Advertisement

ಗಾಂಧೀವಾದಿ, ಕೃಷಿ ಕ್ಷೇತ್ರದ ಭೀಷ್ಮ ಮುದ್ದಣ್ಣ ಶೆಟ್ರಾ ಮನೆಯಲ್ಲಿ ಪ್ರಾರಂಭಿಸಿದ ಶಾಲೆ

10:10 PM Nov 17, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕಾಪು: ಮಧ್ವಾಚಾರ್ಯರ ದಂಡದಿಂದ ಉದಿಸಿದ ಕ್ಷೇತ್ರ ದಂಡತೀರ್ಥ. ಉಡುಪಿ ಪರ್ಯಾಯ ಸರ್ವಜ್ಞ ಪೀಠವನ್ನೇರುವ ಮುನ್ನ ಪೀಠಾಧಿಪತಿಗಳು ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿ ಬರುವುದು ಸಂಪ್ರದಾಯ. ಇಂತಹ ಧಾರ್ಮಿಕ ಮತ್ತು ಐತಿಹಾಸಿಕ ಪ್ರಸಿದ್ಧಿಗೆ ಕಾರಣವಾಗಿರುವ ಕಾಪು ಸಮೀಪದ ದಂಡತೀರ್ಥದಲ್ಲಿ ಹಿರಿಯ ಗಾಂಧೀವಾದಿ ದಿ| ಮುದ್ದಣ್ಣ ಶೆಟ್ಟಿ ಅವರು 1917ರಲ್ಲಿ ಸ್ಥಾಪಿಸಿದ ದಂಡತೀರ್ಥ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಪೂರೈಸಿದ ಸಂಭ್ರಮದಲ್ಲಿದೆ.

ಉಳಿಯಾರಗೋಳಿ ಮತ್ತು ಸುತ್ತಲಿನ ಭಾಗದ ಜನತೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕೃಷಿ ಕ್ಷೇತ್ರದ ಭೀಷ್ಮ ಎಂದೇ ಖ್ಯಾತನಾಮರಾಗಿದ್ದ ಯು. ಮುದ್ದಣ್ಣ ಶೆಟ್ಟಿ ಅವರು ಪ್ರಾರಂಭದಲ್ಲಿ ತನ್ನ ಮನೆಯಲ್ಲಿಯೇ (ಪ್ರಸ್ತುತ ಕೆನರಾ ನರ್ಸರಿ ಇರುವ ಸ್ಥಳದಲ್ಲಿ) ದಂಡತೀರ್ಥ ಕನ್ನಡ ಮಾಧ್ಯಮ ಶಾಲೆಯ ತರಗತಿಯನ್ನು ಪ್ರಾರಂಭಿಸಿದ್ದರು. ನಂತರದ ವರ್ಷಗಳಲ್ಲಿ ಹಾಲಿ ಇರುವ ಇರುವ ಸ್ಥಳಕ್ಕೆ ಶಾಲೆ ಸ್ಥಳಾಂತರಗೊಂಡಿತು.

ಪ್ರಸ್ತುತ 52 ವಿದ್ಯಾರ್ಥಿಗಳು
1917ರಲ್ಲಿ ಪ್ರಾರಂಭಗೊಂಡಿದ್ದ ದಂಡತೀರ್ಥ ಕನ್ನಡ ಮಾಧ್ಯಮ ಶಾಲೆಯು ಸಾವಿರಾರು ಮಂದಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಕಾರಣವಾಗಿದ್ದು, 1954ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಆಂಗ್ಲ ಮಾ. ಪ್ರೌ. ಶಾಲೆ, ದಂಡತೀರ್ಥ ಪಿಯು ಕಾಲೇಜು ಮತ್ತು ಪ್ರಶಾಂತ್‌ ಪ್ಯಾರಾ ಮೆಡಿಕಲ್‌ ಕಾಲೇಜು ಕೂಡಾ ಇಲ್ಲಿ ತಲೆ ಎತ್ತಿದೆ.

ಹಿಂದೆ 700-800ರಷ್ಟು ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ 19-20 ಮಂದಿ ಶಿಕ್ಷಕ – ಶಿಕ್ಷಕಿಯರಿದ್ದರು. ಆದರೆ ಈಗ ವಿದ್ಯಾರ್ಥಿಗಳ ಸಂಖ್ಯೆ 52ಕ್ಕೆ ಕುಸಿದಿದ್ದು, ಮುಖ್ಯ ಶಿಕ್ಷಕಿ ಸೇರಿದಂತೆ ಇಬ್ಬರು ಸರಕಾರಿ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿಯ ಸಹಕಾರದೊಂದಿಗೆ 4 ಮಂದಿ ಗೌರವ ಶಿಕ್ಷಕಿಯರು ಮಕ್ಕಳಿಗೆ ಶಿಕ್ಷಣಾಭ್ಯಾಸ ನೀಡುತ್ತಿದ್ದಾರೆ.

Advertisement

ಟ್ರಸ್ಟ್‌ನ ಪೂರ್ಣ ಬೆಂಬಲ
ಸಂಸ್ಥೆಯ ಸಂಸ್ಥಾಪಕ ದಿ| ಮುದ್ದಣ್ಣ ಶೆಟ್ಟಿ ಅವರ ನಿಧನಾನಂತರ ಅವರ ಪತ್ನಿ ಗಿರಿಜಾ ಎಂ. ಶೆಟ್ಟಿ, ಅಳಿಯ ಗೋವಿಂದ ಶೆಟ್ಟಿ, ನಂತರ ಗೋವಿಂದ ಶೆಟ್ರ ಪತ್ನಿ ವಸಂತಿ ಜಿ. ಶೆಟ್ಟಿ ಶಾಲಾ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಅವರ ಅಳಿಯ ಡಾ| ಕೆ. ಪ್ರಭಾಕರ ಶೆಟ್ಟಿ ಅವರ ನೇತೃತ್ವದಲ್ಲಿ ಉಳಿಯಾರಗೋಳಿ ಪದ್ದಕ್ಕ ಕೋಟಿ ಶೆಟ್ಟಿ ಮೆಮೋರಿಯಲ್‌ ಟ್ರಸ್ಟ್‌ನ ಮೂಲಕ ಸಂಸ್ಥೆಯು ಪ್ರಬಲವಾಗಿ ಮುನ್ನಡೆದಿದೆ. ಪ್ರಸ್ತುತ ಅವರ ಮಗ ಡಾ| ಕೆ. ಪ್ರಶಾಂತ್‌ ಶೆಟ್ಟಿ ಸಂಸ್ಥೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೆಮ್ಮೆಯ ಶಿಕ್ಷಕರು
ಅಗಳಿ ರಾಮರಾವ್‌ ಇಲ್ಲಿನ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದು, ಉಳಿದಂತೆ ಸಹದೇವ ಅಮಣ್ಣ, ಯು. ಗೋವಿಂದ, ಪಾಂಗಾಳ ಸುಬ್ಟಾ ರಾಬ್‌ ಮತ್ತು ಜಯಾ ಬಾೖ ಅವರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಗುರುತಿಸಲ್ಪಡುವಂತಹ ಸಾಧನೆಗೈದಿದ್ದಾರೆ. ಇವರಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಯಾ ಬಾೖ, ಪ್ರಸ್ತುತ ಮಖ್ಯೋಪಾಧ್ಯಾಯಿನಿ ವಾರಿಜಾ ಟೀಚರ್‌ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ದೊರಕಿದೆ.

ಹೆಮ್ಮೆಯ ಹಳೇ ವಿದ್ಯಾರ್ಥಿಗಳು
ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನಿವೃತ್ತ ಡೀನ್‌ ಡಾ| ಕೆ. ಆರ್‌. ಶೆಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯ ಮೂಳೆರೋಗ ತಜ್ಞ ಡಾ| ವಿಜಯ್‌, ಅಮೆರಿಕಾದ ವೈದ್ಯ ಡಾ| ಸೀತಾರಾಮ ಭಟ್‌, ಬೆಂಗಳೂರು ವಿವಿ ಪ್ರೊಫೆಸರ್‌ ಡಾ| ಜಯ ಶೆಟ್ಟಿ, ಕರ್ನಾಟಕ ಹಾಲು ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಸಹಿತ ಹಲವು ಮಂದಿ ರಾಜಕೀಯ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದ ಸಾಧಕರುಗಳನ್ನು ಬೆಳೆಸಿರುವುದು ದಂಡತೀರ್ಥ ಶಾಲೆಯ ಹೆಗ್ಗಳಿಕೆಯಾಗಿದೆ.

ಆಡಳಿತ ಮಂಡಳಿ, ಸಂಚಾಲಕರ ಪ್ರೋತ್ಸಾಹ ದಿಂದಾಗಿ ಇಲ್ಲಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಸಾಧ್ಯವಾಗಿದೆ. ಆಂಗ್ಲ ಮಾಧ್ಯಮ ಶಾಲೆಗೆ ಸಮಾನವಾಗಿ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಸರಕಾರದ ಎಲ್ಲ ಸವಲತ್ತುಗಳು ನಮ್ಮ ಶಾಲಾ ಮಕ್ಕಳಿಗೂ ದೊರಕುವಂತಾಗಬೇಕು.
-ವಾರಿಜಾ ಟೀಚರ್‌, ಮುಖ್ಯೋಪಾಧ್ಯಾಯಿನಿ

ಶತಮಾನ ಪೂರೈಸಿದ ಕನ್ನಡ ಮಾಧ್ಯಮ ಶಾಲೆಗೆ ಶತಮಾನೋತ್ಸವದ ನೆನಪಿಗಾಗಿ 1.50 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಇಲ್ಲಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಡೆಯುವ ರೀತಿಯದ್ದೇ ಎಲ್ಲಾ ಸವಲತ್ತುಗಳನ್ನು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸಿಕೊಡಲಾಗುತ್ತಿದೆ.
-ಶೋಭಾ ಪ್ರಭಾಕರ ಶೆಟ್ಟಿ,
ಹಳೇ ವಿದ್ಯಾರ್ಥಿನಿ

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next