Advertisement

ಕುಂಚ-ಗಾನ-ನೃತ್ಯ ವೈಭವ

05:38 PM May 30, 2019 | mahesh |

ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮತ್ತು ಶಾಂತಿವನ ಟ್ರಸ್ಟ್‌ (ರಿ.) ಸಹಯೋಗದೊಂದಿಗೆ ನಡೆದ 17ನೇ ವರ್ಷದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕರಿಸುವ ಸಮಾರಂಭದಲ್ಲಿ ಖ್ಯಾತ ಕಲಾವಿದರಿಂದ ಕುಂಚ-ಗಾನ-ನೃತ್ಯ ವೈಭವ ವಿಶಿಷ್ಟ ಕಾರ್ಯಕ್ರಮ ಅನಾವರಣಗೊಂಡಿತು. ಪ್ರಸಕ್ತ ಸಾಲಿನ ಅಂಚೆ ಕುಂಚ ಸ್ಪರ್ಧೆಗೆ “ಮಹಾತ್ಮಾ ಗಾಂಧೀಜಿ’ ವಿಷಯ ನೀಡಲಾಗಿತ್ತು. ಪುರಸ್ಕಾರ ವಿತರಣಾ ಸಮಾರಂಭದ ವೇದಿಕೆಯ ಎಡಭಾಗದಲ್ಲಿ ಗಂಜೀಫಾ ಕಲಾವಿದ ಮೈಸೂರಿನ ಗಂಜೀಫಾ ರಘುಪತಿ ಭಟ್‌ ಅವರು ಕಾವ್ಯಶ್ರೀ ಅಜೇರು ಅವರ ಯಕ್ಷ ಗಾಯನಕ್ಕೆ ಗಾಂಧಿಜಿಯವರ ಚಿತ್ರವನ್ನು ಕುಂಚದಲ್ಲಿ ಮೂಡಿಸಿ ಬೆರಗುಗೊಳಿಸಿದರೆ, ವೇದಿಕೆಯ ಬಲಭಾಗದಲ್ಲಿ ಕರ್ನಾಟಕದ ಮೊದಲ ವೇಗದ ಚಿತ್ರಕಲಾವಿದೆ ಖ್ಯಾತಿಯ ಮಂಗಳೂರಿನ ಶಬರಿ ಗಾಣಿಗ ಕಪ್ಪು ಕ್ಯಾನ್‌ವಾಸ್‌ ಮೇಲೆ ಕುಂಚದಿಂದ ಚಿತ್ರ ಮೂಡಿಸಿ ಬಿಳಿ ಬಣ್ಣದ ಸಿಂಚನದಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಕರ್ಷಕ ಭಾವಚಿತ್ರವನ್ನೇ ಚಿತ್ರಿಸಿ ಎಲ್ಲರನ್ನೂ ಬೆರಗಾಗಿಸಿದ್ದಾರೆ. ಕುಂಚ ಕಲಾಕೃತಿಗೆ ಸ್ಫೂರ್ತಿಯಾಗಿ ವೇದಿಕೆಯ ಮುಂಭಾಗದಲ್ಲಿ ಕಾವ್ಯಶ್ರೀ ಅಜೇರು ಅವರ ಯಕ್ಷ ಗಾಯನ ಮತ್ತು ಉಜಿರೆ ಶ್ರೀ ಧ.ಮಂ. ಕಾಲೇಜಿನ ಯಕ್ಷಕಲಾ ತಂಡದ ಯಕ್ಷನೃತ್ಯದ ಮನೋಜ್ಞ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.

Advertisement

“ವೈಷ್ಣವ ಜನತೋ ತೇನೆ ಕಹಿಯೆ’ ಗಾಂಧಿ ಸ್ಮತಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಕಾವ್ಯಶ್ರೀ ಅಜೇರು “ಕುಡುಮದೊಡೆಯ ಮಂಜುನಾಥ’ ಮತ್ತು “ಪದ್ಮವಿಭೂಷಣ ಧರ್ಮಚಕ್ರವರ್ತಿ ವೀರೇಂದ್ರ ಹೆಗ್ಗಡೆ’ ಗಾಯನದೊಂದಿಗೆ ಮುಂದುವರಿಸಿ “ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ’ ಯಕ್ಷ ಗಾಯನದೊಂದಿಗೆ 20 ನಿಮಿಷಗಳ ವಿಶಿಷ್ಟ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಅವರ ಮಧುರ ಕಂಠ ಸಿರಿಗೆ ಪೂರಕವಾಗಿ ಹಿಮ್ಮೇಳದ ಚೆಂಡೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಮದ್ದಳೆಯಲ್ಲಿ ಜನಾರ್ದನ ತೋಳ್ಪಾಡಿತ್ತಾಯ, ಪುರುಷ ಪಾತ್ರದಲ್ಲಿ ಶ್ರೀಶಕುಮಾರ್‌ ಹೆಗ್ಡೆ ಹಾಗೂ ಸ್ತ್ರೀ ಪಾತ್ರಗಳಲ್ಲಿ ದಿವ್ಯಶ್ರೀ ಮತ್ತು ಸ್ವಾತಿ ಸಹಕರಿಸಿದ್ದರು. ಯಕ್ಷಗುರು ಅರುಣ ಕುಮಾರ್‌ ಧರ್ಮಸ್ಥಳ ನಿರ್ದೇಶಿಸಿ ಕಾರ್ಯಕ್ರಮ ಸಂಯೋಜಿಸಿದ್ದರು. ಕುಂಚ-ಯಕ್ಷಗಾನ-ನೃತ್ಯ ಒಂದಕ್ಕೊಂದು ಎರಕಹೊಯ್ದಂತೆ ಓತಪ್ರೋತವಾಗಿ ಹರಿದು ಬಂದು ಕುತೂಹಲ, ಆಕರ್ಷಣೆಗೆ ಒಳಗಾಗಿತ್ತು. ನಟ ಮುಖ್ಯಮಂತ್ರಿ ಚಂದ್ರು ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ| ಹೆಗ್ಗಡೆಯವರು ಕಲಾವಿದರ ಪ್ರತಿಭೆಯನ್ನು ಮುಕ್ತಕಂಠದಿಂದ ಅಭಿನಂದಿಸಿದರು.

ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅಂಚೆ ಕುಂಚ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಕಳೆದ 17 ವರ್ಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದು ಯುವ ಕಲಾವಿದರಿಗೆ ಕ್ಷೇತ್ರದಿಂದ ನೀಡುತ್ತಿರುವ ಪೋ›ತ್ಸಾಹದ ದ್ಯೋತಕವೆನ್ನಬಹುದು.

ಸಾಂತೂರು ಶ್ರೀನಿವಾಸ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next