ಗಳಿಸಿದ್ದಕ್ಕೆ ಖುಷಿಪಡದಿದ್ದರೂ ಪರವಾಗಿಲ್ಲ, ಕಳೆದುಕೊಂಡದ್ದಕ್ಕೆ ದುಃಖಿಸಲೇಬಾರದು
ಲೆಕ್ಕಕ್ಕೆ ಸಿಗದ ದುಡ್ಡನ್ನು ಹೇಗೆ ಬೇಕಾದರೂ ಖರ್ಚು ಮಾಡಿದರೂ ಅಡ್ಡಿಯಿಲ್ಲ. ಆದರೆ ಲೆಕ್ಕದಲ್ಲೇ ಇರುವ ದುಡ್ಡನ್ನು ಹಾಗೆ ಖರ್ಚು ಮಾಡಿ ಎಂದರೆ ಸಿಟ್ಟು ಬರುತ್ತಲ್ಲವೇ?
ಆದರೆ ಟಿಕೆಟ್ ಆಕಾಂಕ್ಷಿಗಳಿಗೆ ಸಿಟ್ಟು ಬರುವುದಿಲ್ಲ, ದುಃಖವಾಗುತ್ತದೆ, ಅಳು ಬರುತ್ತದೆ. ತೋರಿಸುವಂತಿಲ್ಲ. ಅದು ಪ್ರದರ್ಶನಕ್ಕಲ್ಲ !
ಎದುರು ಇರುವವನು ಕ್ಷೇತ್ರದ ಮತದಾರ. ಅವನ ಮುಂದೆ ನಗುತ್ತಲೇ ವೋಟು ಕೇಳಬೇಕು. ಸ್ವಲ್ಪ ದುಃಖ ತೋರಿಸಿದರೂ ನೂರಾರು ಅರ್ಥಗಳು. ನನ್ನ ಮತದಾರರ ಪಕ್ಕದವನು ಆಪೋಸಿಶನ್ ಪಾರ್ಟಿಯವನಾಗಿದ್ದರೆ?
ಎಲ್ಲವನ್ನೂ ಸಹಿಸಬೇಕು ತೀರಾ ಅಸಹನೆ ಯಿಂದಲೇ. ಮತದಾರರಿಗೂ ಭಾವಿ ಅಭ್ಯರ್ಥಿ ಗಳ “ಸಂಕಷ್ಟ” ಅರಿವಿಗೆ ಬಂದಿದೆ. ಅದಕ್ಕೇ ಕ್ರಿಕೆಟ್ನಿಂದ ಹಿಡಿದು ಎಲ್ಲ ಬಗೆಯ ಪಂದ್ಯಾಟ ನಡೆಸುವವರು ತಮ್ಮ “ನಾಯಕರ”ನ್ನು “ಬರಬೇಕು ಸಾರ್” ಎಂದು ಕರೆಯುತ್ತಾರೆ. ಈ ಭಾವಿಗಳಿಗೋ ಹೋಗದೆ ವಿಧಿಯಿಲ್ಲ. ಹೋದರೆ ಜೇಬಿಗೆ ಭಾರ, ಹೋಗದಿದ್ದರೆ ಮತದಾರ ಬಾರ.. ಅಳೆದೂ ಸುರಿದೂ ಹೋಗುತ್ತಾರೆ. ಪಂದ್ಯದ ಮಧ್ಯೆಯೋ ಅಥವಾ ಎಲ್ಲ ಮುಗೀತು ಎನ್ನುವಾಗಲೋ.. ಕೊನೇ ಗಳಿಗೆಯಲ್ಲಿ ಹೋಗಿ ಒಂದು ದೇಶಾವರಿ ನಗೆ ಕೊಟ್ಟು, ಹಾಗೆಯೇ ಜೋರಾಗಿ ಕೈ ಮುಗಿದು “ನಾನೇ ಈ ಬಾರಿ ಅಭ್ಯರ್ಥಿ, ಮರೆಯಬೇಡಿ” ಎಂದು ಒಂದು ಸಮಗ್ರ ಮನವಿ ಅರ್ಪಿಸಿ ಅಲ್ಲಿಂದ ಹೊರಡಲು ಅನುವಾದಾಗ ಮತ್ತೂಂದು ಕಡೆಯಿಂದ ಕರೆ, “ಸಾರ್, ಕಾಯ್ತಾ ಇದ್ದೀವಿ. ಉದ್ಘಾಟನೆಗೆ ಬರ್ತೀನಿ ಅಂದ್ರಿದ್ರಿ, ಪರವಾಗಿಲ್ಲ, ಸಮಾರೋಪದ ಹೊತ್ತಾಯಿತು” ಎಂದು.
Related Articles
ತಮ್ಮ ನಾಯಕನ ಸಂಕಷ್ಟವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾ ಏನೂ ಹೇಳಲಾಗದೆ ಸಣ್ಣದೊಂದು ಮುಗುಳ್ನಗೆ ಬೀರಿದಾಗ, ನಾಯಕನೂ ಸಂಕಟದ ನಗೆ ಬೀರಿ ಕಾರು ಹತ್ತುತ್ತಾನೆ. ಅಷ್ಟರಲ್ಲಿ ಮತ್ತೂಂದು ಕರ ಕರೆ.. ಅದಕ್ಕೆ ಉತ್ತರ – “ಸಾಹೇಬ್ರು ಕಾರ್ಯಕ್ರಮದಲ್ಲಿದ್ದಾರೆ. ಮತ್ತೆ ಫೋನ್ ಮಾಡ್ತಾರೆ”..
ಗೆಲುವು ಅನಿಶ್ಚಿತ, ಖರ್ಚು ಮಾತ್ರ ನಿಶ್ಚಿತ.
~ಡಾ. ಗಂಪತಿ