Advertisement

ಕ್ಷೀರ ಕ್ರಾಂತಿಯ ಹರಿಕಾರರಿಗೆ ನಮೋ ನಮಃ

11:26 PM Nov 25, 2022 | Team Udayavani |

ಹಾಲು ಅಮೃತಕ್ಕೆ ಸಮಾನವಾಗಿದ್ದು ದೇವರ ಅಭಿಷೇಕ ಮತ್ತು ನೈವೇದ್ಯಗಳಲ್ಲಿ ಹಾಲಿಗೆ ಮೊದಲ ಸ್ಥಾನ ಪ್ರಾಪ್ತಿಯಾಗಿದೆ. ಮಾನವನ ಸಹಿತ ವಿಶ್ವದಲ್ಲಿ ಜನಿಸಿದ ಪ್ರತಿಯೊಂದು ಸಸ್ತನಿ ಸ್ವೀಕರಿಸುವ ಮೊದಲ ಆಹಾರ ತಾಯಿಯ ಹಾಲು. ಅನಂತರದ ದಿನಗಳಲ್ಲಿ ಸೇವಿಸುವ ಹಾಲೇ ಹಸುವಿನ ಹಾಲು. ಮಾನವನ ಬದುಕಿನಲ್ಲಿ ಆರಂಭ ದಿಂದ ಆಂತ್ಯದವರೆಗೂ ಹಾಲು ಅತೀ ಅಗತ್ಯ, ಈ ನೆಲೆಯಲ್ಲಿ ಹಾಲು ತನ್ನದೇ ಆದ ಮಹತ್ವ ಪಡೆದಿದೆ.

Advertisement

ಹಾಲು ಸಾರ್ವಕಾಲಿಕ ಆಹಾರವಾಗಿದ್ದು, ಹಾಲಿನಲ್ಲಿ ಕ್ಯಾಲ್ಸಿಯಂ, ಸಾರಜನಕ, ಪ್ರೊಟೀನ್‌, ಜಿಡ್ಡು, ಸಕ್ಕರೆ ಅಂಶ, ಕಾರ್ಬೋಹೈಡ್ರೇಟ್‌, ನೀರಿನಾಂಶ, ರೋಗ ನಿರೋಧಕ ಶಕ್ತಿ ಮುಂತಾದ ಪ್ರಮುಖ ಅಂಶಗಳನ್ನು ಹೊಂದಿದ್ದು, ದೇಹದ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

50 ವರ್ಷಗಳ ಹಿಂದೆ ಪ್ರತೀ ಕೃಷಿಕರ ಮನೆಯಲ್ಲಿ ಕೃಷಿಗೆ ಪೂರಕವಾಗಿ ಗೋವುಗಳನ್ನು ಸಾಕುತ್ತಿದ್ದರು. ಪ್ರತೀ ರೈತ ನಲ್ಲಿರುವ ಜಮೀನು ಮತ್ತು ಗೋವುಗಳನ್ನು ಲೆಕ್ಕಿಸಿ ಅವನ ಸಂಪತ್ತನ್ನು ಅಳೆಯುತ್ತಿದ್ದರು. ಆದರೆ ಈಗ ಹೈನುಗಾರಿಕೆ ಒಂದು ಉಪಕಸುಬು ಆಗಿರದೆ ಉದ್ಯಮವಾಗಿ ಬೆಳೆದಿದೆ.

ಕ್ಷೀರಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌: ಯಾವಾಗ ಭಾರತದ ಹಾಲು ವಿತರಕ ಮತ್ತು ಕ್ಷೀರಕ್ರಾಂತಿಯ ಪಿತಾಮಹ ವರ್ಗೀಸ್‌ ಕುರಿಯನ್‌ ಅವರು ಹೈನೋದ್ಯಮದಲ್ಲಿ ಹಾಲಿನ ಉತ್ಪನ್ನಗಳ ಬ್ರಾಂಡ್‌ ಸೃಷ್ಟಿ ಮಾಡಿ ಹಾಲು ಮತ್ತು ಆದರ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ ರೂಪಿಸಲು ಕಾರಣಕರ್ತರಾದರೋ ಅಂದಿನಿಂದ ಜಗತ್ತಿನ ಅತೀ ದೊಡ್ಡ ಡೈರಿ ಅಭಿವೃದ್ಧಿ ಯೋಜನೆ ಪ್ರಾರಂಭಗೊಂಡಿತು.

ಕೇರಳದ ಕೋಯಿಕ್ಕೋಡ್‌ನ‌ಲ್ಲಿ 1921ರ ನವಂಬರ್‌ 26ರಂದು ವರ್ಗೀಸ್‌ ಕುರಿಯನ್‌ ಜನಿಸಿದರು. ಭೌತಶಾಸ್ತ್ರ ದಲ್ಲಿ ಪದವಿ ಪಡೆದು ಬಿ.ಇ. ಶಿಕ್ಷಣ ಪೂರೈಸಿ ಅಮೆರಿಕದಲ್ಲಿ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್‌.ಸಿ. ಪದವಿ ಪಡೆದರು. 1948ರಲ್ಲಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ ಕುರಿಯನ್‌, ಸರಕಾರಿ ಸೇವೆಗೆ ಸೇರಿ ಆನಂದ್‌ ನಗರದಲ್ಲಿ ಹಾಲಿನ ಪೌಡರ್‌ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ ಹಾಲು ಉತ್ಪಾದನ ಸಂಘಟನೆಯು ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದ್ದನ್ನು ಗಮನಿಸಿದ ಕುರಿಯನ್‌ ಅವರು ಸರಕಾರಿ ಸೇವೆ ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು. ತನ್ಮೂಲಕ ಭಾರತದಲ್ಲಿ ಡೈರಿ ಅತೀದೊಡ್ಡ ಮತ್ತು ಅತ್ಯಂತ ಯಶಸ್ವಿ ಉದ್ಯಮವಾಗಿ ಬೆಳೆಯಲು ಅಡಿಗಲ್ಲು ಹಾಕಿದರು.

Advertisement

ಸಹಕಾರಿ ರಂಗದ ಅಮೂಲ್‌ ಮಾದರಿಯು ಎಷ್ಟು ಯಶಸ್ವಿಯಾಯಿತೆಂದರೆ ಲಾಲ್‌ ಬಹದ್ದೂರ್‌ ಶಾಸಿŒ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿ ವರ್ಗೀಸ್‌ ಕುರಿಯನ್‌ ಅವರನ್ನು ಅದರ ಆಧ್ಯಕ್ಷರನ್ನಾಗಿ ನೇಮಿಸುವಂತೆ ಮಾಡಿತು. 1973 ರಲ್ಲಿ ಗುಜರಾತ್‌ ಕೋ ಆಪರೇಟಿವ್‌ ಮಿಲ್ಕ್ ಮಾರ್ಕೆ ಟಿಂಗ್‌ ಫೆಡೆರೇಶನ್‌ ಸ್ಥಾಪಿಸಿ, ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು. ಹೀಗೆ ವರ್ಗೀಸ್‌ ಕುರಿಯನ್‌ ಭಾರತ ವನ್ನು ಹಾಲು ಉತ್ಪಾದನ ದೇಶವನ್ನಾಗಿ ಮಾಡಿದರು.

ಅತ್ಯಂತ ಕುಶಲ ಮತ್ತು ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗೀಸ್‌ ಕುರಿ ಯನ್‌ ಅವರು ಯಾವುದೇ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ “ಹೇಗೆ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ಮತ್ತು ದೇಶಕ್ಕೆ ದಾರಿದೀಪವಾಗಬಹುದು’ ಎಂಬುದನ್ನು ಸಮರ್ಥವಾಗಿ ಪ್ರತಿಬಿಂಬಿಸಿದರು. ಭಾರತದ ಕ್ಷೀರಕ್ರಾಂತಿಯ ಪಿತಾಮಹ, “ಮಿಲ್ಕ್ ಮ್ಯಾನ್‌ ಆಫ್ ಇಂಡಿಯಾ’ ಎನ್ನುವ ಖ್ಯಾತಿಯನ್ನು ಪಡೆದ ಕುರಿಯನ್‌, ಭಾರತ ಸರಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಶ್ರೀ, ವಿಶ್ವ ಆಹಾರ ಪ್ರಶಸ್ತಿ ಮುಂತಾದ ಶೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು. ಕುರಿಯನ್‌ರ ಜನ್ಮ ದಿನವಾದ ನವಂಬರ್‌ 26 ರಂದು ದೇಶದಲ್ಲಿ ಪ್ರತೀ ವರ್ಷ ರಾಷ್ಟ್ರೀಯ ಹಾಲು ದಿನವನ್ನು ಆಚರಿಸುವುದರ ಮೂಲಕ ಅವರನ್ನು ಸ್ಮರಿಸುವ ಕಾರ್ಯ ನಡೆಯುತ್ತಾ ಬಂದಿರುವುದು ಶ್ಲಾಘನೀಯ.

ವರ್ಗೀಸ್‌ ಕುರಿಯನ್‌ರಂತೆಯೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೀರ ಕ್ರಾಂತಿಯ ಹರಿಕಾರರು, ಕೇಂದ್ರ ಸಚಿ ವರೂ ಅಲ್ಲದೆ ವಾಣಿಜ್ಯ, ಬ್ಯಾಂಕಿಂಗ್‌, ಶಿಕ್ಷಣ, ವೈದ್ಯ ಕೀಯ ಮತ್ತು ಪತ್ರಿಕಾರಂಗ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಮಾಡಿ, ಜನಸಾಮಾನ್ಯರ ಬದುಕಿಗೆ ದಾರಿದೀಪವನ್ನು ಒದಗಿಸಿದ ಟಿ.ಎ. ಪೈ ಅವರನ್ನು ಕೂಡ ಇಂದು ನಾವು ಸ್ಮರಿಸಬೇಕಾಗಿದೆ.

ಟಿ.ಎ. ಪೈ ಅವರು 4 ದಶಕಗಳ ಹಿಂದೆ ಉಡುಪಿ, ಕುಂದಾ ಪುರ, ಕಾರ್ಕಳ ತಾಲೂಕುಗಳ ಹಳ್ಳಿಗಳ ರೈತರನ್ನು ಸಂಘಟಿಸಿ ಮಣಿಪಾಲದಲ್ಲಿ ಕೆನರಾ ಮಿಲ್ಕ್ ಯೂನಿಯನ್‌ ಸ್ಥಾಪಿಸಿ, ಸಾವಿರಾರು ಕುಟುಂಬಗಳಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟ ಮಹನೀಯರು. ಮುಂದೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸ್ಥಾಪನೆಗೂ ಕಾರಣಕರ್ತರಾದ ಟಿ.ಎ. ಪೈ ಅವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಈ ಮಹನೀಯರ ಅವಿರತ ಪ್ರಯತ್ನದ ಫ‌ಲದಿಂದಾಗಿ ಪ್ರಸ್ತುತ ದೇಶದಲ್ಲಿನ 27 ರಾಜ್ಯಗಳಲ್ಲಿ ಹೈನು ಮಹಾ ಮಂಡಲಗಳು, ಸರಿಸುಮಾರು 1,77,000 ಹಾಲು ಉತ್ಪಾದಕ ಸಂಘಗಳಿದ್ದು 1.70 ಕೋಟಿಗಿಂತಲೂ ಹೆಚ್ಚು ಹಾಲು ಉತ್ಪಾದಕರಿದ್ದಾರೆ. ರಾಷ್ಟ್ರದಲ್ಲಿ 2ನೇ ಅತೀ ದೊಡ್ಡ ಹಾಲು ಒಕ್ಕೂಟವಾಗಿ ಕರ್ನಾಟಕ ಹಾಲು ಮಹಾಮಂಡಲ ಮೂಡಿಬಂದಿದ್ದು, ಅದರ ಆಶ್ರಯದಲ್ಲಿ 16 ಒಕ್ಕೂಟಗಳು ಕಾರ್ಯಾಚರಿಸು ತ್ತಿದ್ದು, ಸರಿಸುಮಾರು 15,000 ಹಾ. ಉ. ಸಹಕಾರಿ ಸಂಘಗಳ ಮೂಲಕ 25.85 ಲಕ್ಷ ಉತ್ಪಾದಕ ಸದಸ್ಯರಿಂದ ಪ್ರತೀನಿತ್ಯ 90 ಲಕ್ಷ ಲೀ. ಹಾಲು ಶೇಖರಣೆಗೊಂಡು 25 ಕೋ. ರೂ. ಗಿಂತಲೂ ಅಧಿಕ ಮೊತ್ತ ಪ್ರತಿನಿತ್ಯ ರೈತರಿಗೆ ಬಟವಾಡೆ ಆಗಿ ರೈತರು ಸ್ವಾವಲಂಬಿ ಬದುಕಿನತ್ತ ಸಾಗುತ್ತಿದ್ದಾರೆ. ಹೆಚ್ಚುತ್ತಿರುವ ಹಾಲಿನ ಉತ್ಪಾದನ ವೆಚ್ಚಕ್ಕೆ ಅನುಗುಣವಾಗಿ ಹಾಲು ಉತ್ಪಾದಕರಿಗೆ ಸೂಕ್ತ ಬೆಲೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹಾಲು ಮಹಾಮಂಡಲ ಮತ್ತು ಸರಕಾರ ಹೆಚ್ಚಿನ ಲಕ್ಷ್ಯ ಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ.

-ಕನ್ನಾರು ಕಮಲಾಕ್ಷ ಹೆಬ್ಬಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next