Advertisement

ಜಾರಿ ನಿರ್ದೇಶನಾಲಯಕ್ಕೆ ಹೆಚ್ಚಿನ ಅಧಿಕಾರ: ಸುಪ್ರೀಂಗೆ ವಿಪಕ್ಷಗಳ ಮೊರೆ

08:51 PM Aug 03, 2022 | Team Udayavani |

ನವದೆಹಲಿ: ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಹೆಚ್ಚಿನ ಅಧಿಕಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಕ್ರಮ ಹಣ ವರ್ಗಾವಣೆ ತಿದ್ದುಪಡಿ ಕಾಯ್ದೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ಆದೇಶವು ಅಪಾಯಕಾರಿಯಾಗಿದೆ ಎಂದು ತೀರ್ಪಿನ ಬಗ್ಗೆ ಸುಮಾರು 17 ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

Advertisement

ಮುಂದಿನ ದಿನಗಳಲ್ಲಿ ಇದು ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ತೃಣಮೂಲ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಾರ್ಟಿ ಸೇರಿದಂತೆ ಅನೇಕ ವಿಪಕ್ಷಗಳು ಆತಂಕ ವ್ಯಕ್ತಪಡಿಸಿದ್ದು, ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ಮರುಪರಿಶೀಲಿಸಬೇಕೆಂದು ಅವು ಜಂಟಿಯಾಗಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿವೆ.

“ಜಾರಿ ನಿರ್ದೇಶನಾಲಯಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಿದರೆ, ಅದನ್ನು ರಾಜಕೀಯ ಸೇಡಿಗಾಗಿ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುವ ಅಪಾಯವಿರುತ್ತದೆ. ವಿಪಕ್ಷಗಳ ಮೇಲೆ ಅಸ್ತ್ರವನ್ನಾಗಿ ಪ್ರಯೋಗಿಸುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ, ತೀರ್ಪಿನ ದೀರ್ಘ‌ಕಾಲಿಕ ದುಷ್ಪರಿಣಾಮವನ್ನು ಊಹಿಸಿ, ತೀರ್ಪಿನ ಮರುಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಲಾಗಿದೆ.

ಟಿಎಂಸಿ, ಡಿಎಂಕೆ, ಆಪ್‌, ಎನ್‌ಸಿಪಿ, ಶಿವಸೇನೆ, ಸಿಪಿಎಂ, ಸಿಪಿಐ, ಐಯುಎಂಎಲ್‌, ಆರ್‌ಎಸ್‌ಪಿ, ಎಂಡಿಎಂಕೆ, ಆರ್‌ಜೆಡಿ, ಆರ್‌ಎಲ್‌ಡಿ ಮುಂತಾದ ಪಕ್ಷಗಳು ಪತ್ರಕ್ಕೆ ಸಹಿ ಹಾಕಿವೆ.

Advertisement

Udayavani is now on Telegram. Click here to join our channel and stay updated with the latest news.

Next