Advertisement

ಕಾರವಾರ : ಪ್ರವಾಸೋದ್ಯಮಕ್ಕೆ ಮತ್ತಷ್ಟು ಪೆಟ್ಟು ನೀಡುತ್ತಿರುವ ಪ್ರವಾಸೋದ್ಯಮ ಅಧಿಕಾರಿ

08:52 PM May 01, 2022 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಸೇರಿ ಚೇತರಿಸಿಕೊಳ್ಳುತ್ತಿದ್ದ ಪ್ರವಾಸೋದ್ಯಮದ ಕತ್ತು ಹಿಚುಕಿದ್ದಾರೆಂದು ದಾಂಡೇಲಿ ಜಲ ಸಾಹಸ ಕ್ರೀಡೆ ನಡೆಸುವ ಪ್ರವಾಸೋದ್ಯಮಿಗಳು ಹಾಗೂ ಜಲ ಸಾಹಸ ಕ್ರೀಡೆ ನಡೆಸುವ ಕಾರ್ಮಿಕರು ಆರೋಪಿಸಿದ್ದಾರೆ. ಜಲ ಸಾಹಸ ಕ್ರೀಡೆಗಳ ಮೇಲೆ ತಮಗಿಲ್ಲದ ಅಧಿಕಾರವನ್ನು ಚಲಾಯಿಸಿ ಮೌಖಿಕ ಆದೇಶದೊಂದಿಗೆ ಕೆಳಗಿನ ಅಧಿಕಾರಿಗಳನ್ನು ಬಳಸಿಕೊಂಡು ಪ್ರವಾಸೋದ್ಯಮಿಗಳನ್ನು ಬೆದರಿಸುತ್ತಿದ್ದಾರೆ. ಅಲ್ಲದೇ ಕಮೀಷನ್ ಪಡೆಯಲು ದಾಂಡೇಲಿಯ ಕಾಳಿ ನದಿಯ ಜಲ ಕ್ರೀಡೆಗಳನ್ನು ಬಂದ್ ಮಾಡಿದ್ದಾರೆ. ಕಾನೂನು ಬಾಹಿರ ಸಮಿತಿಯನ್ನು ರಚಿಸಿ ಬಲವಂತವಾಗಿ ಸಮಿತಿಯ ಮೂಲಕ ವಸೂಲಿಗಿಳಿಯಲು ಸಲ್ಲದ
ನಿಯಮಗಳನ್ನು ಹೇರುತ್ತಿದ್ದಾರೆಂದು ದಾಂಡೇಲಿ, ಜೊಯಿಡಾ ಭಾಗದ ಪ್ರವಾಸೋದ್ಯಮಿಗಳು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ಪತ್ರ ಬರೆದು ದೂರು ನೀಡಿದ್ದಾರೆ.

Advertisement

ಗಾಯದ ಮೇಲೆ ಬರೆ ಎಳೆದರು :
ದಾಂಡೇಲಿಯ ಗಣೇಶಗುಡಿಯಲ್ಲಿ ನಡೆಯುತ್ತಿರುವ ಸರಕಾರಿ ಹಾಗೂ ಖಾಸಗಿ ಜಲಕ್ರೀಡಗಳು ಕೋವಿಡ್‌ನಿಂದಾಗಿ ಮುಚ್ಚಿ ಹೋಗಿ ಸಾವಿರಾರು ಜನ ಉದ್ಯೋಗ ಕಳೆದುಕೊಂಡು ನಿರಾಶ್ರಿತರಾಗಿದ್ದರು. ತೀರಾ ಹದೆಗೆಟ್ಟ ಬದುಕನ್ನು ಸಾಗಿಸುತ್ತಿದ್ದ ಇಲ್ಲಿಯ ಕುಟುಂಬಗಳು ಕಳೆದೆರಡು ತಿಂಗಳಿಂದ ಚೇತರಿಸಿಕೊಂಡ ಕಾಳಿ ನದಿಯ ಜಲಕ್ರೀಡೆ ಹಾಗೂ ಪ್ರವಾಸೋಧ್ಯಮದಿಂದಾಗಿ ಪುನಃ ಬದುಕು ಕಟ್ಟಿಕೊಳ್ಳುವ ಯತ್ನದಲ್ಲಿದ್ದಾಗ ಯಾರೋ ಒಬ್ಬರು ಮಾಡಿದ ತಪ್ಪನ್ನೇ ಮುಂದಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಆದ ಗಾಯದ ಮೇಲೆ ಬರೆ ಎಳೆದಿದ್ದಾರೆ. ತಪ್ಪು ಮಾಡಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಸಹ, ಜಿಲ್ಲಾಧಿಕಾರಿ ಕೆಳಗಿನ ಅಧಿಕಾರಿಗಳಿಗೆ ಮೌಖಿಕ ಆದೇಶ ಮಾಡಿ ಜಲಕ್ರೀಡೆ ಸ್ಥಗಿತಗೊಳಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರು ಸಮೀತಿಯೊಂದನ್ನು ರಚಿಸಿ ಕಮೀಷನಗಾಗಿ ಈ ಭಾಗದ ಜಲಕ್ರೀಡೆ ಆಯೋಜಕರನ್ನು ತಮ್ಮ ನಿಯಂತ್ರಣಕ್ಕೆ
ತೆಗೆದುಕೊಳ್ಳಲು ತಮಗಿಲ್ಲದ ಅಧಿಕಾರ ವ್ಯಾಪ್ತಿಯನ್ನು ಬಳಸಿದ್ದಾರೆ. ಪಂಚಾಯತ್ ನಿಂದ ಲಿಖಿತವಾಗಿ ನೋಟಿಸ್‌ಗಳನ್ನು ನೀಡಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ನಗರದಲ್ಲಿ ಧಾರಾಕಾರ ಮಳೆ ; ಮರಗಳು ಧರೆಗೆ ; ವಿದ್ಯುತ್ ವ್ಯತ್ಯಯ

ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಮೌಖಿಕ ಆದೇಶ ಮಾಡಿ ತಮ್ಮ ಕೈಕೆಳಗಿನ ಅಧಿಕಾರಿಗಳಾದ ತಹಶೀಲ್ದಾರ, ಪೋಲಿಸ್ ಹಾಗೂ ಇನ್ನಿತರ ಅಧಿಕಾರಿಗಳನ್ನು ದುರ್ಬಳಕೆ ಮಾಡಿ ಪ್ರವಾಸೋಧ್ಯಮಿಗಳನ್ನು, ಖಾಸಗಿ ಜಲಕ್ರೀಡೆ ಆಯೋಜಕರನ್ನು ಬೆದರಿಸಿ ಸರಕಾರದ ಅಧಿಸೂಚನೆ ಇಲ್ಲದ ಅನಧಿಕೃತ ಸಮಿತಿಯೊಂದನ್ನು ರಚಿಸಿ ಬಲವಂತವಾಗಿ ಹಣ ವಸೂಲಿಗಾಗಿ ಮಾರ್ಗಸೂಚಿಗಳನ್ನು ಮಾಡುತ್ತಿದ್ದಾರೆ. ಈ ಮಾರ್ಗಸೂಚಿಗಳಿಗೆ ಯಾವುದೇ ಸಹಿಯನ್ನು ಮಾಡದೇ ಮುದ್ರಿತ ಪ್ರತಿಯನ್ನು ಪ್ರವಾಸೋಧ್ಯಮ ಇಲಾಖೆಯ ಉಪ ನಿರ್ದೇಶಕರು ನೀಡಿದ್ದಾರೆ. ಉಪ ನಿರ್ದೇಶಕರು ತಯಾರಿಸಿರುವ ಅರ್ಜಿ ನಮೂನೆಯಲ್ಲಿ ಜಲಕ್ರೀಡೆ ಆಯೋಜಕರು ಅರ್ಜಿ ಸಲ್ಲಿಸಬೇಕಾಗಿ ಎರಡು ಪತ್ರಿಕೆಗಳಿಗೆ ಮಾತ್ರ ಮಾಹಿತಿ ನೀಡಿದ್ದಾರೆ.

Advertisement

ಇಬ್ಬರಿಂದ ಕೋಟ್ಯಾಂತರ ರೂ.ನಷ್ಟ :
ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಅಧಿಕಾರಿ ಸೇರಿ ಕಳೆದು ೧೫ ದಿನಗಳಿಂದ ದಾಂಡೇಲಿ ಪ್ರವಾಸೋಧ್ಯಮಕ್ಕೆ ಕೋಟ್ಯಾಂತರ ರೂಪಾಯಿ ಆರ್ಥಿಕ ಹಾನಿಗೆ ಕಾರಣರಾಗಿದ್ದು ರಾಜ್ಯದ ಬೊಕ್ಕಸಕ್ಕೆ ತೆರಿಗೆ ಹಣ ಹಾಗೂ ಪ್ರವಾಸೋಧ್ಯಮಿಗಳ ಮತ್ತು ಪ್ರವಾಸೋದ್ಯಮವನ್ನು ಅವಲಂಭಿಸಿ ಬದುಕುತ್ತಿರುವ ಎಲ್ಲ ಕಾರ್ಮಿಕರು, ಎಜೆಂಟರು, ಅಂಗಡಿ ಹೋಟೆಲ್, ತರಕಾರಿ ವ್ಯಾಪಾರಸ್ಥರು ಎಲ್ಲರಿಗೂ ತೀವ್ರ ಆರ್ಥಿಕ ಹಾನಿಯನ್ನುಂಟು ಮಾಡಿದ್ದಾರೆ. ಈ ಇಬ್ಬರು ಅಧಿಕಾರಿಗಳಿಗೆ ಕಾಳಿ ನದಿ ಜಲಸಾಹಸ ಕ್ರೀಡೆಗೆ ಅನುಮತಿಸುವುದಾಗಲಿ. ಬೋಟ್ ಲೈಸನ್ಸ್ ನೀಡುವುದಾಗಲಿ, ಚಾಲನಾ ಸಾರಂಗ ಲೈಸೆನ್ಸ್ ನೀಡುವ ಅಧಿಕಾರ ಹಾಗೂ ಜಲಸಾಹಸ ಕ್ರೀಡೆಗಳ ನಿಯಂತ್ರಣ ಮಾಡುವ ಅಧಿಕಾರ ಇರುವುದಿಲ್ಲ.

ದರ ನಿಗದಿಯನ್ನು ಸಹ ಅಧಿಕಾರಿಗಳೇ ಮಾಡಿದರು :
ಜಲಸಾಹಸ ಕ್ರೀಡೆ ನಡೆಸುವವರು ಸೆಕ್ಯೂರಿಟಿ ಡಿಪೋಜಿಟ್ 2 ಲಕ್ಷ ರೂಪಾಯಿ ಇಡಬೇಕು, ಮಾರ್ಗಸೂಚಿಯ ಉಲ್ಲಂಘನೆ ಮಾಡಿದ್ದಲ್ಲಿ ಈ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹಾಗೂ ಜಲಸಾಹಸ ಕ್ರೀಡೆಯ ಪ್ರತಿಯೊಂದು ಟಿಕೆಟ್‌ಗೆ ಶೇ 20 ರಷ್ಟು ಹಣ ಸಮೀತಿಯ ನಿರ್ವಹಣೆಗೆ ನೀಡಬೇಕು ಹಾಗೂ ಖಾಸಗಿ ಮಾಲೀಕತ್ವದ ಎಲ್ಲ ಜಲಸಾಹಸ ಕ್ರೀಡೆಯ ಜಟ್ಟಿಗಳ ಮಾಲೀಕರು ತಾವು ರಚಿಸಿದ ಏಕ ಟಿಕೇಟ್ ಕೌಂಟರ್ ಮೂಲಕ ಪ್ರವಾಸಿಗರು ಟಿಕೆಟ್ ಪಡೆಯಬೇಕು. ಹಾಗೂ ಪ್ರತಿಯೊಂದು ಚಟುವಟಿಕೆಗೆ ಪರಮಿಟ್ ಫೀ ನಿಗದಿ ಪಡಿಸಿದ್ದು ಜಲಸಾಹಸ ಕ್ರೀಡೆಯ ಆಯೋಜಕರು 5 ಕಯಾಕ್‌ಗಳಿಗೆ 10 ಸಾವಿರ ರೂಪಾಯಿ. 5 ಕ್ಕಿಂತ ಹೆಚ್ಚಿ ಇದ್ದಲ್ಲಿ 3 ಸಾವಿರ ರೂಪಾಯಿಯಂತೆ 10 ಕಯಾಕ್‌ಗಳಿಗೆ ಮಾತ್ರ ಅನುಮತಿಸಲಾಗುವುದು. ಜಿಪ್ಲೈನ್ ಗೆ ಪರಮಿಟ್ ಫೀ 10 ಸಾವಿರ ರೂಪಾಯಿ. ಬೋಟಿಂಗ್‌ಗೆ 2 ಬೋಟ್ ಗೆ 10 ಸಾವಿರ ರೂಪಾಯಿ. ಅಕ್ವಾ ಜೋರ್ಬಿಂಗ್ 10 ಸಾವಿರ ರೂಪಾಯಿ. ಈಜು ಮತ್ತು ಇನ್ನಿತರ ಚಟುವಟಿಕೆಗೆ ತಲಾ 5
ಸಾವಿರ ರೂಪಾಯಿ ಹಾಗೂ ಪ್ರತಿ ವರ್ಷ ನವೀಕರಣಕ್ಕೆ 5 ಸಾವಿರ ರೂಪಾಯಿ ನಿಗದಿ ಪಡಿಸಿದ್ದಾರೆ. ಅದೇ ರೀತಿ ಜಲಕ್ರೀಡೆಗೆ ದರಪಟ್ಟಿ ನಿಗದಿ ಪಡಿಸಿದ್ದು ಕಯಾಕಿಂಗ್ 250 ರೂಪಾಯಿ, ಜಿಪಲೈನ್ 250 ರೂಪಾಯಿ, ಬೋಟಿಂಗ್ 100 ರೂಪಾಯಿ, ಅಕ್ವಾ ಜೋರ್ಬಿಂಗ್ 250 ರೂಪಾಯ, ಈಜು ಮತ್ತು ಇತರೆ ಚಟುವಟಿಕೆಗೆ 100 ರೂಪಾಯಿ ದರ ಪಟ್ಟಿ ಹಾಗೂ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಇವಲ್ಲವನ್ನು ಸಹಿ ಮಾಡದೇ ಜಟ್ಟಿ ಮಾಲೀಕರುಗಳಿಗೆ ನೀಡಿ ಉಪನಿರ್ದೇಶಕರು ಪ್ರವಾಸೋಧ್ಯಮ ಇಲಾಖೆ ಕಾರವಾರರವರು ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕನಕಗಿರಿಯ ವಿರಾಗಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ : ಸಾವಿರಾರು ಭಕ್ತರು ಭಾಗಿ

ಹೈಕೋರ್ಟನಲ್ಲಿ ರಿಟ್ ಸಲ್ಲಿಕೆ :
ಅನಧಿಕೃತ ಕಮಿಟಿ ಮಾಡಿ ಆ ಕಮಿಟಿಯ ಮೂಲಕ ಹಣ ವಸೂಲಿಗೆ ಇಳಿದಿರುವುದು ಈ ಕೃತ್ಯದಿಂದ ಬಯಲಾಗುತ್ತಿದೆ. ಇದರೊಟ್ಟಿಗೆ ಅವರು ನೀಡಿರುವ ಸಹಿ ಇಲ್ಲದ ಪ್ರತಿಯನ್ನು ತಮ್ಮ ಅವಗಾಹನೆಗಾಗಿ ಇ-ಮೇಲೆ ನಲ್ಲಿ ತಮಗೆ ಸಲ್ಲಿಸಿದೆ. ಈಗಾಗಲೇ 2 ಜಟ್ಟಿ ಮಾಲೀಕರು ರಾಜ್ಯ ಉಚ್ಛ ನ್ಯಾಯಾಲಯದ ಧಾರವಾಡ ರಜಾದಿನದ ಬೆಂಚಿಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವ ಆರ್.ಆಶೋಕ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗೆ ಸಹ ಸಲ್ಲಿಸಲಾಗಿದೆ. ಮನವಿ
ಪತ್ರಕ್ಕೆ ಎನ್.ಜಯಚಂದ್ರನ್,ಅಜಯ್ ತಡಕೋಡ.ಚಂದಾ ಕಟ್ಟಿ. ಪರಮಶಿವ.ಮೊಹಮ್ಮದ್,ನಾಗರಾಜ, ವಿನಾಯಕ, ಪ್ರಸಾದ್ ವಿ.ಎಸ್., ನಾರಾಯಣ ಗಾವಡ,ವಿಯಜ್ ಗೊಂಡ್ಲಿ, ವೆಂಕ, ಆಕಾಶ್, ಸುನಿಲ್ ಬೋಮಶೇಖರ್,ಸೈಮೊಲ್ಲ, ಕೈಷ್ಣ ಯಡವಿ, ಡೆನಿಸ್ ಡಯಾಸ್ ಸೇರಿ 33ಕ್ಕೂ ಹೆಚ್ಚು ಜನರು ಸಹಿ ಮಾಡಿದ್ದಾರೆ.

– ನಾಗರಾಜ್ ಹರಪನಹಳ್ಳಿ. ಕಾರವಾರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next