Advertisement

ಸೈಬರ್‌ ಟೈಮ್‌; ಹೈಟೆಕ್‌ ಮೋಸದ ಬಗ್ಗೆ ಎಚ್ಚರವಿರಲಿ

10:44 PM Aug 18, 2019 | Sriram |

ವಾರಗಟ್ಟಲೆ ಒಂದೆಡೆ ಮೊಕ್ಕಾಂ ಹೂಡಿ ಮನೆಯವರ ಚಲನವಲನಗಳನ್ನು ಗಮನಿಸಿ, ರಾತ್ರಿ ಹೊತ್ತಿನಲ್ಲಿ ಚಹರೆ ಮುಚ್ಚಿಕೊಂಡು, ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗದಂತೆ ಬಾಗಿಲನ್ನೋ, ಕಿಟಕಿಯನ್ನೋ ಒಡೆದು ಮನೆಗೆ ಕನ್ನ ಹಾಕಬೇಕಾದ ಜರೂರತ್ತು ಈಗಿಲ್ಲ. ನಯವಾಗಿ ಮಾತನಾಡುತ್ತಾ ತಮಗೆ ಬೇಕಾದ ಮಾಹಿತಿ ಪಡೆದುಕೊಂಡು ಕ್ಷಣಮಾತ್ರದಲ್ಲಿ ಬ್ಯಾಂಕಿನಲ್ಲಿರುವ ದುಡ್ಡನ್ನು ಮಂಗಮಾಯ ಮಾಡುವ ಕಾಲವಿದು.

Advertisement

ಎಟಿಎಮ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಫೋನ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಹೀಗೆ ವಿವಿಧ ಸೇವೆಗಳನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುತ್ತಿವೆ. ಇವುಗಳನ್ನು ಸುರಕ್ಷಿತವಾಗಿ ಬಳಸುವುದು ಗ್ರಾಹಕರ ಕರ್ತವ್ಯ.

ಕೆಲವು ದಿನಗಳ ಹಿಂದೆ, ಹಾಲಿ ಸಂಸದೆಯೊಬ್ಬರಿಗೆ, ಬ್ಯಾಂಕಿನ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಸಂಸದೆಯಾಗಿ ನೀವು ಪಡೆಯುವ ಭತ್ಯೆಗಳನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಿದೆ, ಅದಕ್ಕೆ ನಿಮ್ಮ ಬ್ಯಾಂಕ್‌ ಖಾತೆಯ ಸಂಖ್ಯೆ, ಡೆಬಿಟ್‌ ಕಾರ್ಡ್‌ ಸಂಖ್ಯೆ, ಪಿನ್‌ ಸಂಖ್ಯೆ, ಸಿಸಿ ಸಂಖ್ಯೆಗಳು ಬೇಕು ಎಂದು ಅವರನ್ನು ನಂಬಿಸಿ, ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದ. ಅವರ ಮೊಬೈಲ್‌ ದೂರವಾಣಿಗೆ ಬ್ಯಾಂಕ್‌ ಕಳುಹಿಸುವ ಎಸ್‌ಎಮ್‌ಎಸ್‌ ಸಂದೇಶದಲ್ಲಿರುವ ಓಟಿಪಿ ಸಂಖ್ಯೆಯನ್ನು ಆತ ಕೇಳಿ ಪಡೆದುಕೊಂಡಿದ್ದ. ದೂರವಾಣಿ ಕರೆ ಮಾಡಿದವರು ಬ್ಯಾಂಕ್‌ ಅಧಿಕಾರಿ ಎಂದು ನಂಬಿದ ಸಂಸದೆ, ಆತ ಕೇಳಿದ ಎಲ್ಲಾ ವಿವರಗಳನ್ನು ನೀಡಿದ್ದರು. ಆದರೆ ಈ ವಿವರಗಳನ್ನು ಬಳಸಿಕೊಂಡು, ಅವರ ಬ್ಯಾಂಕ್‌ ಖಾತೆಯಿಂದ 23 ಲಕ್ಷ ರುಪಾಯಿಗಳನ್ನು ಆತ ಕಳವು ಮಾಡಿದ್ದ. ಅಯ್ಯೋ, ಇದು ಹಳೆಯ ಕಥೆ ಎಂದು ಸುಮ್ಮನಾಗುವಂತಿಲ್ಲ. ಮೊನ್ನೆಯಷ್ಟೇ ಮುಖ್ಯಮಂತ್ರಿಯೊಬ್ಬರ ಪತ್ನಿಗೂ ಹೀಗೆಯೇ ಕರೆ ಮಾಡಿ, ಅವರಿಂದಲೂ ಮಾಹಿತಿ ಪಡೆದು, ಅವರ ಬ್ಯಾಂಕ್‌ ಖಾತೆಯಿಂದ 28 ಲಕ್ಷ ರು. ವಂಚಿಸಿದ ಪ್ರಕರಣ ನಡೆದಿತ್ತು

ಗೌಪ್ಯ ಮಾಹಿತಿಯನ್ನು ಯಾರೂ ಕೇಳುವುದಿಲ್ಲ
ನೆನಪಿರಲಿ: ಗ್ರಾಹಕರಿಗೆ ಕರೆ ಮಾಡಿ, ಅವರ ಬ್ಯಾಂಕ್‌ ಖಾತೆ, ಕಾರ್ಡ್‌ ಸಂಖ್ಯೆ, ಪಿನ್‌ ಸಂಖ್ಯೆ, ಸಿಸಿ ಸಂಖ್ಯೆ ಮೊದಲಾದ ವಿವರಗಳನ್ನು ಯಾವ ಬ್ಯಾಂಕಿನ ಸಿಬ್ಬಂದಿ ಕೂಡಾ ಕೇಳುವುದಿಲ್ಲ. ಇಂಥ ಕರೆ ಬಂದರೆ, ಗ್ರಾಹಕರು ಅದನ್ನು ಬ್ಯಾಂಕಿನ ಸಿಬ್ಬಂದಿಗೆ ಅಥವಾ ಬ್ಯಾಂಕಿನ ಗ್ರಾಹಕ ಸೇವಾ ಸಹಾಯವಾಣಿಗೆ ಕರೆ ಮಾಡಿ ತಕ್ಷಣ ತಿಳಿಸಬೇಕು.

ಮೊಬೈಲ್‌ ಬ್ಯಾಂಕಿಂಗ್‌ ಮಾಡುವ ಗ್ರಾಹಕರು, ಈ ಸೌಲಭ್ಯಕ್ಕಾಗಿ ಬ್ಯಾಂಕಿನ ಅಧಿಕೃತ ಅÂಪ್‌ ತಂತ್ರಾಂಶವನ್ನು ಮಾತ್ರ ಬಳಸಬೇಕು. ಬ್ಯಾಂಕಿನ ಆ್ಯಪ್‌ ತಂತ್ರಾಂಶದಂತೆ ನಕಲಿ ತಂತ್ರಾಂಶವನ್ನು ನೀಡಿ, ಗ್ರಾಹಕರನ್ನು ವಂಚಿಸುವ ಅಪರಾಧಿಗಳಿದ್ದಾರೆ. “ಎನಿಡೆಸ್ಕ್’ ಹೆಸರಿನ ತಂತ್ರಾಂಶವನ್ನು ಬಳಸಿ ಮೊಬೈಲ್‌ ಬ್ಯಾಂಕಿಂಗ್‌ಅನ್ನು ಸುಲಭವಾಗಿ ಮಾಡಬಹುದು ಎಂದು ಅಮಾಯಕ ಗ್ರಾಹಕರನ್ನು ವಂಚಿಸುತ್ತಿರುವ ಕುರಿತು ಆರ್‌ಬಿಐ ಎಚ್ಚರಿಕೆಯ ಸಂದೇಶವನ್ನು ಈ ಹಿಂದೆಯೇ ನೀಡಿತ್ತು.

Advertisement

ಸ್ವೆ„ಪ್‌ ಮಾಡುವಾಗ ಎಚ್ಚರ
ಎಟಿಎಮ್‌ನಲ್ಲಿ ಗ್ರಾಹಕರು ಬಳಸುವ ಕಾರ್ಡ್‌ ಮಾಹಿತಿಯನ್ನು ಕದ್ದು, ನಕಲಿ ಕಾರ್ಡ್‌ಗಳನ್ನು ಸೃಷ್ಟಿಸುವ ಅಪರಾಧಿಗಳಿದ್ದಾರೆ. ಆದ್ದರಿಂದ ಎಟಿಎಮ್‌ ಬಳಸುವಾಗ, ಕಾರ್ಡ್‌ ಬಳಸುವ ಕಡೆ ಹೆಚ್ಚುವರಿ ಉಪಕರಣ, ಅಥವಾ ಗ್ರಾಹಕರು ಎಟಿಎಮ್‌ನಲ್ಲಿ ಬಳಸುವ ಪಿನ್‌ ಸಂಖ್ಯೆಯನ್ನು ನೋಡಲು ಅನುವಾಗುವಂತೆ ಅಳವಡಿಸಲಾದ ಪುಟ್ಟ ಕ್ಯಾಮರಾಗಳೇನಾದರೂ ಕಂಡು ಬಂದರೆ, ಅಂಥ ಎಟಿಎಮ್‌ಗಳನ್ನು ಬಳಸಬೇಡಿ. ಹೋಟೆಲ್‌, ಅಂಗಡಿ, ಪೆಟ್ರೋಲ್‌ ಬಂಕ್‌ ಮೊದಲಾದ ಕಡೆ ಕಾರ್ಡ್‌ಗಳನ್ನು ಬಳಸುವಾಗ, ಅಲ್ಲಿಯ ಸಿಬ್ಬಂದಿ ನಿಮ್ಮ ಮುಂದೆಯೇ ಕಾರ್ಡ್‌ ಬಳಸಿ, ಬಿಲ್‌ ಪಾವತಿ ಮಾಡುವಂತೆ ನೋಡಿಕೊಳ್ಳಿ. ಕೆಲವು ಕಡೆ ಇಂತಹ ಕಾರ್ಡ್‌ಗಳ ಮಾಹಿತಿಯನ್ನು ನಕಲು ಮಾಡಿಕೊಂಡು, ನಕಲಿ ಕಾರ್ಡ್‌ ಸಿದ್ಧಪಡಿಸಿ, ಗ್ರಾಹಕರನ್ನು ವಂಚಿಸುವ ಪ್ರಕರಣಗಳು ನಡೆದಿವೆ.

ಬ್ಯಾಂಕಿನ ಗ್ರಾಹಕರಿಗೆ ನೆರವಾಗಲು ಗ್ರಾಹಕ ಸೇವಾ ಕೇಂದ್ರವನ್ನು ಬ್ಯಾಂಕುಗಳು ನಡೆಸುತ್ತವೆ ಮತ್ತು ಇಂಥ ಕೇಂದ್ರಗಳನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ಗ್ರಾಹಕರಿಗೆ ನೀಡುತ್ತವೆ. ಕೆಲವು ಅಪರಾಧಿಗಳು ಇಂತಹ ಗ್ರಾಹಕ ಸೇವಾ ಕೇಂದ್ರಗಳಂತೆ ನಕಲಿ ಕೇಂದ್ರಗಳನ್ನು ತೆರೆದು, ಬೇರೆ ದೂರವಾಣಿ ಸಂಖ್ಯೆ ನೀಡಿ ಗ್ರಾಹಕರನ್ನು ವಂಚಿಸಿರುವುದೂ ಇದೆ. ಆದ್ದರಿಂದ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸುವ ಮೊದಲು ಅಧಿಕೃತ ದೂರವಾಣಿ ಸಂಖ್ಯೆಯನ್ನು ಗ್ರಾಹಕರು ಖಾತ್ರಿ ಪಡಿಸಿಕೊಳ್ಳುವುದು ಅವಶ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್‌ಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಗ್ರಾಹಕರನ್ನು ವಂಚಿಸುವ ಪ್ರಕರಣಗಳು ವರದಿಯಾಗಿವೆ. ಇಂತಹ ನಕಲಿ ಜಾಲತಾಣಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಸುಲಭ ಸಾಲ, ಕಡಿಮೆ ಬಡ್ಡಿಯ ಸಾಲ, ಸಾಲ ಮನ್ನಾ ಮೊದಲಾದ ಆಕರ್ಷಕ ಜಾಹೀರಾತುಗಳನ್ನು ನಂಬದೆ ಗ್ರಾಹಕರು ವಿವಿಧ ಸೌಲಭ್ಯಗಳನ್ನು ಕುರಿತು ಮಾಹಿತಿಯನ್ನು ಬ್ಯಾಂಕಿನಿಂದಲೇ ಪಡೆದುಕೊಳ್ಳುವುದು ಸೂಕ್ತ.

ಪ್ರಮುಖ ಬ್ಯಾಂಕುಗಳು ನೀಡುವಂತೆ ತಮ್ಮ ಗ್ರಾಹಕರಿಗೆ ಸೌಲಭ್ಯಗಳನ್ನು ನೀಡಲು ಮುಂದಾಗುವ ಗ್ರಾಮೀಣ ಮತ್ತು ಸಹಕಾರಿ ವಲಯದ ಬ್ಯಾಂಕುಗಳು, ಮಾಹಿತಿ ಸುರಕ್ಷತೆ ಮತ್ತು ಸೈಬರ್‌ ದಾಳಿ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ನಕಲಿಗಳನ್ನು ಪತ್ತೆ ಹಚ್ಚಿ
ಬ್ಯಾಂಕಿನವರೇ ಕಳಿಸಿದ್ದಾರೆ ಎನ್ನುವಷ್ಟು ನೈಜವಾಗಿರುವ ನಕಲಿ ಇ-ಮೇಲ್‌ ಅಥವಾ ಎಸ್‌.ಎಮ್‌.ಎಸ್‌ ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸುತ್ತಾರೆ. ಇಂಥ ಇ-ಮೇಲ್‌ ಅಥವಾ ಸಂದೇಶಗಳಲ್ಲಿ ಜಾಲತಾಣವೊಂದರ ಲಿಂಕ್‌ ನೀಡಿ, “ಈ ಲಿಂಕ್‌ ಬಳಸಿ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಯನ್ನು ನವೀಕರಿಸಬೇಕು, ಇಲ್ಲದಿದ್ದರೆ ಅವರ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎನ್ನುವ ಸಂದೇಶವನ್ನು ಕಳುಹಿಸುತ್ತಾರೆ. ಅಮಾಯಕ ಗ್ರಾಹಕರು ಇಂಥ ಜಾಲತಾಣಗಳ ನಕಲಿ ಲಿಂಕ್‌ ಕ್ಲಿಕ್‌ ಮಾಡಿ, ಬ್ಯಾಂಕ್‌ ಅಕೌಂಟ್‌ ಮಾಹಿತಿ, ವೈಯಕ್ತಿಕ ಮಾಹಿತಿ ಮತ್ತು ಗುಪ್ತವಾಗಿಡಬೇಕಾದ ಪಾಸ್‌ವರ್ಡ್‌ಗಳನ್ನೂ ನೀಡಿ, ವಂಚನೆಗೊಳಗಾಗುತ್ತಾರೆ. ಈ ರೀತಿ ಇ-ಮೇಲ್‌ ಅಥವಾ ಎಸ್‌ಎಮ್‌ಎಸ್‌ ಸಂದೇಶಗಳಲ್ಲಿ ಜಾಲತಾಣ ಲಿಂಕ್‌ ನೀಡುವುದನ್ನು ಯಾವ ಬ್ಯಾಂಕ್‌ ಕೂಡಾ ಮಾಡುವುದಿಲ್ಲ.

-ಉದಯ ಶಂಕರ ಪುರಾಣಿಕ

Advertisement

Udayavani is now on Telegram. Click here to join our channel and stay updated with the latest news.

Next