ಢಾಕಾ: ಇತ್ತ ಭಾರತ ದೀಪಾವಳಿ ಸಂಭ್ರಮದಲ್ಲಿದ್ದರೆ, ಅತ್ತ ನೆರೆಯ ಬಾಂಗ್ಲಾ ದೇಶವು ಚಂಡಮಾರುತದಿಂದ ತತ್ತರಿಸುತ್ತಿದೆ. ಸಿತ್ರಂಗ್ ಚಂಡಮಾರುತವು ಬಾಂಗ್ಲಾ ದೇಶದಲ್ಲಿ ಇದುವರೆಗೆ 9 ಬಲಿ ಪಡೆದಿದೆ.
ಕುಮಿಲ್ಲಾದಲ್ಲಿ ಒಂದು ಕುಟುಂಬದ ಮೂವರು, ಭೋಲಾದಲ್ಲಿ ಇಬ್ಬರು ಮತ್ತು ನರೈಲ್, ಶರಿಯತ್ಪುರ, ಬರ್ಗುನಾ ಮತ್ತು ಢಾಕಾದಲ್ಲಿ ತಲಾ ಒಬ್ಬರು ಸೇರಿದಂತೆ9 ಮಂದಿ ಅಸುನೀಗಿದ್ದಾರೆ. ಭಾರೀ ಗಾಳಿಗೆ ಬೇರು ಸಮೇತ ಮರಗಳು ನೆಲಕ್ಕುರುಳಿದಿವೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ಗಳು ಮತ್ತು ಇಂಟರ್ನೆಟ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ನೆಟ್ವರ್ಕ್ ಪುನಃಸ್ಥಾಪಿಸಲಾಗಿದ್ದು, ಪಿರೋಜ್ ಪುರ ಮತ್ತು ಮದರಿಪುರ ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ:ಕಾಂತಾರಕ್ಕೆ ಸಂಕಷ್ಟ; ‘ವರಾಹಂ ರೂಪಂ’ ಟ್ಯೂನ್ ನಮ್ಮಿಂದ ಕದ್ದಿದ್ದು ಎಂದ ‘ನವರಸಂ’ ತಂಡ
ಬಾಂಗ್ಲಾ ಸರ್ಕಾರವು 15 ಕರಾವಳಿ ಜಿಲ್ಲೆಗಳಲ್ಲಿ 7,030 ಆಶ್ರಯ ಕೇಂದ್ರಗಳನ್ನು ತೆರೆದಿದೆ. ಕಡಲ ತೀರದ ಜನರನ್ನು ಸ್ಥಳಾಂತರಿಸಿ ಈ ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಇದುವರೆಗೆ ಈ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಸದ್ಯ ಚಂಡಮಾರುತದ ಅಬ್ಬರ ಸದ್ಯ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿದಿದೆ.
‘ಸಿತ್ರಂಗ್’ ಚಂಡಮಾರುತದ ಪ್ರಭಾವದ ಅಡಿಯಲ್ಲಿ, ಸೋಮವಾರ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆಯನ್ನು ಸೂಚಿಸುವ ರೆಡ್ ಅಲರ್ಟ್ ಘೋಷಿಸಲಾಗಿದೆ.