Advertisement

ಆ.‌21 : ಕಟಪಾಡಿಯಲ್ಲಿ ಯುವವಾಹಿನಿ ಡೆನ್ನಾನ ಡೆನ್ನಾನ ಸಾಂಸ್ಕೃತಿಕ ಸ್ಪರ್ಧೆ

04:48 PM Aug 18, 2022 | Team Udayavani |

ಕಾಪು : ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಧ್ಯೇಯದೊಂದಿಗೆ ಕಾರ್ಯಚಟುವಟಿಕೆಯನ್ನು ಹೊಂದಿರುವ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಯುವವಾಹಿನಿ ಘಟಕದ ಆತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆ. 21 ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಡೆನ್ನಾನ ಡೆನ್ನಾನ – 2022 ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್‌ ಮಟ್ಟು ಹೇಳಿದರು.

Advertisement

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯುವ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ಯುವವಾಹಿನಿಯು ಪ್ರತೀ ವರ್ಷ ನಡೆಸುತ್ತಾ ಬಂದಿರುವ ಅಂತರ್‌ ಘಟಕ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದ್ದು ಬೆಂಗಳೂರು ಸೇರಿದಂತೆ ಅಂತರ್ ಜಿಲ್ಲೆಯಲ್ಲಿ 35 ಘಟಕಗಳಿರುವ ಯುವವಾಹಿನಿಯ ಎಲ್ಲಾ ಘಟಕಗಳ ಸದಸ್ಯರ ಪ್ರತಿಭೆ ಅನಾವರಣಗೊಳ್ಳಲಿದೆ ಎಂದರು.

ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕದೊಡನೆ ಪ್ರಥಮ, ದ್ವಿತೀಯ, ತೃತೀಯ ಕ್ರಮವಾಗಿ ರೂ. 25,000, ರೂ. 15,000, ರೂ.10,000 ಹಾಗೂ ವೈಯಕ್ತಿಕವಾಗಿ ಶ್ರೇಷ್ಟ ನಿರ್ವಹಣೆ ನೀಡಿದ 4 ಸ್ಪರ್ಧಿಗಳಿಗೆ ಮತ್ತು 2 ಬಾಲ ಪ್ರತಿಭೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.

ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಧ್ವಜಾರೋಹಣ ಮಾಡಲಿದ್ದಾರೆ. ಉಡುಪಿ ಘಟಕಾಧ್ಯಕ್ಷ ಪ್ರವೀಣ್ ಡಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ನಮ್ಮ ಕುಡ್ಲ ಚಾನೆಲ್ ನ ಆಡಳಿತ ಪಾಲುದಾರ ಲೀಲಾಕ್ಷ ಕರ್ಕೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಪೂರ್ಣಿಮಾ ಅತಿಥಿಗಳಾಗಿ‌ ಭಾಗವಹಿಸಲಿದ್ದಾರೆ.

ಸಂಜೆ ಬಹುಮಾನ ವಿತರಣೆ ಹಾಗೂ ಸಮಾರೋಪ ನಡೆಯಲಿದ್ದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಅಧ್ಯಕ್ಷತೆ ವಹಿಸಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಚೆಫ್‌ಟಾಕ್ ನಿರ್ದೇಶಕ ಗೋವಿಂದ ಬಾಬು ಪೂಜಾರಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. , ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳ್ , ಕಾಪು ಬಿಲ್ಲವರ ಸಹಾಯಕ ಸಂಘ ಅಧ್ಯಕ್ಷ ಪ್ರಭಾಕರ ಪೂಜಾರಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಯು. ಶಿವಾನಂದ, ಯುವವಾಹಿನಿ ಉಡುಪಿ ಘಟಕ ಅಧ್ಯಕ್ಷ ಪ್ರವೀಣ್ ಡಿ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

ಯುವವಾಹಿನಿ ಕೇಂದ್ರ ಸಮಿತಿ ಮಾಜಿ‌ ಅಧ್ಯಕ್ಷ ಸಂತೋಷ್ ಕುಮಾರ್‌ ಉದ್ಯಾವರ, ಉಡುಪಿ ಘಟಕದ ಅಧ್ಯಕ್ಷ ಪ್ರವೀಣ್ ಡಿ. ಪೂಜಾರಿ, ಕಾರ್ಯದರ್ಶಿ ದಯಾನಂದ್ ಕರ್ಕೇರ, ಕಲೆ,ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕ ಜಗದೀಶ್ ಕುಮಾರ್ ಉದ್ಯಾವರ, ಸ‌ಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳು ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next