Advertisement

ಆರ್ಥಿಕ ಸಂಕಷ್ಟಸಲ್ಲಿದ್ದ ಸೈಕ್ಲಿಸ್ಟ್ : ಎಂ.ಬಿ.ಪಾಟೀಲ್ ರಿಂದ 3 ಲಕ್ಷ ರೂ. ನೆರವು

05:02 PM Sep 19, 2022 | Team Udayavani |

ವಿಜಯಪುರ: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸೈಕ್ಲಿಂಗ್ ಕ್ರೀಡಾಪಟುವಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್ ನೆರವಾಗಿದ್ದಾರೆ.

Advertisement

ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದ ಭಾವನಾ ಪಾಟೀಲ್ ಸೈಕ್ಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದು, ಸೈಕ್ಲಿಂಗ್ ಕ್ರೀಡಾ ಕೂಟಗಳಲ್ಲಿ ಸ್ವಂತ ಸೈಕಲ್ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಎಂ.ಬಿ. ಪಾಟೀಲ್ ಅವರು 3 ಲಕ್ಷ ರೂ. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಭಾವನಾ ಪಾಟೀಲ್ ಸೈಕ್ಲಿಂಗ್ ತರಬೇತಿಗಾಗಿ ಮೈಸೂರಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಮಹಾದೇವ ಪಾಟೀಲ್ ಮತ್ತು ತಾಯಿ ಶ್ರೀದೇವಿ ಪಾಟೀಲ್ ಅವರಿಗೆ ಚೆಕ್ ವಿತರಿಸಿದರು.

”ಜಿಲ್ಲೆಯ ಪ್ರತಿಭಾವಂತ ಯುವ ಸೈಕ್ಲಿಸ್ಟ್ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ” ಎಂದು ಎಂ.ಬಿ.ಪಾಟೀಲ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾವನಾ ತಂದೆ ಮಹಾದೇವ ಪಾಟೀಲ್ , ”ನಮ್ಮ ಮಗಳಿಗೆ ಸೈಕ್ಲಿಂಗ್ ಎಂದರೆ ತುಂಬಾ ಇಷ್ಟ ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದಾಳೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾನಾ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾಳೆ. ಆರ್ಥಿಕ ಸಂಕಷ್ಟದಲ್ಲಿರುವ ನಮಗೆ ಆಕೆಯ ಸಾಧನೆಗೆ ಅಗತ್ಯ ಇರುವ ಉತ್ತಮ ಸೈಕಲ್ ಕೊಡಿಸಲು ಸಾಧ್ಯವಾಗದ ದುಸ್ಥಿತಿ ಎದುರಾಗಿತ್ತು. ನಮ್ಮ ಮಗಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಎಂ.ಬಿ.ಪಾಟೀಲ ಅವರು ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ. ಅವರಿಗೆ ನಮ್ಮ ಕುಟುಂಬ ಸದಾ ಋಣಿಯಾಗಿರುತ್ತದೆ” ಎಂದರು.

Advertisement

ಭಾವನಾ ತಾಯಿ ಶ್ರೀದೇವಿ ಪಾಟೀಲ್ ಮಾತನಾಡಿ, ”ನನ್ನ ಪತಿ ಮಹಾದೇವ ಪಾಟೀಲ್ ಪಿಕೆಪಿಎಸ್‍ನಲ್ಲಿ ಕೆಲಸ ಮಾಡುತ್ತಾರೆ. ಮೂರು ಮಕ್ಕಳ ನಮ್ಮ ಕುಟುಂಬದಲ್ಲಿ ಹಿರಿಯ ಮಗಳೇ ಭಾವನಾ. ಆಕೆಗೆ ಬಾಲ್ಯದಿಂದಲೇ ಸೈಕಲ್ ಎಂದರೆ ಇಷ್ಟ. ಈಗ ಉತ್ತಮ ಸಾಧನೆ ಮಾಡುತ್ತಿದ್ದರೂ, ಮುಂದಿನ ತಿಂಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸ್ವಂತ ಸೈಕಲ್ ಇರಲಿಲ್ಲ. ಹೊಸ ಸೈಕಲ್ ಕೊಡಿಸಲು ನಮ್ಮಲ್ಲಿ ಆರ್ಥಿಕ ಶಕ್ತಿ ಇರಲಿಲ್ಲ. ನಮ್ಮ ಮಗಳ ವಿಷಯ ತಿಳಿದ ಎಂ.ಬಿ.ಪಾಟೀಲ ಅವರು ನಮಗೆ 3 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ‌ ಈ ಮೂಲಕ ಸೈಕ್ಲಿಂಗ್ ಕ್ಷೇತ್ರದಲ್ಲಿ ನಮ್ಮ ಮಗಳು ಹೆಚ್ಚಿನ ಸಾಧನೆ ಮಾಡಲು ನೆರವಾಗಿದ್ದಾರೆ” ಎಂದು ಆನಂದಭಾಷ್ಪ ಸುರಿಸಿದರು.

ಬಿಎಲ್ ಡಿಇ ಮುಖ್ಯ ಆಡಳಿತಾಧಿಕಾರಿ ಡಾ.ಆರ್.‌ವಿ.‌ಕುಲಕರ್ಣಿ, ನಿರ್ದೇಶಕ ಸಂ.ಗು.ಸಜ್ಜನ, ಕ್ರೀಡಾ ನಿರ್ದೇಶಕ ಎಸ್.‌ಎಸ್.‌‌ಕೋರಿ, ಕೈಲಾಸ ಹಿರೇಮಠ, ಅಶೋಕ ಕಾಖಂಡಕಿ, ಶ್ರೀಶೈಲ ತಪಸೆ, ಸಿದ್ದರಾಯ ಪ್ರಧಾನಿ, ಈಶ್ವರಪ್ಪ ಬಂಗಾರಿ, ಹೊನಮಲಪ್ಪ ಹಟ್ಟಿ, ಈಶ್ವರ ಅಳ್ಳಗಿ, ಮಲ್ಲು ತುಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next