬರೀಷ್‌ ಅವರು ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next