Advertisement

“ಟಿಕೆಟ್‌ ಕೊಡದಿದ್ದರೆ ಉಚಿತವಾಗಿ ಪ್ರಯಾಣಿಸಿ’

08:53 PM Oct 04, 2019 | mahesh |

ಮಹಾನಗರ: ಇನ್ನು ಮುಂದೆ ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ. ನಿರ್ವಾಹಕರು ಕಿರುಕುಳ ನೀಡಿದಲ್ಲಿ ಬಸ್‌ ಮಾಲಕರ ಸಂಘದ ಮುಖ್ಯಸ್ಥರ ವಾಟ್ಸಾಪ್‌ ನಂಬರಿಗೆ ಬಸ್‌ ನಂಬರು ಸಹಿತ ದೂರು ನೀಡಿ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿ ಈ ಸಲಹೆ ನೀಡಿದರು. ಬಸ್‌ನಲ್ಲಿ ಪ್ರಯಾಣಿಸುವವರಿಗೆ ಕಂಡಕ್ಟರ್‌ ಟಿಕೆಟ್‌ ನೀಡದೆ ಪ್ರಯಾಣ ದರ ಪಡೆಯುವಂತಿಲ್ಲ. ಈ ಬಗ್ಗೆ ಹಲವು ಬಾರಿ ಬಸ್ಸು ಮಾಲಕರ ಸಂಘದ ಮೂಲಕ ಬಸ್ಸು ಸಿಬಂದಿಗೆ ಸೂಚನೆ ನೀಡಲಾಗಿದೆ. ಹಾಗಾಗಿ ಸಾರ್ವಜನಿಕ ಪ್ರಯಾಣಿಕರು ಕೂಡ ಟಿಕೆಟ್‌ ಪಡೆದೇ ಹಣವನ್ನು ನೀಡಬೇಕು. ಒಂದು ವೇಳೆ ನಿರ್ವಾಹಕರು ಟಿಕೆಟ್‌ ನೀಡದಿದ್ದರೆ ಅಥವಾ ಈ ಬಗ್ಗೆ ತಗಾದೆ ಎತ್ತಿದರೆ 7996999977 ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಮೂಲಕ ದೂರು ನೀಡಿ. ಈ ಬಗ್ಗೆ ಸಂಘದ ಮುಖ್ಯಸ್ಥರು ಸಂಬಂಧಪಟ್ಟ ನಿರ್ವಾಹಕರು ಹಾಗೂ ಬಸ್‌ನ ಮಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವರು ಎಂದರು.

ಕರ್ಕಶ ಹಾರ್ನ್ ಮಾರಾಟಗಾರರ ಅಂಗಡಿಗಳಿಗೆ ನೋಟೀಸ್‌!
ಬಸ್‌ಗಳಲ್ಲಿ ಕರ್ಕಶ ಹಾರ್ನ್, ನಿಗದಿತ ಪ್ರಮಾಣಕ್ಕಿಂತ ಅಧಿಕ ಶಬ್ದದ ಹಾರ್ನ್ ಬಳಸ ಬಾರದೆಂದು ಕಾನೂನಿನಲ್ಲಿಯೇ ನಿರ್ಬಂಧವಿದೆ. ಹಾಗಿದ್ದರೂ ಬಳಕೆ ಮುಂದುವರಿದಿದೆ. ಇಂತಹ ಹಾರ್ನ್ ಗಳನ್ನು ಅಳವಡಿಸುವ ಬಸ್‌ಗಳ ಮಾಲ ಕರಿಗೆ ದಂಡ ವಿಧಿಸುವುದು ಮಾತ್ರವಲ್ಲ, ಇನ್ನು ಮುಂದೆ ನಿರ್ಬಂಧಿತ ಹಾರ್ನ್ಗಳ ಮಾರಾಟಗಾರರಿಗೂ ನೋಟೀಸ್‌ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪ್ರಾರ್ಥನ ಮಂದಿರಗಳ ಬಳಿ ಸ್ವಯಂಸೇವಕರ ನೇಮಕಕ್ಕೆ ಕ್ರಮ
ಪ್ರತಿಯೊಂದು ಪ್ರಾರ್ಥನ ಮಂದಿರಗಳಲ್ಲಿ ನಿಗದಿತ ದಿನ, ಸಂದರ್ಭಗಳಲ್ಲಿ ಅಲ್ಲಿನ ಸ್ವಯಂಸೇವಕರನ್ನು ವಾಹನ ಸಂಚಾರ ನಿಯಂತ್ರಿಸಲು ನೇಮಿಸಲು ಸೂಚಿಸಬೇಕು. ಅವರಿಗೆ ಟ್ರಾಫಿಕ್‌ ಪೊಲೀಸರಿಂದ ತರಬೇತಿ ನೀಡಬೇಕು. ನಿಗದಿತ ಸ್ಥಳದಲ್ಲಿ ಪಾರ್ಕಿಂಗ್‌ ಮುಗಿದ ಬಳಿಕ ಅಡ್ಡಾದಿಡ್ಡಿ ವಾಹನ ನಿಲ್ಲಿಸದಂತೆ ಪ್ರಾರ್ಥನಾ ಸ್ಥಳಗಳಿಗೆ ಬರುವವರಿಗೆ ಸಲಹೆ ನೀಡುವಂತೆ ಎಂದು ಆಯುಕ್ತ ಡಾ| ಹರ್ಷ ತಿಳಿಸಿದರು.

ಮರಳು ಲಾರಿಗಳ ಹಾವಳಿ
ಮಂಜನಾಡಿ- ನಾಟೆಕಲ್‌ ಬಳಿ ಮರಳು ಲಾರಿಗಳ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರೊಬ್ಬರು ನೀಡಿದ ದೂರಿಗೆ ಸ್ಪಂದಿಸಿದ ಪೊಲೀಸ್‌ ಆಯು ಕ್ತರು, ಇಲ್ಲಿ ಚೆಕ್‌ಪೋಸ್ಟ್‌ ಹಾಕಿಸಿ ಕ್ರಮ ವಹಿಸಲಾಗುವುದು ಎಂದರು.

Advertisement

ಗಣಪತಿ ಹೈಸ್ಕೂಲ್‌ ರಸ್ತೆ ಬಳಿ ರಸ್ತೆಗೆ ಹಂಪ್‌ ಹಾಕಿಸಬೇಕು. ಮಂಗಳೂರು- ಕಾಸರಗೋಡು ಬಸ್‌ಗಳು ಸಂಜೆ 6 ಗಂಟೆ ಬಳಿಕ ಸಮರ್ಪಕವಾಗಿ ಸಂಚರಿಸುತ್ತಿಲ್ಲ. ಸ್ಟೇಟ್‌ ಬ್ಯಾಂಕ್‌- ಜೋಕಟ್ಟೆಗೆ 2ಸಿ ಮಾರ್ಗದ ಒಂದು ಬಸ್‌ ಓಡಾಡುತ್ತಿಲ್ಲ ಎಂಬಿತ್ಯಾದಿ ದೂರುಗಳು ವ್ಯಕ್ತವಾದುವು.

ಕಾವೂರಿನಲ್ಲಿ ಒಂದು ವೈನ್‌ಶಾಪ್‌ ಬೆಳಗ್ಗಿನಿಂದಲೇ ತೆರೆದು ಕಾರ್ಯಾ ಚರಿಸುತ್ತಿದೆ ಎಂದು ನಾಗರಿಕರೊಬ್ಬರು ದೂರಿದರು. ಈ ಬಗ್ಗೆ ಪೊಲೀಸ್‌ ಠಾಣೆ ಯಲ್ಲಿ ಕೇಸು ದಾಖಲಾಗಿದ್ದು, ವೈನ್‌ ಶಾಪ್‌ನ ಲೈಸನ್ಸ್‌ ಬಗ್ಗೆ ಕಾನೂನು ಕ್ರಮವನ್ನು ಅಬಕಾರಿ ಇಲಾಖೆ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿ ಗಳಿಗೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.

ಇದು 125ನೇ ಫೋನ್‌ ಇನ್‌ ಕಾರ್ಯ ಕ್ರಮವಾಗಿದ್ದು, ಒಟ್ಟು 15 ಕರೆಗಳು ಬಂದವು. ರಾಜವರ್ಮ ಬಲ್ಲಾಳ್‌, ದಿಲ್‌ರಾಜ್‌ ಆಳ್ವ, ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀ ಪ್ರಸಾದ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್‌ ಎ. ಗಾಂವ್‌ಕರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಜಿ.ಕೆ. ಭಟ್‌, ಅಮಾನುಲ್ಲಾ, ಮೋಹನ್‌ ಕೊಟ್ಟಾರಿ, ಗುರುದತ್ತ ಕಾಮತ್‌, ಎಎಸ್‌ಐ ಬಾಲಕೃಷ್ಣ, ಹೆಡ್‌ ಕಾನ್‌ ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ಅಪಘಾತದ ಸಾವಿಗೆ ಅಸಮರ್ಪಕ ರಸ್ತೆ ಕಾಮಗಾರಿ ಕಾರಣ: ಕೇಸು ದಾಖಲು ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರರೊಬ್ಬರು ಸಾವನ್ನಪ್ಪಿದ್ದು, ಇದಕ್ಕೆ ಅಸಮರ್ಪಕ ರಸ್ತೆಯೇ (ರೋಡ್‌ ಎಂಜಿನಿಯರಿಂಗ್‌) ಕಾರಣ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಿ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಆಯುಕ್ತ ಡಾ| ಹರ್ಷ ಪಿ.ಎಸ್‌. ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next