ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ಮಂಗಳೂರು ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಓಪನ್ ರ್ಯಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ “ಎಂಆರ್ಪಿಎಲ್ ಟ್ರೋಫಿ’ಗೆ ಬುಧವಾರ ಆರಂಭಗೊಂಡಿತು.
9 ಸುತ್ತುಗಳ ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯಗಳ ಸುಮಾರು 340 ಮಂದಿ ಭಾಗವಹಿಸಿದ್ದಾರೆ. 4 ವರ್ಷದ ಮಕ್ಕಳಿಂದ ಹಿರಿಯರವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು. ಟೂರ್ನಿಯಲ್ಲಿ 2.4 ಲಕ್ಷ ನಗದು ಬಹುಮಾನ, ವಿವಿಧ ವಿಭಾಗಗಳ ಟ್ರೋಫಿ ಜತೆಗೆ ಸುಮಾರು ನೂರೈವತ್ತಕ್ಕೂ ಹೆಚ್ಚು ಬಹುಮಾನಗಳು ಇರಲಿವೆ. ಗುರುವಾರದಂದು ಬ್ಲಿಟ್ಜ್ ಟೂರ್ನಮೆಂಟ್ ನಡೆಯಲಿದೆ.
ಎಂಆರ್ಪಿಎಲ್ನ ಜಿಜಿಎಂ (ಎಚ್ಆರ್) ಕೃಷ್ಣ ಹೆಗ್ಡೆ ಅವರು ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಬುದ್ಧಿಗೆ ಕೆಲಸ ಕೊಡುವ ಚೆಸ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಯಶಸ್ಸು ಕಾಣಲಿ. ಮುಂದಿನ ದಿನಗಳಲ್ಲಿಯೂ ಈ ರೀತಿಯ ಪಂದ್ಯಾವಳಿಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್ ಮಾತನಾಡಿ, ಚದುರಂಗ ಭಾರತದಲ್ಲಿ ಪುರಾತನ ಕಾಲದಿಂದಲೂ ಹೆಸರುಗಳಿಸಿದೆ. ಆಲೋಚನೆಗಳನ್ನು ಬೆಳೆಸಿಕೊಳ್ಳಲು ಚೆಸ್ ಪಂದ್ಯಾಟ ಸಹಕಾರಿಯಾಗುತ್ತದೆ ಎಂದರು.
ಜೀನಿಯಸ್ ಚೆಸ್ ಸ್ಕೂಲ್ ಸ್ಥಾಪಕಾಧ್ಯಕ್ಷ ಸತ್ಯಪ್ರಸಾದ್ ಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ| ಅಮರಶ್ರೀ ಎ. ಶೆಟ್ಟಿ ಸಹಿತ ಟೂರ್ನಮೆಂಟ್ ಸಲಹ ಸಮಿತಿಯ ಸದಸ್ಯರು, ಅಸೋಸಿಯೇಶನ್ ಪದಾಧಿಕಾರಿಗಳು ಇದ್ದರು.
ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಸ್ವಾಗತಿಸಿ, ವಾಣಿ ಎಸ್. ಪಣಿಕ್ಕರ್ ನಿರೂಪಿಸಿದರು. ಅಭಿಷೇಕ್ ಕಟ್ಟೆಮಾರ್ ವಂದಿಸಿದರು.