Advertisement

Dalit CM ಕೂಗು ಕನಸಾಗೇ ಉಳಿಯಿತು: ಕೊರಟಗೆರೆ ಜನರ ನೋವು

06:34 PM May 25, 2023 | Team Udayavani |

ಕೊರಟಗೆರೆ: ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಟ್ಟು 37 ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ದಲಿತ ಸಿಎಂ ಕೂಗು ಚುನಾವಣೆ ವೇಳೆ ಪ್ರಚಾರಕ್ಕೆ ಮಾತ್ರ ಸಿಮೀತ ಅಷ್ಟೆ. ಕಳೆದ 70 ವರ್ಷದಿಂದ ದಲಿತರಿಗೆ ಸಿಎಂ ಮಾಡುತ್ತೇವೆ ಎಂಬ ಭರವಸೆ ಮಾತ್ರ ನೀಡುತ್ತಾರೆ ಅಷ್ಟೆ ಆದರೇ ಅದು ಕಾರ್ಯರೂಪಕ್ಕೆ ಬರೋದು ಯಾವಾಗ ಎಂಬುದು ಕೊರಟಗೆರೆ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆಯಾಗಿದೆ.

Advertisement

ರಾಜಕೀಯ ಕ್ಷೇತ್ರದ ಅಜಾತ ಶತ್ರು ಡಾ.ಜಿ.ಪರಮೇಶ್ವರ್ ಈಗಾಗಲೇ ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದು ಸಿಎಂ ಸ್ಥಾನಕ್ಕೆ ಇನ್ನೊಂದೇ ಮೆಟ್ಟಿಲು ಬಾಗಿ ಉಳಿದಿದೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಪರಮೇಶ್ವರಗೆ ಹೈಕಮಾಂಡ್ ಮುಂದೆಯಾದರೂ ಸಿಎಂ ಸ್ಥಾನದ ಅವಕಾಶ ಮಾಡಿಕೊಡುವುದೇ ಎಂಬುದನ್ನ ಅಭಿಮಾನಿಗಳು ಕಾಯುತ್ತಿದ್ದಾರೆ.

ಕನಸಾಗಿಯೇ ಉಳಿದ ದಲಿತ ಸಿಎಂ ಕೂಗು
1993-ವಿರಪ್ಪಮೋಯ್ಲಿ,1999-ಎಸ್.ಎಂ.ಕೃಷ್ಣ, 2015-ಸಿದ್ದರಾಮಯ್ಯ, 2018-ಕುಮಾರಸ್ವಾಮಿ, 2023-ಸಿದ್ದರಾಮಯ್ಯ ಆಡಳಿತದಲ್ಲಿ ಡಾ.ಜಿ.ಪರಮೇಶ್ವರ ಅವರಿಗೆ ಡಿಸಿಎಂ, ಗೃಹ ಸಚಿವ ಸೇರಿದಂತೆ 12 ಕ್ಕೂ ಅಧಿಕ ಖಾತೆಗಳನ್ನು ನಿಭಾಯಿಸಿದ ರಾಜಕೀಯ ಅನುಭವ ಇದೆ. ರಾಜೀವ್‌ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಅಚ್ಚುಮೆಚ್ಚಿನ ಆತ್ಮಿಯ ರಾಜಕಾರಣಿ ಆಗಿರುವ ಪರಮೇಶ್ವರ ಅವರಿಗೆ ಕರ್ನಾಟಕ ರಾಜ್ಯದ ದಲಿತ ಸಿಎಂ ಸ್ಥಾನವು ಸಿಗದೇ ಇನ್ನೂ ಕನಸಾಗಿಯೇ ಉಳಿದಿರೋದು ದುರ್ದೈವ ಎನ್ನುವುದು ಕೊರಟಗೆರೆ ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ.

 ಬಾಲ್ಯಜೀವನ..
ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯ ಮತ್ತು ಗಂಗಮಾಳಮ್ಮ ಅವರ ದ್ವಿತೀಯಪುತ್ರ ಡಾ.ಜಿ.ಪರಮೇಶ್ವರ. 1951ರಲ್ಲಿ ಸಿದ್ದಾರ್ಥನಗರ(ಗೊಲ್ಲಹಳ್ಳಿ) ಗ್ರಾಮದಲ್ಲಿ ಜನನ.1957 ಗೊಲ್ಲಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಪ್ರಾರಂಭ. 1975ರಲ್ಲಿ ಹೆಬ್ಬಾಳದ ಕೃಷಿ ವಿವಿಯಲ್ಲಿ ಎಂಎಸ್ಸಿ, ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ. 1984ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ, 1984ರಲ್ಲಿಯೇ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಗಿ ನೇಮಕ.1989ರಲ್ಲಿ ರಾಜೀವ್‌ಗಾಂಧಿ ಸಿದ್ದಾರ್ಥ ಕಾಲೇಜಿಗೆ ಆಗಮನ. 1989 ರಲ್ಲಿ ರಾಜೀವ್‌ಗಾಂಧಿ ಸಲಹೆಯಂತೆ ಮಧುಗಿರಿ ಕ್ಷೇತ್ರದಿಂದ ರಾಜಕೀಯ ರಂಗ ಪ್ರವೇಶ.

 ರಾಜಕೀಯ ಚರಿತ್ರೆ
ಮಧುಗಿರಿ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನದ ಮೊದಲ ಹೆಜ್ಜೆಹಾಕಿದ ಡಾ.ಜಿ.ಪರಮೇಶ್ವರ್ 1989 ರ ಪ್ರಥಮ ಸ್ಪರ್ಧೆಯಲ್ಲೇ ಜಯಗಳಿಸಿ 1993ರ ವಿರಪ್ಪಮೋಯ್ಲಿ ಆಡಳಿತದಲ್ಲಿ ರೇಷ್ಮೆಕೃಷಿ ಸಚಿವರಾದರು. 1999 ಮತ್ತು 2004ರಲ್ಲಿ ಮತ್ತೆ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಮಧುಗಿರಿಯಿಂದ ಕೊರಟಗೆರೆಗೆ ಆಗಮಿಸಿದ ಇವರು 2008ರಲ್ಲಿಯೂ ಗೆಲುವು ಸಾಧಿಸಿದರು.. 2013ರಲ್ಲಿ ಸೋತರೂ ಸಿದ್ದರಾಮಯ್ಯ ಆಡಳಿತದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಗೃಹ ಸಚಿವರಾದರು. 2018 ಮತ್ತು2023 ರ ಚುನಾವಣೆಯಲ್ಲಿ ಮತ್ತೆ ಗೆಲುವಿನ ಹೆಜ್ಜೆ ಗುರುತಿನ ಪಯಣವು ಸಾಗಿದೆ.

Advertisement

ಡಾ.ಜಿ.ಪರಮೇಶ್ವರ ಅವರ ರಾಜಕೀಯ ಜೀವನದ ಸ್ಪೂರ್ತಿಯೇ ರಾಜೀವ್‌ಗಾಂಧಿ. ಕೆಪಿಸಿಸಿ ಅಧ್ಯಕ್ಷರಾಗಿ ಸತತ 8 ವರ್ಷ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ ಅನುಭವ. ರಾಜ್ಯದ ಡಿಸಿಎಂ-ಗೃಹ ಸೇರಿದಂತೆ ಹತ್ತಾರು ಉನ್ನತ ಸಚಿವ ಖಾತೆ ನಿರ್ವಹಿಸಿದ ಹಿರಿಮೆ. ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಿಂದ 6 ನೇ ಸಲ ಆಯ್ಕೆಯಾದ ಕಪ್ಪುಚುಕ್ಕೆ ಇಲ್ಲದ ಶಾಸಕ. ಕಲ್ಪತರು ನಾಡಿನ ಶೈಕ್ಷಣಿಕ ಕ್ಷೇತ್ರದ ಭೀಷ್ಮ ಡಾ.ಜಿ.ಪರಮೇಶ್ವರ ರಾಜಕೀಯ ಕ್ಷೇತ್ರದ ಅಜಾತಶತ್ರು ಎನಿಸಿಕೊಂಡಿದ್ದಾರೆ.

ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆ ಸಾಧ್ಯ ಎಂಬ ಡಾ.ಬಿ.ಆರ್.ಅಂಬೇಡ್ಕರ್ ತತ್ವವನ್ನೇ ತನ್ನ ಸಿದ್ದಾಂತ ಮಾಡಿಕೊಂಡ ಡಾ.ಜಿ.ಪರಮೇಶ್ವರ ಕಲ್ಪತರು ನಾಡುಕಂಡ ನಿಜವಾದ ಶಿಕ್ಷಣ ಭೀಷ್ಮ ಎಂದು ಕರೆಯುತ್ತಾರೆ. ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಯ ರೂವಾರಿ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪ್ರಮುಖ ಆಧಾರಸ್ತಂಭ. 40 ವರ್ಷಗಳ ರಾಜಕೀಯ ಅನುಭವ ಇರುವಂತಹ ಹಿರಿಯ ರಾಜಕಾರಣಿ ಡಾ.ಜಿ.ಪರಮೇಶ್ವರ ಸೌಮ್ಯ ಸ್ವಭಾವದವರಾಗಿಯೂ ಜನಪ್ರಿಯರು.

ಹತ್ತಾರು ಖಾತೆ ನಿರ್ವಹಿಸಿದ ಪರಮೇಶ್ವರ್
1993 ರ ವೀರಪ್ಪಮೊಯ್ಲಿ ಆಡಳಿತದಲ್ಲಿ ಡಾ.ಜಿ.ಪರಮೇಶ್ವರ ಪ್ರಥಮವಾಗಿ ರೇಷ್ಮೆಕೃಷಿ ಸಚಿವ, 1999 ರ ಎಸ್.ಎಂ.ಕೃಷ್ಣ ಆಡಳಿತದಲ್ಲಿ ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸೇವೆ. 2010 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ, ಸಿದ್ದರಾಮಯ್ಯ ಆಡಳಿತದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ 2015 ರಲ್ಲಿ ಗೃಹ ಸಚಿವ, 2018ರ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ, ಗೃಹಸಚಿವರಾಗಿ ಸೇವೆ ಸಲ್ಲಿಸಿದ ಡಾ.ಜಿ.ಪರಮೇಶ್ವರ್ ಅವರಿಗೆ ಈಗ ಸಿದ್ದರಾಮಯ್ಯ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ.

ರಾಜಕೀಯ ಕ್ಷೇತ್ರದ ಅಜಾತಶತ್ರು-ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಡಾ.ಜಿ.ಪರಮೇಶ್ವರ.70 ವರ್ಷದಿಂದ ದಲಿತ ಸಿಎಂ ಕೂಗು ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತ ಆಗಿದೆ. 40 ವರ್ಷದ ರಾಜಕೀಯ ಅನುಭವ ಇರುವ ಡಾ.ಜಿ.ಪರಮೇಶ್ವರ ಅವರಿಗೆ ಕಾಂಗ್ರೆಸ್ ಪಕ್ಷವು ಮುಂದಿನ ದಿನದಲ್ಲಿ ಸಿಎಂ ಮಾಡಿ ದಲಿತರ ಕೂಗಿಗೆ ಧ್ವನಿಗೂಡಿಸಿ ಸಾಮಾಜಿಕ ನ್ಯಾಯ ನೀಡಬೇಕಿದೆ ಎಂದು ಕೊರಟಗೆರೆ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next