Advertisement

ಮುದಗಲ್ಲ ತಾಲೂಕಿನಲ್ಲಿ ಡಿಎಪಿ ರಸಗೊಬ್ಬರ ಅಭಾವ

03:48 PM Nov 10, 2021 | Team Udayavani |

ಮುದಗಲ್ಲ: ತಾಲೂಕಿನಲ್ಲಿ ಕೃಷಿಗೆ ಅಗತ್ಯವಿರುವ ಡಿಎಪಿ ರಸಗೊಬ್ಬರ ಅಭಾವ ತಲೆದೋರಿದ್ದು ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ.

Advertisement

ಕಳೆದ ಎರಡ್ಮೂರು ತಿಂಗಳಿಂದ ರೈತರು ಹಿಂಗಾರು ಬಿತ್ತನೆಯಲ್ಲಿ ತೊಡಗಿದ್ದಾರೆ. ಉತ್ತಮ ಮಳೆಯಿಂದ ಸಪ್ಪೆಯಾದ ಹೊಲಗಳಿಗೆ ಮಂಗಳ ಡಿಎಪಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಪಟ್ಟಣದ ಕೆಲವು ರಸಗೊಬ್ಬರ ಅಂಗಡಿಗಳಲ್ಲಿ ಮಂಗಳ ಡಿಎಪಿ(ಕಪ್ಪು) ಗೊಬ್ಬರ ಕೇಳಿದರೆ ಐಪಿಎಲ್‌ ಡಿಎಪಿ(ಬಿಳಿ) ಗೊಬ್ಬರವಿದೆ ಎಂದು ಹೇಳುತ್ತಾರೆ. ಬೇಡಿಕೆ ಇದ್ದಾಗ ಡಿಎಪಿ ಗೊಬ್ಬರ ಸಿಗದೇ ಇರುವುದರಿಂದ ರೈತ ಕಂಗಾಲಾಗಿದ್ದಾನೆ.

ಬೀಜ, ಗೊಬ್ಬರ ನಿಗದಿತ ದರದಲ್ಲಿಯೇ ಮಾರಾಟ ಮಾಡಬೇಕು, ಚೀಲದ ಮೇಲೆ ನಮೂದಿಸಿರುವ ಬೆಲೆಗೆ ಮಾರಾಟ ಮಾಡಿ ರೈತರಿಗೆ ರಸೀದಿ ನೀಡಬೇಕು. ತಪ್ಪಿದರೆ ಶಿಸ್ತುಕ್ರಮ ಜರುಗಿಸುತ್ತೇವೆಂದು ಕೃಷಿ ಅಧಿಕಾರಿಗಳು ಪ್ರತಿ ವರ್ಷ ಮಾಧ್ಯಮಗಳ ಮೂಲಕ ಹೇಳುತ್ತಲೇ ಬಂದಿದ್ದಾರೆ.

ವಾಸ್ತವದಲ್ಲಿ ಈ ಸೂಚನೆ ಪಾಲನೆಯಾಗಿಲ್ಲ, ಯಾವ ವರ್ತಕನಿಗೆ ನೋಟಿಸ್‌ ನೀಡಿ ದಂಡ ಹಾಕಿದ ಉದಾಹರಣೆಯೇ ಇಲ್ಲ. 50ಕೆ.ಜಿ ಯೂರಿಯಾ ಗೊಬ್ಬರ ಚೀಲಕ್ಕೆ ಸರಕಾರ ನಿಗದಿ ಮಾಡಿದ ದರ 267ರೂ.ಇದೆ, ಹಮಾಲಿ-ಸಾರಿಗೆ ವೆಚ್ಚ ಸೇರಿ 290 ಅಥವಾ 300ಕ್ಕೆ ಮಾರಾಟ ಮಾಡಿದರೆ ಪರವಾಗಿಲ್ಲ. ಆದರೆ ಪಟ್ಟಣದಲ್ಲಿ ಕೆಲ ವರ್ತಕರು 350ರೂ.ಗಳಂತೆ ಮಾರುತ್ತಿದ್ದಾರೆ. ಐಪಿಎಲ್‌ ಡಿಎಪಿ 1350ರೂ.ಗೆ ಮಾರಲಾಗುತ್ತಿದೆ. ಎಂದು ರೈತರು ದೂರಿದ್ದಾರೆ.

Advertisement

ಇದನ್ನೂ ಓದಿ: ಪ್ರೀತಿಗೆ ವಿರೋಧ;ಪ್ರಿಯತಮೆ ಮನೆಯಲ್ಲೇ ಆಕೆಯ ಹತ್ಯೆಗೆ ಯತ್ನ, ಪ್ರಿಯತಮನೂ ಆಸ್ಪತ್ರೆಗೆ ದಾಖಲು

ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ

ಡಿಎಪಿ ಗೊಬ್ಬರ ಅಭಾವ ಪರಿಸ್ಥಿತಿಯನ್ನು ಮನಗಂಡ ಕೆಲ ಮಾರಾಟಗಾರರು ತಮ್ಮಲ್ಲಿರುವ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರುತ್ತಿದ್ದಾರೆ. ಇನ್ನು ಕೆಲವರು ಬೇರೆಡೆ ದಾಸ್ತಾನು ಮಾಡಿ ಅಭಾವ ಸೃಷ್ಟಿಯಾಗುವಂತೆ ಮಾಡಿದ್ದಾರೆಂಬ ಆರೋಪ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಕೆಲವು ಗ್ರಾಮೀಣ ಭಾಗದಲ್ಲಿ ಅಂಗಡಿಗಳನ್ನು ತೆರೆದು ಹೆಚ್ಚಿನ ದರಕ್ಕೆ ಗೊಬ್ಬರ ಮಾರುತ್ತಿದ್ದಾರೆ. ರೈತರಿಗೆ ಜಿಎಸ್‌ಟಿ ರಸೀದಿ ನೀಡುತ್ತಿಲ್ಲ ಎಂದು ರೈತರಾದ ಗ್ಯಾನಪ್ಪ, ಮಲ್ಲಪ್ಪ, ದುರುಗಪ್ಪ, ಭೀಮಪ್ಪ ಆರೋಪಿಸಿದ್ದಾರೆ.

ರೈತರೊಂದಿಗೆ ಒಂದೇ ಒಂದು ಸಭೆಯಿಲ್ಲ
ಒಂದು ಕಾರ್ಯಕ್ರಮ ಮಾಡಬೇಕಾದರೆ ಹತ್ತಾರು ಪೂರ್ವಭಾವಿ ಸಭೆ ಮಾಡಿ ಚರ್ಚಿಸುವ ಅಧಿಕಾರಿಗಳು ಬಹುಸಂಖ್ಯಾತ ರೈತಾಪಿ ವರ್ಗದ ಕೃಷಿ ಚಟುವಟಿಕೆ ಆರಂಭವಾಗುವ ರೈತರೊಂದಿಗೆ ಒಂದೇ ಒಂದು ಸಭೆ ನಡೆಸುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೃಷಿ ಪರಿಕರ, ಬೀಜ, ಗೊಬ್ಬರ ವ್ಯವಸ್ಥಿತವಾಗಿ ಸಂಗ್ರಹಿಸಲು ಆಸಕ್ತಿ ವಹಿಸುವುಲ್ಲ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರೆನ್ನುವಂತೆ ಮಳೆ ಬಿದ್ದ ಮೇಲೆಯೇ ಕೃಷಿ ಇಲಾಖೆ ಅಧಿಕಾರಿಗಳು ಕಣ್ಣು ಹಾಯಿಸುತ್ತಿರುವುದು ಸರಿಯಲ್ಲ ಎಂದು ರೈತ ಮುಖಂಡ ಅಮರಣ್ಣ ಗುಡಿಹಾಳರ ಆರೋಪಿಸುತ್ತಾರೆ.

-ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next