Advertisement

ಪಕ್ಷಿಯೊಂದು ಬದುಕಿನ ಪಥ ಬದಲಿಸಿತು! ಮಾಲಿನ್ಯಮುಕ್ತ ಭಾರತಕ್ಕಾಗಿ ಸೈಕಲ್‌ ಯಾತ್ರೆ

01:08 AM Jul 07, 2022 | Team Udayavani |

ಈ ತಿಂಗಳಿನ ಆರಂಭದಿಂದ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆಗೆ ನಿಷೇದ ಹೇರಿ ಸರಕಾರ ಆದೇಶ ಹೊರಡಿಸಿದೆ. ಪ್ಲಾಸ್ಟಿಕ್‌ ಮಾಲಿನ್ಯ ತಡೆಯುವಲ್ಲಿ ಇದು ಪ್ರಯೋಜನಕಾರಿಯಾದೀತೆಂದು ಸರಕಾರ ನಿರ್ಣಯ ಕೈಗೊಂಡಿದೆ. ಸ್ಥಳೀಯ ಸಂಸ್ಥೆಗಳು ಈ ನಿಯಮ ಪಾಲನೆಯತ್ತ ಮುಖಮಾಡಿವೆ. ಆದರೆ ಇಂಥದೊಂದು ಸಂದೇಶವನ್ನು ಹೊತ್ತುಕೊಂಡು ಮೂರು ವರ್ಷಗಳ ಹಿಂದೆಯೇ ಸೈಕಲ್‌ ತುಳಿಯಲು ಆರಂಭಿಸಿದ ಈ ಉತ್ಸಾಹಿ ಸೈಕ್ಲಿಸ್ಟ್‌ ಇನ್ನೂ ತನ್ನ ಪೆಡಲ್‌ ತುಳಿಯುವ ಕಾಯಕಕ್ಕೆ ಕೊನೆ ಹೇಳಿಲ್ಲ.

Advertisement

ಈ ಅವಧಿಯಲ್ಲಿ ಸುಮಾರು 36 ಸಾವಿರ ಕಿ. ಮೀ ಕ್ರಮಿಸಿರುವ ಮಧ್ಯ ಪ್ರದೇಶದ ಮುರೆನಾ ಜಿಲ್ಲೆಯ ಸಿಕ್ರೋದಾ ಪ್ರದೇಶದ ಬ್ರಿಜೇಶ್‌ ಶರ್ಮ, ಲಕ್ಷಾಂತರ ಮಕ್ಕಳಲ್ಲಿ ಪ್ಲಾಸ್ಟಿಕ್‌ ಅನಾಹುತದ ಬಗ್ಗೆ, ಪರಿಸರ ಮಾಲಿನ್ಯದ ಬಗ್ಗೆ ಹಾಗೂ ಪರಿಸರ ಸ್ನೇಹಿ ಜೀವನ ಕ್ರಮದ ಬಗ್ಗೆ ಅರಿವು ಮೂಡಿಸಿದ್ದಾರೆ.

‘ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಅನಾ ಹುತದ ಕುರಿತು ಮೊದಲು ಅರಿವು ಮೂಡಿಸಬೇಕು. ಅದರೊಂದಿಗೆ ಸಾವಯವ ಕೃಷಿಯಂಥ ಪರಿಸರ ಸ್ನೇಹಿ ಕ್ರಮಗಳನ್ನು ಪರಿಚಯಿಸಬೇಕು. ಒಟ್ಟೂ ನಮ್ಮ ದೇಶವನ್ನು ಮಾಲಿನ್ಯ ಮುಕ್ತಗೊಳಿಸಬೇಕು. ಅದಕ್ಕೇ ನಾನು ಸೈಕಲ್‌ ಯಾತ್ರೆ ಆರಂಭಿಸಿದ್ದೇನೆ’ ಎನ್ನುವ ಬ್ರಿಜೇಶ್‌, ಉಡುಪಿಗೂ ಆಗಮಿಸಿದ್ದರು. ಆಗ ಉದಯವಾಣಿ ಕಚೇರಿಯಲ್ಲಿ ನಡೆಸಿದ ಮಾತುಕತೆಯಲ್ಲಿ ತಮ್ಮ ಕನಸು ಮತ್ತು ಅದರ ಪಯಣದ ರೋಚಕ ಅನುಭವಗಳನ್ನು ವಿವರಿಸಿದರು. ಅದರ ಆಯ್ದ ಅಂಶಗಳನ್ನು ಸಂದರ್ಶನ ರೂಪದಲ್ಲಿ ನೀಡಲಾಗಿದೆ.

- ನಿಮ್ಮ ಕನಸಿನ ಪ್ರಯಾಣ ಎಲ್ಲಿಂದ ಆರಂಭವಾಯಿತು ?
2019ರ ಸೆಪ್ಟಂಬರ್‌ 17ರಂದು ಗುಜರಾತ್‌ನ ಗಾಂಧಿನಗರದಿಂದ ಸೈಕಲ್‌ ಯಾತ್ರೆ ಆರಂಭಿಸಿದೆ. ಗುಜರಾತ್‌, ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿ 9 ರಾಜ್ಯಗಳಲ್ಲಿ ಸಂಚರಿಸಿ ಇದೀಗ ಉಡುಪಿ ಪ್ರವೇಶಿಸಿದ್ದೇನೆ. ಕರ್ನಾಟಕ ಕರಾವಳಿ ಪ್ರಾಕೃತಿಕ ಸೌಂದರ್ಯ ಅದ್ಭುತ. ಒಂದೆಡೆ ಬೆಟ್ಟಗುಡ್ಡದ ಹಸಿರು, ಇನ್ನೊಂದೆಡೆ ಕಣ್ಣು ಹಾಯಿಸಿದಷ್ಟು ಸಮುದ್ರ ತೀರ. ಕರ್ನಾಟಕ ಪ್ರವೇಶಿಸಿದ ಕೂಡಲೇ ಬಾಳೆ ಎಲೆ ಊಟದೊಂದಿಗೆ ರಾಜ್ಯದ ಸಂಸ್ಕೃತಿ ಕಂಡು ಖುಷಿಪಟ್ಟೆ. ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಒಲವಿದೆ. ಅದೇ ಖುಷಿಯ ಸಂಗತಿ. ಮುಂದಿನ ಪ್ರಯಾಣ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಅನಂತರ ಮತ್ತೆ ಉತ್ತರ ಭಾರತದೆಡೆಗೆ.

- ಸೈಕಲ್‌ ಯಾತ್ರೆ ಮೂಲಕ ನಿಮ್ಮ ಆಶಯ ಫ‌ಲಕೊಟ್ಟಿತೆ?
ಕಾರು ಮತ್ತು ಬೈಕನ್ನು ಇದಕ್ಕಾಗಿ ಬಳಸಿದ್ದರೆ ಅದು ನನ್ನ ಮೂಲ ಉದ್ದೇಶವನ್ನೇ ಅಣಕಿಸು ವಂತಿರುತ್ತಿತ್ತು. ಯಾಕೆಂದರೆ ನನ್ನ ಯಾತ್ರೆಯ ಉದ್ದೇಶದಲ್ಲಿ ಬರೀ ಪ್ಲಾಸ್ಟಿಕ್‌ ಅನಾಹುತದ ಬಗ್ಗೆ ಅರಿವು ಮೂಡಿಸುವುದಷ್ಟೇ ಇಲ್ಲ, ಪರಿಸರ ಸಂರಕ್ಷಣೆ, ಮಾಲಿನ್ಯ ಮುಕ್ತ ಭಾರತವೂ ಇದೆ. ಹಾಗಾಗಿಯೇ ಸೈಕಲ್‌ ಆಯ್ದುಕೊಂಡೆ. ರಸ್ತೆಯಲ್ಲಿ ಸಿಗುವ ಜನರು ಹಾಗೂ ಸ್ಥಳೀಯ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ನ ವ್ಯತಿರಿಕ್ತ ಪರಿಣಾಮದ ಕುರಿತು ಜಾಗೃತಿ ಮೂಡಿಸುವೆ. ಇದುವರೆಗೆ ಲಕ್ಷಾಂತರ ಮಕ್ಕಳನ್ನು ತಲುಪಿದ್ದೇನೆ. 9 ಲಕ್ಷಕ್ಕೂ ಅಧಿಕ ರೈತರಿಗೆ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿರುವೆ. ನನ್ನ ಈ ಪ್ರಯತ್ನ ವಿಫ‌ಲ ವಾಗುವುದಿಲ್ಲ, ಖಂಡಿತ ಫ‌ಲ ನೀಡಲಿದೆ.

Advertisement

- ಈ ಕನಸನ್ನೇ ಏಕೆ ಕಂಡಿರಿ?
ಕಾರಣಾಂತರಗಳಿಂದ ಎಂಬಿಎಂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದೆ. ಬಿಎಸ್‌ಎಫ್ನಲ್ಲಿ ಕೆಲಸ ಮಾಡುತ್ತಿದ್ದ ನನಗೆ ತರಬೇತಿ ವೇಳೆ ಕಾಲಿಗೆ ಪೆಟ್ಟಾಗಿ ಹೊರಬಂದೆ. ಬಳಿಕ ಸಾಫ್‌rವೇರ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡಿದೆ. ಏಕ ಬಳಕೆ ಪ್ಲಾಸ್ಟಿಕ್‌ನಿಂದ ಪಕ್ಷಿಯೊಂದು ಮೃತಪಟ್ಟ ಘಟನೆಯೊಂದನ್ನು ಟಿವಿಯಲ್ಲಿ ನೋಡಿದೆ. ಇದು ನನಗೆ ಬಹಳ ಆಘಾತ ತಂದಿತು. ಬಳಿಕ ಪ್ಲಾಸ್ಟಿಕ್‌ನಿಂದಾಗುವ ಅನಾಹುತ ಕುರಿತು ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದೆ. ಇರುವುದೊಂದೇ ಭೂಮಿಯನ್ನು ಉಳಿಸಿಕೊಳ್ಳಲು ನನ್ನ ದೇಣಿಗೆಯೂ ಇರಲೆಂದು ಸೈಕಲ್‌ ತುಳಿಯಲು ಆರಂಭಿಸಿದೆ.

- ನಿಮ್ಮ ಯಾತ್ರೆಯ ಅನುಭವ ಮತ್ತು ಸವಾಲುಗಳು
ಮಹಾರಾಷ್ಟ್ರಕ್ಕೆ ತಲುಪಿದಾಗ ಕೋವಿಡ್‌ ಲಾಕ್‌ಡೌನ್‌ ಘೋಷಣೆಯಾಗಿತ್ತು. ಈ ಅವಧಿಯಲ್ಲಿ ಸವಾಲುಗಳನ್ನು ಎದುರಿಸಿದೆ. ಬಹಳ ಮುಖ್ಯ ವಾಗಿ ಎಂಥದ್ದೇ ಪರಿಸ್ಥಿತಿಗೂ ಹೊಂದಿ ಕೊಳ್ಳುವು ದನ್ನು ಕಲಿತೆ. ಪೆಟ್ರೋಲ್‌ ಬಂಕ್‌, ಡಾಬಾ, ದೇವಸ್ಥಾನ, ಹೆದ್ದಾರಿ ಬದಿಯ ಬಸ್‌ ನಿಲ್ದಾಣಗಳಲ್ಲಿ ಮಲಗಿ, ಸ್ಥಳೀಯರು ಕೊಟ್ಟ ಊಟ ಸೇವಿಸುತ್ತೇನೆ. ಭೌಗೋಳಿಕ ನೆಲೆಯಲ್ಲಿ ಆಹಾರ, ವಾತಾವರಣದಲ್ಲಿ ವ್ಯತ್ಯಾಸ ಆಗುವುದ ರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸವಾಲನ್ನೂ ನಿಭಾಯಿಸುತ್ತಿದ್ದೇನೆ. 2020ರ ಲಾಕ್‌ಡೌನ್‌ನಲ್ಲಿ ಮಹಾರಾಷ್ಟ್ರದ ಶಹಾಪುರದಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ 6 ತಿಂಗಳ ಕಾಲ ಉಳಿದಿದ್ದೆ. ಆಗ ಕನಿಷ್ಟ ಅಗತ್ಯಗಳೊಂದಿಗೆ ಬದುಕುವುದನ್ನು ಕಲಿತೆ. ಮಹಾರಾಷ್ಟ್ರದ ಅರಣ್ಯದಂಚಿನ ಗ್ರಾಮದಲ್ಲಿ ಇದ್ದಾಗ 4 ಸಿಂಹಗಳು ಹತ್ತಿರದಲ್ಲೇ ಸುತ್ತುವರಿದು ಹೋದವು. ವಿಷಕಾರಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೆ. ಹೀಗೆ ನೂರಾರು ಅವಿಸ್ಮರಣೀಯ ಘಟನೆಗಳು ನನ್ನ ಬದುಕಿನ ಜೋಳಿಗೆಗೆ ಸೇರಿಕೊಂಡವು. ಇಡೀ ಪಯಣ ಉತ್ಸಾಹದ ದಾರಿಯನ್ನು ತೆರೆದು ಬದುಕಿನ ಪ್ರೀತಿಯನ್ನು ಹೆಚ್ಚಿಸಿದೆ.

- ಮುಂದಿನ ಗುರಿ, ಯುವಜನರಿಗೆ ಏನು ಹೇಳುತ್ತೀರಿ?
ವಸುಧೈವ ಕುಟುಂಬಕಮ್‌ ಪರಿಕಲ್ಪನೆಯನ್ನು ಬರೀ ಮನುಷ್ಯರಿಗಷ್ಟೇ ಸೀಮಿತಗೊಳಿಸಿದ್ದೇವೆ. ಅದರ ಬದಲಾಗಿ ಮನುಷ್ಯರೂ ಸೇರಿದಂತೆ ಭೂಮಿ ಮೇಲಿರುವ ನದಿ, ಸಮುದ್ರ, ವನ್ಯಜೀವಿ, ಅರಣ್ಯಸಂಪತ್ತು- ಇಡೀ ಪರಿಸರವನ್ನು ನಮ್ಮ ಪರಿವಾರವೆಂದುಕೊಂಡು ಪ್ರೀತಿಸಬೇಕು. ಸರಕಾರ ಪ್ಲಾಸ್ಟಿಕ್‌ ನಿರ್ಬಂಧಕ್ಕೆ ಇನ್ನಷ್ಟು ಕಠಿನ ಕ್ರಮಗಳನ್ನು ಜಾರಿಗೆ ತರಬೇಕು. ಅದರೊಂದಿಗೆ ಜನರೂ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು. ಈ ಮೂಲಕ ಮಾಲಿನ್ಯ ಮುಕ್ತ ಭಾರತ ರೂಪುಗೊಳ್ಳಬೇಕು. ಅದೇ ದೊಡ್ಡದು. ಇದು ಸಾಕಾರವಾಗುವುದು ಯುವ ಜನರ ಭಾಗವಹಿಸುವಿಕೆಯಿಂದ ಮಾತ್ರ.

ಹಳ್ಳಿಗಳು ದೇಶದ ಆತ್ಮ
ಹಳ್ಳಿಗಳು ಭಾರತದ ಆತ್ಮ. ಅವು ಹೇಗಿವೆಯೋ ಹಾಗೇ ರಕ್ಷಿಸಿಕೊಳ್ಳುವುದು ತೀರಾ ಅವಶ್ಯ. ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಯ ನಾಶ ಖಂಡಿತಾ ಸರಿಯಲ್ಲ. ಹಳ್ಳಿ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ.
– ಬ್ರಿಜೇಶ್‌ ಶರ್ಮ, ಸೈಕ್ಲಿಸ್ಟ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next