Advertisement

ಕ್ಷಣಾರ್ಧದಲ್ಲಿ ಹಣ ಮಾಯ: ಪೊಲೀಸರಿಗೆ ಸವಾಲಾಗುತ್ತಿದೆ ಸೈಬರ್‌ ಕ್ರೈಂ

12:59 PM Oct 08, 2022 | Team Udayavani |

ಉಡುಪಿ: ತಂತ್ರಜ್ಞಾನ ಪ್ರಗತಿ ಹೊಂದುತ್ತಿರುವಂತೆ ಅದರ ದುರುಪಯೋಗವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಕುಳಿತಲ್ಲಿಂದಲೇ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಖದೀಮರ ಕರಮತ್ತು ಪೊಲೀಸರನ್ನೂ ಬೆರಗುಗೊಳಿಸುತ್ತಿದೆ. ವಿದೇಶ, ಉತ್ತರ ಭಾರತಗಳಲ್ಲಿ ಹೆಚ್ಚು ವರದಿಯಾಗುತ್ತಿದ್ದ ಸೈಬರ್‌ ಕ್ರೈಂ ಪ್ರಕರಣಗಳು ಈಗ ಉಡುಪಿ ಜಿಲ್ಲೆಯಲ್ಲಿಯೂ ಸದ್ದು ಮಾಡುತ್ತಿವೆ. ಅಂದ ಹಾಗೆ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ ವಂಚನೆಗೊಳಗಾಗಿ ದೂರು ನೀಡಿರುವವರ ಸಂಖ್ಯೆ 179. ಕಳೆದ ಮೂರು ತಿಂಗಳಲ್ಲಿ ಸೈಬರ್‌ ಠಾಣೆಯಲ್ಲಿ ವರದಿಯಾಗಿರುವ ಪ್ರಮುಖ ಪ್ರಕರಣಗಳು ಹೀಗಿವೆ.

Advertisement

ಘಟನೆ -1

ವೈದ್ಯಕೀಯ ಚಿಕಿತ್ಸೆಗೆ ಸಹಕಾರ ಕೋರುವ ನೆಪದಲ್ಲಿ ಅಪಘಾತದ ಕಥೆ ಕಟ್ಟಿ ಮಂದಾರ್ತಿ, ಹೆಗ್ಗುಂಜೆ ನಿವಾಸಿ ಪ್ರಮೋದ್‌ ಕುಮಾರ್‌ ಶೆಟ್ಟಿ ಅವರಿಗೆ ರಾಜೇಶ್‌ ಶಾ ಎಂಬ ಹೆಸರಿನ ವ್ಯಕ್ತಿ ಕರೆ ಮಾಡಿ ನಾನು ಯೂರೋ ಬಾಂಡ್‌ ಕಂಪೆನಿಯ ಮಾಲಕನಾಗಿದ್ದು, ಕಾರವಾರ-ಗೋವಾ ರಸ್ತೆ ಮಾರ್ಗದಲ್ಲಿ ತನ್ನ ಮಗನಿಗೆ ಅಪಘಾತ ಸಂಭವಿಸಿದ್ದು, ಆತನನ್ನು ಏರ್‌ಲಿಫ್ಟ್ ಮೂಲಕ ಮಂಗಳೂರು ಎ.ಜೆ. ಆಸ್ಪತ್ರೆ ದಾಖಲಿಸಲು ತುರ್ತಾಗಿ 3 ಲಕ್ಷ ರೂ. ಹಣ ಬೇಕಾಗಿದೆ ಎಂದು ಕೋರಿದ್ದಾರೆ. ಇದನ್ನು ನಂಬಿದ ಪ್ರಮೋದ್‌ ಅವರು ತನ್ನ ಹಾಗೂ ಗೆಳೆಯರಿಂದ ಹಣ ಸಂಗ್ರಹಿಸಿ ಗೂಗಲ್‌ಪೇ ಮೂಲಕ 3 ಲ.ರೂ. ವರ್ಗಾಯಿಸಿದ್ದಾರೆ. ಈ ಪ್ರಕರಣದಲ್ಲಿ ದೂರುದಾರರು ಗೋಲ್ಡನ್‌ ಹವರ್‌ನೊಳಗೆ ದೂರು ನೀಡಿದ ಕಾರಣ ಪತ್ತೆಕಾರ್ಯ ಸಾಧ್ಯವಾಗಿದೆ. ಆರೋಪಿ ಗುಜರಾತ್‌ ರಾಜ್ಯದ ಸೂರತ್‌ನವನಾಗಿದ್ದು, ಆತ ಮಹಾರಾಷ್ಟ್ರದ ಥಾಣೆ ಮೂಲಕ ವ್ಯಕ್ತಿಯೊಬ್ಬರ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಹಣವನ್ನೂ ಹೋಲ್ಡ್‌ನಲ್ಲಿರಿಸಲಾಗಿದ್ದು, ದೂರುದಾರರಿಗೆ ನೀಡಲಾಗಿದೆ.

ಘಟನೆ -2

ಪರ್ಕಳದ ನಿವಾಸಿ ಸುಬ್ರಹ್ಮಣ್ಯ ಕೃಷ್ಣ ನಾಯ್ಕ ಅವರಿಗೆ ಕೆವೈಸಿ ಅಪ್‌ಡೇಟ್‌ ಮಾಡಲು ಅನಾಮಧೇಯ ಸಂಖ್ಯೆಯಲ್ಲಿ ಸಂದೇಶ ಬಂದಿತ್ತು. ಈ ಸಂದೇಶವನ್ನು ಬ್ಯಾಂಕ್‌ನವರೇ ಕಳುಹಿಸಿರಬಹುದು ಎಂದು ತಿಳಿದ ಅವರು ಆ ಲಿಂಕ್‌ ಅನ್ನು ಓಪನ್‌ ಮಾಡಿ ಒಟಿಪಿಯನ್ನು ಅಪ್‌ಡೇಟ್‌ ಮಾಡಿದ ತತ್‌ ಕ್ಷಣ ಅವರ ವಿವಿಧ ಬ್ಯಾಂಕ್‌ ಖಾತೆಯಿಂದ ಒಟ್ಟು 93,804 ರೂ. ಕಡಿತಗೊಂಡಿತ್ತು.

Advertisement

ಘಟನೆ-3

ಪೂರ್ಣಿಮಾ ಎಂಬವರಿಗೆ ನ್ಯಾಪ್‌ಟಾಲ್‌ ಕಂಪೆನಿಯಿಂದ ಸ್ಕ್ಯಾಚ್‌ ವಿನ್‌ ಎಂಬ ಕೂಪನ್‌ ಪೋಸ್ಟ್‌ ಮೂಲಕ ಬಂದಿದ್ದು, ಆ ಕೂಪನ್‌ನಲ್ಲಿ 14,80,000 ರೂ. ವಿಜೇತರಾಗಿದ್ದೀರಿ ಎಂದು ತಿಳಿಸಲಾಗಿತ್ತು. ಈ ಬಗ್ಗೆ ಅದರಲ್ಲಿದ್ದ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿ ಸಿದಾಗ ತಾನು ನ್ಯಾಪ್‌ಟಾಲ್‌ ಕಂಪೆನಿಯವರೆಂದು ನಂಬಿಸಿ ಹಣ ಪಡೆಯಲು ಸರ್ವಿಸ್‌ ಚಾರ್ಜ್‌, ಸರ್ಚ್‌, ಎನ್‌ ಒಸಿ ಆ್ಯಂಡ್‌ ಎಲ್‌ವೊಸಿ ಚಾರ್ಜ್‌, ಸೆಕ್ಯೂರಿಟಿ ಡೆಪೋಸಿಟ್‌, ಜಿಎಸ್‌ಟಿ ಮತ್ತು ಸೆಂಟ್ರಲ್‌ ತೆರಿಗೆ ಹಾಗೂ ಇತರ ಖರ್ಚುಗಳಿಗಾಗಿ ಒಟ್ಟು 15,33,934 ರೂ.ಗಳನ್ನು ಪೂರ್ಣಿಮಾ ಅವರಿಂದ ಆರೋಪಿ ಆತನ ಬೇರೆ ಬೇರೆ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಜಮೆ ಮಾಡಿಸಿಕೊಂಡಿದ್ದ.

ಘಟನೆ-4

ಮಲ್ಲಾರುವಿನ ಶಶಿಕಾಂತ ಆಚಾರ್ಯ ಅವರು ಟೆಲಿಗ್ರಾಂ ಆ್ಯಪ್‌ನಲ್ಲಿ ಪಾರ್ಟ್‌ ಟೈಮ್‌ ಜಾಬ್‌ ಹುಡುಕುತ್ತಿದ್ದು ಅದರಲ್ಲಿ ವಸ್ತುಗಳನ್ನು ಖರೀದಿಸಿ ಸೇಲ್‌ ಮಾಡುವ ಬಗ್ಗೆ ಸ್ನಾಪ್‌ಡೀಲ್‌ ಶಾಪಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿ 200 ರೂ. ರಿಚಾರ್ಜ್‌ ಮಾಡಿದ್ದರು. ಅದಕ್ಕೆ ಪ್ರತಿಯಾಗಿ 413 ರೂ. ಹಾಗೂ 1,472 ರೂ. ಅವರ ಖಾತೆಗೆ ಜಮೆ ಆಗಿತ್ತು. ಅನಂತರ ಬೇರೊಂದು ಮೊಬೈಲ್‌ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬ ತಾನು ಸ್ನಾಪ್‌ಡೀಲ್‌ ಶಾಪಿಂಗ್‌ ಮ್ಯಾನೇಜರ್‌ ಎಂದು ತಿಳಿಸಿ, ಟಾಸ್ಕ್ ಗಳನ್ನು ಮಾಡಲು 3,26,887 ರೂ.ಗಳನ್ನು ಅವರ ಸ್ನಾಪ್‌ಡೀಲ್‌ ಶಾಪಿಂಗ್‌ ಖಾತೆಗೆ ಅವರಿಂದ ಜಮೆ ಮಾಡಿಸಿದ್ದರು. ಆದರೆ, ಅದರಲ್ಲಿರುವ ವಸ್ತುಗಳನ್ನು ಸೇಲ್‌ ಮಾಡುವ ಬಗ್ಗೆ ಆನ್‌ಲೈನ್‌ ಮೂಲಕ 2,06,050 ರೂ. ಪಡೆದು ಕಳುಹಿಸಿದ ಹಣವನ್ನು ವಾಪಾಸು ನೀಡದೇ ನಷ್ಟ ಉಂಟು ಮಾಡಿದ್ದರು.

ಮಾಹಿತಿ ಅಗೋಚರ

ವಿದೇಶ ಸಹಿತ ಉತ್ತರ ಭಾರತದಲ್ಲಿ ಐಟಿ-ಬಿಟಿ ಹೆಸರಿನಲ್ಲಿ ನಕಲಿ ಕಂಪೆನಿಗಳು ಕಾರ್ಯಾ ಚರಣೆ ಮಾಡುತ್ತಿದ್ದು, ವ್ಯವಸ್ಥಿತವಾಗಿ ದಕ್ಷಿಣ ಭಾರತದವರನ್ನು ಟಾರ್ಗೆಟ್‌ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ.

ಜಸ್ಟ್‌ ಡಯಲ್‌ ಸಹಿತ ಇತರ ಮೂಲಗಳಿಂದ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿ ಲಿಂಕ್‌ಗಳನ್ನು ರವಾನಿಸಲಾಗುತ್ತದೆ. ಕರೆಗಳನ್ನು ಮಾಡಿ ದಾರಿ ತಪ್ಪಿಸಿ ಹಣ ದೋಚುವ ಖದೀಮರೂ ಇದ್ದಾರೆ. ಕೆಲವೇ ಕ್ಷಣದಲ್ಲಿ ನಮ್ಮ ಖಾತೆಯಲ್ಲಿದ್ದ ಸಾವಿರ, ಲಕ್ಷ, ಕೋಟಿಗಳು ಮಂಗಮಾಯವಾದ ದೂರುಗಳೂ ಈಗಾಗಲೇ ಹಲವೆಡೆ ದಾಖಲಾಗಿರುವುದು ಇದಕ್ಕೆ ನಿದರ್ಶನವಾಗಿದೆ.

ಆನ್‌ಲೈನ್‌ ಹನಿಟ್ರ್ಯಾಪ್‌

ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ವೀಡಿಯೋ ಕರೆ ಮಾಡಿ ಅಪರಿಚಿತ ಯುವತಿ ಅರೆನಗ್ನ ಸ್ಥಿತಿಯಲ್ಲಿ ಮಾತನಾಡುತ್ತಾಳೆ. 10ರಿಂದ 15 ನಿಮಿಷಗಳಲ್ಲಿ ಮಾತುಕತೆ ಮುಗಿದುಹೋಗುತ್ತದೆ. ಅನಂತರ ಕರೆ ನಿಷ್ಕ್ರಿಯ. ಬಳಿಕ 5 ನಿಮಿಷಗಳ ಅಂತರದಲ್ಲಿ ನಮ್ಮ ಮುಖವನ್ನು ಎಡಿಟ್‌ ಮಾಡಿ ಅಶ್ಲೀಲವಾಗಿ ಬಿಂಬಿಸಿ ಹಣ ಪೀಕುವ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಲಾಗುತ್ತದೆ. ಇಂತಹ ಪ್ರಕರಣಗಳೂ ಉಡುಪಿ ಸೆನ್‌ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುತ್ತಿವೆ. ಕೆಲವರು ಮಾನ-ಮರ್ಯಾದೆ ಹೋಗುವುದು ಬೇಡ ಎಂದು ಖದೀಮರು ಕೇಳಿದಷ್ಟು ಹಣ ನೀಡಿ ಸುಮ್ಮನಾಗುತ್ತಾರೆ. ಆದರೆ ಇವರೂ ಮತ್ತೂ ಹೆಚ್ಚಿನ ಹಣಕ್ಕೆ ಬೇಡಿಕೆ ಒಡ್ಡುತ್ತಾರೆ. ಕೊನೆಗೆ ಸೈಬರ್‌ ಠಾಣೆಗೆ ದೂರು ನೀಡಲಾಗುತ್ತದೆ. ಅನಾಮಧೇಯ ವ್ಯಕ್ತಿಗಳು ವೀಡಿಯೋ ಕರೆ ಮಾಡಿದರೆ ಅದಕ್ಕೆ ಪ್ರತಿಕ್ರಿಯಿಸಬಾರದು. ಪ್ರತಿಕ್ರಿಯಿಸಿದರೂ ಹಣ ನೀಡಲು ಹೋಗಬಾರದು ಎನ್ನುತ್ತಾರೆ ಸೈಬರ್‌ ಠಾಣೆಯ ಪೊಲೀಸರು.

ವಂಚನೆಗೊಳಗಾದವರು ಹೀಗೆ ಮಾಡಿ: ಆನ್‌ಲೈನ್‌ ಮೂಲಕ ಹಣದ ವಂಚನೆಗೆ ಒಳಗಾದವರು ಕೇಂದ್ರ ಸರಕಾರದಿಂದ ಸಹಾಯಕ್ಕಾಗಿ ಇರುವ national cyber crime reporting portal website ಗೆ ಕೂಡಲೇ ಮಾಹಿತಿ ನೀಡಬೇಕು. ತತ್‌ಕ್ಷಣ ಗ್ರಾಹಕರ ಖಾತೆ ಹಾಗೂ ಹಣ ವರ್ಗಾವಣೆಗೊಂಡ ಖಾತೆ ಎರಡೂ freeze ಆಗುತ್ತದೆ. ಹಣ ವರ್ಗಾವಣೆ ಆಗುವುದಿಲ್ಲ. ಇದನ್ನು “ಗೋಲ್ಡನ್‌ ಹವರ್‌’ ಎಂದು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗೆ ಸೈಬರ್‌ ಪೊಲೀಸ್‌ ಠಾಣೆ (0820-25350021, 9480805410) ಗೆ ಮಾಹಿತಿ ನೀಡಬಹುದು. –ಹಾಕೆ ಅಕ್ಷಯ್‌ ಮಚ್ಚೀಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next