Advertisement

ಗಣಿ ಧೂಳಿನಿಂದ ರೇಷ್ಮೆ ಬೆಳೆಗೆ ಹಾನಿ

01:31 PM Dec 27, 2022 | Team Udayavani |

ದೇವನಹಳ್ಳಿ: ತಾಲೂಕಿನ ತೈಲಗೆರೆ, ಮೀಸಗನಹಳ್ಳಿ, ಮುದ್ದನಾಯಕನಹಳ್ಳಿ, ಚಿಕ್ಕಗೊಲ್ಲಹಳ್ಳಿ ಮತ್ತಿತರ ಕಡೆಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ರೈತರು ಬೆಳೆದ ರೇಷ್ಮೆ ಬೆಳೆಗಳಿಗೆ ಗಣಿ ಧೂಳು ಹೋಗುತ್ತಿದ್ದು, ರೇಷ್ಮೆ ಬೆಳೆಗಾರರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈಗಾಗಲೇ ರೇಷ್ಮೆ ಇಲಾಖೆಯಿಂದ ರೈತರ ರೇಷ್ಮೆ ಬೆಳೆಗಳ ಮೇಲೆ ಧೂಳು ಕೂರುತ್ತಿರುವದರ ಬಗ್ಗೆ ಅಧಿಕಾರಿಗಳು ವರದಿಯನ್ನು ಸಹ ನೀಡಿದ್ದಾರೆ. ರೇಷ್ಮೆ ಧೂಳು ಆಗುತ್ತಿರುವುದರ ಬಗ್ಗೆ ಬೆಳಗಾವಿ ವಿಧಾನ ಮಂಡಲದ ವಿಧಾನ ಪರಿಷತ್‌ ಕಲಾಪದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ರೇಷ್ಮೆ ಸಚಿವರಿಗೆ ದೇವನಹಳ್ಳಿ ತಾಲೂಕಿನ ವಿವಿಧ ಕಡೆ ಗಣಿ ಧೂಳಿನಿಂದ ರೇಷ್ಮೆ ಬೆಳೆಗೆ ತೊಂದರೆಯಾಗುತ್ತಿರುವುದರ ಬಗ್ಗೆ ಚಕಾರವನ್ನು ಎತ್ತಿದ್ದಾರೆ. ರೇಷ್ಮೆ ಸಚಿವರಿಂದ ಇದಕ್ಕೆ ಉತ್ತರ ಸಹ ದೊರೆತಿದೆ.

ಗ್ರಾನೈಟ್‌ ಪ್ಯಾಕ್ಟರಿ ರಕ್ಷಣೆ: ಕುಂದಾಣ ಹೋಬಳಿಯಲ್ಲಿ ಸಾಕಷ್ಟು ಗಣಿಗಾರಿಕೆಗಳು ನಿಯಮ ಬಾಹಿರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಕೃಷಿ ಚಟುವಟಿಕೆಗಳ ಮೇಲೆ ನಿರಂತರವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕುರಿತು ವಿಧಾನ ಪರಿಷತ್‌ ನಲ್ಲಿ ರವಿ ಪ್ರಶ್ನೆ ಮಾಡಿದ್ದು, ತಾಲೂಕಿನ ಕೃಷಿಕರು ಗಣಿ ನಿಷೇಧಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವರದಿಗಳಲ್ಲಿ ಗಣಿ ನಿಯಮಗಳ ಬಗ್ಗೆ ತಕರಾರು ಬರದಂತೆ ವ್ಯವಸ್ಥೆ ಮಾಡುವಷ್ಟು ಚಾಣಾಕ್ಷತನ ಅವರಿಗಿದೆ. ಅದೆಷ್ಟೇ ಸುಳ್ಳು ಮಾಹಿತಿ ನೀಡಿದರೂ, ಇಲ್ಲಿರುವ ಪ್ರಾಕೃತಿಕ ಜೀವ ಸಂಕುಲ ಮಾತ್ರ ತನ್ನ ಅವಸಾನದ ಅಂಚಿನ ಆರ್ತನಾದವನ್ನು ಮಾತ್ರ ನಿತ್ಯ ಹೇಳುತ್ತಿದೆ. ಪರಿಷತ್‌ ಸದಸ್ಯರು ಸೇರಿದಂತೆ ಸಾಕಷ್ಟು ವರದಿಯಲ್ಲಿ ಗ್ರಾನೈಟ್‌ ಪ್ಯಾಕ್ಟರಿ ಒಟ್ಟು ಸಂಖ್ಯೆ 160 ಎಂದು ತಿಳಿಸಿದ್ದರೂ, ಸರ್ಕಾರ ನೀಡಿರುವ ಮಾಹಿತಿಯಲ್ಲಿ ಕೇವಲ 93 ಗಣಿ, ಕ್ರಷರ್‌ಗಳು ಇವೆ ಎಂದು ಮಾಹಿತಿ ನೀಡಿ ಗ್ರಾನೈಟ್‌ ಪ್ಯಾಕ್ಟರಿಗಳನ್ನು ರಕ್ಷಿಸಲಾಗಿದೆ. ಈ ಕಾನೂನು ಬಾಹಿರ ಪ್ಯಾಕ್ಟರಿಗಳ ಪೋಷಕರು ಯಾರು ಎಂಬುದು ಜಿಲ್ಲಾಡಳಿತ ಉತ್ತರಿಸಬೇಕಿದೆ.

ಮಾಹಿತಿ ಸೋರಿಕೆ: ಸರ್ಕಾರಿ ಸಂಸ್ಥೆಗಳ ತಜ್ಞರ ತಂಡವೂ ಸಂಶೋಧನೆಗೆ ಆಗಮಿಸುವ ವೇಳೆಗೆ ಮಾಹಿತಿ ಸೋರಿಕೆಯಾಗಿ ಕೆಲ ದಿನ ಗಣಿಗಾರಿಕೆಗೆ ವಿರಾಮ ದೊರೆತ ಸಾಕಷ್ಟು ಪ್ರಸಂಗಗಳು ಇವೆ. ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿ ಪತ್ರಗಳಲ್ಲಿ ಇರುವ ಅಪಾರ ಖನಿಜ ಸಂಪತ್ತನ್ನು ಕಟ್ಟಡ, ಕಲ್ಲುಗಣಿ ಮಾಡುತ್ತೇವೆಂದು ಪರವಾನಗಿ ಪಡೆದ ಸಾಕಷ್ಟು ಕಂಪನಿ ಹೊರಕ್ಕೆ ಸಾಗಿಸುತ್ತಿರುವುದು ಎಂ.ಸ್ಯಾಂಡ್‌ ಮತ್ತು ಅಪರೂಪದ ಅಲಂಕಾರಿಕ ಶಿಲೆ(ಗ್ರಾನೈಟ್‌) ಎಂಬುದು ಸ್ಥಳೀಯರ ಆರೋಪವಾಗಿದೆ.

Advertisement

ಖನಿಜ ಸಂಪತ್ತು ಕ್ಷಿಣ: ರೈತರಿಗೆ ಕೃಷಿಯ ನಷ್ಟಕ್ಕೆ ಕಾರಣ ಅವೈಜ್ಞಾನಿಕ ಬೇಸಾಯ ಪದ್ಧತಿ ಎಂದು ಸಬೂಬು ಹೇಳುವ ಅಧಿಕಾರಿಗಳು, ವೈಜ್ಞಾನಿಕ ವರದಿ ನೋಡಿ ಪರಿಹಾರದ ನಾಟಕವಾಡುತ್ತಿದ್ದಾರೆ. ಇಲ್ಲಿನ ಭೂಮಿಯಿಂದ ವಿದೇಶಕ್ಕೆ ಗುಣಮಟ್ಟದ ತರಕಾರಿ, ರೇಷ್ಮೆ, ಹಣ್ಣು ರಫ್ತು ಮಾಡಬೇಕಿದ್ದ ಸರ್ಕಾರ, ಸಾಗಿಸುತ್ತಿರುವುದು ಅಲಂಕಾರಿಕ ಶಿಲೆಯನ್ನು ಗಣಿಯಿಂದ ಹೊರ ತೆಗೆದರೇ ಖನಿಜ ಸಂಪತ್ತು ಕ್ಷಿಣಿಸುತ್ತದೆ. ಆದರೆ, ಕೃಷಿಯಿಂದ ಮಾತ್ರವೇ ಆಹಾರ ಭದ್ರತೆ ದೊರೆಯುತ್ತಿದೆ ಎಂಬುದು ಹೋರಾಟಗಾರರ ಅಭಿಪ್ರಾಯ.

ಸುಳ್ಳು ಲೆಕ್ಕ ನೀಡಿ ದಾರಿ ತಪ್ಪಿಸುವ ಕೆಲಸ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪರಿಷತ್‌ ಸದಸ್ಯ ಎಸ್‌.ರವಿ ಈ ಕುರಿತು ಮಾಹಿತಿಯನ್ನು ಕೇಳಿದ್ದು, ವಾರ್ಷಿಕವಾಗಿ 12.63 ಕೋಟಿ ರಾಯಧನ ಸರ್ಕಾರಕ್ಕೆ ಕಳೆದ ಪ್ರಸಕ್ತದಲ್ಲಿ ದೊರೆತಿದೆ ಎಂದು ತಿಳಿಸಲಾಗಿದೆ. ಆದರೆ, ಇದರಲ್ಲಿ ಶೇ.30ರಷ್ಟು ಸ್ಥಳೀಯ ಖನಿಜ ಸಂಪನ್ಮೂಲ ನಿಧಿ(ಡಿಎಂಎಫ್)ಗೆ ನೀಡಬೇಕು. ಆದರೆ, ನೀಡಿರುವುದು 23.98 ಲಕ್ಷ ರೂ. ಮಾತ್ರ. ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಇಷ್ಟು ರಾಯಧನ ಪಡೆದು ಪುನಃ ರೈತರಿಗೆ ಪರಿಹಾರ ಧನ ನೀಡುವ ತಂತ್ರಗಾರಿಕೆಗೆ ಸರ್ಕಾರ ಬೆಂಬಲ ನೀಡುತ್ತಿರುವುದ ಬಗ್ಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತದೆ.

ಪಾಲನೆಯಾಗದ ನಿಯಮಗಳು: ಕೇಂದ್ರ ಸರ್ಕಾರದಿಂದ ನೀಡಲಾಗಿರುವ ನಿಯಮಗಳ ಪಾಲನೆಗೆ ಕಂಪನಿಗಳು ಹಿಂದೆಟ್ಟು ಹಾಕುತ್ತಿದ್ದು, ಈಗಾಗಲೇ ಸ್ಥಳೀಯ ನ್ಯಾಯಾಲಗಳು, ಲೋಕ ಅದಾಲತ್‌ನಲ್ಲಿ ನೀಡಲಾಗಿರುವ ನಿರ್ದೇಶನಗಳ ಕುರಿತು ಬಂಡೆ ಮಾರಾಟಗಾರರು ಗಮನ ಹರಿಸುತ್ತಿಲ್ಲ ಎಂಬುದು ನ್ಯಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗಣಿಯಲ್ಲಿ ನೀರು ಬಳಸಿ ಧೂಳು ಹೊರ ಹೋಗದಂತಹ ತಂತ್ರಜ್ಞಾನ ಪಾಲನೆ ಮಾಡಬೇಕು. ರಾತ್ರಿ ವೇಳೆಯಲ್ಲಿ ನ್ಪೋಟಕಗಳನ್ನು ಬಳಸಲು ಅವಕಾಶವಿಲ್ಲದಿದ್ದರೂ, ಇದಕ್ಕೆಲ್ಲಾ ಕಿಮ್ಮತ್ತು ನೀಡಲು ಯಾರು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ. ತಡೆಗೋಡೆ, ಬಫ‌ರ್‌ ಜೋನ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಉದ್ಯಮಿಗಳು ನಿರಂತರವಾಗಿ ಭೂ ತಾಯಿಯ ಗರ್ಭ ಬಗೆಯುವಲ್ಲಿ ನಿರತರಾಗಿದ್ದಾರೆ.

ಸರ್ಕಾರಿ ಸಂಸ್ಥೆಯಲ್ಲಿ ವರದಿಯಲ್ಲಿ ದ್ವಂದ್ವ : ರೈತರು ಗಣಿ ಧೂಳಿನಿಂದ ಉಂಟಾಗುತ್ತಿರುವ ಸಮಸ್ಯೆಯ ಕುರಿತು ವೈಜ್ಞಾನಿಕ ವರದಿಯನ್ನು ಸಲ್ಲಿಸಿರುವ ರಾಜ್ಯ ರೇಷ್ಮೆ ಸಂಶೋಧನೆ ಅಭಿವೃದ್ಧಿ ಸಂಸ್ಥೆಯ ಮಾರ್ಚ್‌ 2022ರ ವರದಿಯಲ್ಲಿ ಧೂಳಿನಿಂದ ಹಿಪ್ಪುನೇರಳೆ ಬೆಳೆ ಹಾಳಾಗುತ್ತಿದೆ. ಇದರಿಂದ ರೇಷ್ಮೆ ಇಳುವರಿಯಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಸಿದ್ದು, ಬಾಧಿತ 37 ರೈತರಿಗೆ 74.52 ಲಕ್ಷ ರೂ. ಪರಿಹಾರ ನೀಡಲು ಅಂದಾಜು ಮಾಡಲಾಗಿದೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾರ್ಚ್‌ 2022ರ ನೀಡುವ ವರದಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಉತ್ಪತ್ತಿಯಾಗುವ ಧೂಳಿನ ಪ್ರಮಾಣ ಸಮ್ಮತಿ ಪತ್ರದಲ್ಲಿ ನಿಗದಿಪಡಿಸಿರುವ ಪ್ರಮಾಣದ ಪರಿಮಿತಿಯಲ್ಲಿದೆ ಎನ್ನುತ್ತದೆ. ವರದಿಯ ದ್ವಂದ್ವಯುತ ಅಂಶಗಳು ಯಾರ ಶಿಫಾರಸು ಪ್ರಭಾವದಿಂದ ಬದಲಾಗಿದೆ ಎಂಬುದನ್ನು ಸಿದ್ಧಪಡಿಸಿದ ಕೈಗಳೇ ತಿಳಿಸಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next