Advertisement

ಉತ್ತರಾಖಂಡದಲ್ಲಿ ದರ್ಶನ!

09:56 AM Jan 31, 2020 | Lakshmi GovindaRaj |

ದರ್ಶನ್‌ ಇದೀಗ ಉತ್ತರಾಖಂಡದಲ್ಲಿದ್ದಾರೆ…! ಹಾಗಂತ, ಅವರು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಉತ್ತರಾಖಂಡದಲ್ಲಿ ಬೀಡುಬಿಟ್ಟಿದ್ದಾರೆ ಅಂದುಕೊಳ್ಳುವಂತಿಲ್ಲ. “ರಾಬರ್ಟ್‌’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿರುವುದು ಗೊತ್ತೇ ಇದೆ. ಹಾಗಾಗಿ, ಅವರೀಗ ಬ್ರೇಕ್‌ ತೆಗೆದುಕೊಂಡಿದ್ದಾರೆ. ಹೌದು. ಈ ಬ್ರೇಕ್‌ನಲ್ಲಿ ಅವರು ಉತ್ತರಾಖಂಡದಲ್ಲಿದ್ದಾರೆ. ಅಷ್ಟಕ್ಕೂ ಅವರು ಅಲ್ಲಿಗೇಕೆ ಹೋದರು ಎಂಬ ಪ್ರಶ್ನೆಗೆ ಉತ್ತರ, ವೈವಿಧ್ಯಮಯ ಪ್ರಾಣಿ, ಪಕ್ಷಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಹೋಗಿರುವುದು.

Advertisement

ಸದ್ಯಕ್ಕೆ ದರ್ಶನ್‌ ತಮ್ಮ ಗೆಳೆಯರ ಜೊತೆಗೂಡಿ ಉತ್ತರಾಖಂಡದತ್ತ ಪ್ರಯಾಣ ಬೆಳೆಸಿದ್ದಾರೆ. ದರ್ಶನ್‌ಗೆ ಮೊದಲಿನಿಂದಲೂ ಪ್ರಾಣಿ, ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಬಿಡುವು ಮಾಡಿಕೊಂಡು ಆಗಾಗ ಅವರು ದಟ್ಟ ಕಾಡಿನತ್ತ ಪಯಣ ಬೆಳೆಸಿ, ತಮ್ಮ ಕ್ಯಾಮೆರಾದಲ್ಲಿ ಸುಂದರ ಪ್ರಾಣಿಗಳನ್ನು, ಪಕ್ಷಿಗಳನ್ನು ಸೆರೆಹಿಡಿಯುವಲ್ಲಿ ನಿರತರಾಗುತ್ತಾರೆ. ಈಗ ಉತ್ತರಾಖಂಡದಲ್ಲೂ ಕೂಡ ಅವರು ಅಲ್ಲಿನ ಬೆಟ್ಟ, ಗುಡ್ಡ, ನದಿ ತೀರದಲ್ಲಿ ಸುತ್ತಾಡಿದ್ದಾರೆ.

ಸಾಕಷ್ಟು ಕೊರೆಯುವ ಛಳಿ ಇದ್ದರೂ, ಉತ್ತರಾಖಂಡದ ಸಾತ್‌ತಾಲ್‌ ಎಂಬ ಪ್ರಾಂತ್ಯದಲ್ಲಿ ದರ್ಶನ್‌ ತಮ್ಮ ಸ್ನೇಹಿತರ ಜೊತೆಯಲ್ಲಿ ಸುತ್ತಾಡುತ್ತಿದ್ದಾರೆ. ಅಂದಹಾಗೆ, ಏಳು ಸರೋವರಗಳ ನಾಡು ಎಂದೇ ಕರೆಸಿಕೊಳ್ಳುವ ಸಾತ್‌ತಾಲ್‌ ವಲಸೆ ಹಕ್ಕಿಗಳಿಗೆ ಸುಂದರ ತಾಣ. ಆ ತಾಣಕ್ಕೆ ಬರುವ ತರಹೇವಾರಿ ಪಕ್ಷಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ದರ್ಶನ್‌ ಅಲ್ಲಿಗೆ ತೆರಳಿದ್ದು, ಅದಾಗಲೇ ಅನೇಕ ಪಕ್ಷಿಗಳನ್ನು ಸೆರೆಹಿಡಿದಿದ್ದಾರೆ. ಸುಂದರ ತಾಣಗಳು ಹಾಗು ಪ್ರಾಣಿ, ಪಕ್ಷಿಗಳನ್ನು ಸೆರೆಹಿಡಿಯುವುದೆಂದರೆ ದರ್ಶನ್‌ಗೆ ಎಲ್ಲಿಲ್ಲದ ಖುಷಿ.

Advertisement

ಆ ಖುಷಿಯ ಜೊತೆಯಲ್ಲಿ ರಾಹುಲ್‌ ಶರ್ಮ, ಬರ್ಡಿಂಗ್‌ ಕ್ಯಾಂಪ್‌ ಗೈಡ್‌ ಶುಭಂ ಕುಮಾರ್‌ ಗೆಳೆಯರಾದ ಕಿರಣ್‌ ಶ್ರೀನಿವಾಸ್‌, ರಾಜೇಶ್‌, ಮನು ಅಯ್ಯಪ್ಪ, ಸುನೀಲ್‌ ಉತ್ತರಾಖಂಡದ ಹಲವು ಭಾಗವನ್ನು ಸುತ್ತಾಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿರುವ ಪ್ರಮುಖ ಬೀದಿಗಳಲ್ಲೂ ದರ್ಶನ್‌ ಸಾಮಾನ್ಯರಂತೆಯೇ ಅಲೆದಾಡಿ, ಅಲ್ಲಿನ ವಿಶೇಷ ಖಾದ್ಯವನ್ನು ಸವಿದಿದ್ದಾರೆ. ಲೋಕಲ್‌ ರೈಲಿನಲ್ಲೂ ಪಯಣ ಬೆಳೆಸಿದ್ದಾರೆ. ಸದ್ಯ, ಉತ್ತರಾಖಂಡದಲ್ಲಿ ದರ್ಶನ್‌ ಮತ್ತು ಗೆಳೆಯರ ಸುತ್ತಾಟದ ಫೋಟೋ ಹಾಗು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಾ ಸುದ್ದಿಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next