Advertisement

CT Ravi; ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

01:13 AM Jun 29, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಹಿಂದೆ ಹನಿಟ್ರ್ಯಾಪ್‌ ಇದೆ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.

Advertisement

ಆಂಧ್ರಪ್ರದೇಶದ ಸತ್ಯನಾರಾಯಣ ವರ್ಮ ಎಂಬಾತ ಈ ಪ್ರಕರಣದ ಸೂತ್ರಧಾರ. ವರ್ಮ ಒಬ್ಬ ವೃತ್ತಿಪರ ಕೇಡಿ ಎನ್ನುವ ಮಾಹಿತಿಯಿದೆ. ಹಲವು ರಾಜ್ಯಗಳಲ್ಲಿ ನಡೆದ ಅಕ್ರಮಗಳಲ್ಲಿ ಈತನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಈತನಿಗೆ ನಮ್ಮ ರಾಜ್ಯದ ಸಚಿವರು, ಶಾಸಕರು, ಅಧಿಕಾರಿಗಳು ಸಹಕರಿಸಿದ್ದಾರೆ. ಇದಕ್ಕೆ ಕಾರಣ ವೇನು ಎಂದು ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ. ರವಿ ಪ್ರಶ್ನಿಸಿದರು. ಇದಲ್ಲದೆ ನಿಗಮಕ್ಕೆ ಸೇರಿದ 187 ಕೋಟಿ ರೂ.ಗಳನ್ನು ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಚುನಾವಣೆಗಾಗಿ ಬಳಕೆ ಮಾಡ ಲಾಗಿದೆ ಎಂದು ಆರೋಪಿಸಿದರು.

ರಾಜ್ಯದ ಸಚಿವರು, ಶಾಸಕರು ಸಹಕಾರ ನೀಡದಿದ್ದರೆ ವರ್ಮಾನಿಂದ ಏನು ಮಾಡುವುದಕ್ಕೂ ಸಾಧ್ಯವಾಗು ತ್ತಿರಲಿಲ್ಲ. ಲಭ್ಯ ಮಾಹಿತಿಯ ಪ್ರಕಾರ ಇವರನ್ನೆಲ್ಲ ಗೋವಾ, ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಹನಿಟ್ರ್ಯಾಪ್‌ ಬಲೆಗೆ ಕೆಡವಿದ್ದ. ಸಿಹಿ ತಿನ್ನಿಸಿ ಜಾಲಕ್ಕೆ ಬೀಳಿಸಿದ್ದಾರೆ. ಈ ಜಾಲ ದೊಡ್ಡದು, ವೃತ್ತಿಪರವಾದದ್ದು. ಪ್ರಕರಣ ಬಯ ಲಾದ ಆರಂಭದಲ್ಲಿ ಕಮಿಷನ್‌ ಆಸೆಗೆ ಹಣ ಅಕ್ರಮ ವರ್ಗಾವಣೆ ಎಂದು ಹೇಳಲಾಯಿತು. ಅನಂತರ ರಿಯಲ್‌ ಎಸ್ಟೇಟ್‌ನಲ್ಲಿ ಲಾಭ ಮಾಡಿಕೊಂಡ ಬಳಿಕ ಹಣ ವಾಪಸ್‌ ಹಾಕುವವರಿದ್ದರು ಎನ್ನಲಾಯಿತು. ಆದರೆ ಇದರ ಅಸಲಿಯತ್ತು ಬೇರೆಯದೇ ಇದೆ ಎಂದು ಸಿ.ಟಿ. ರವಿ ಆರೋಪಿಸಿದರು.

ನೆಕ್ಕುಂಟಿ ನಾಗರಾಜ್‌ ಹೆಸರು ಹೊರಬಿದ್ದಾಗ, “ಆತ ನಾಗೇಂದ್ರ ಆಪ್ತನಲ್ಲ. ಕಚೇರಿಯಲ್ಲಿ ಕ್ಲರ್ಕ್‌ ಆಗಿದ್ದ’ ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದರು. ಇದರಲ್ಲಿ ಹನಿಟ್ರ್ಯಾಪ್‌ ಸಂಬಂಧ ಇರುವುದು ನಿಚ್ಚಳವಾಗಿದೆ. ನಿಗಮದ ಹಣ ಲೂಟಿ ಹೊಡೆದು, ಚುನಾವಣೆಗೆ ಪಾರ್ಟಿ ಫ‌ಂಡ್‌ ರೂಪದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಂಚಿದ್ದಾರೆ. ಮಾಜಿ ಸಚಿವ ನಾಗೇಂದ್ರ, ಶಾಸಕ ಬಸವರಾಜ್‌ ದದ್ದಲ್‌ ಇಬ್ಬರ ಮೇಲೂ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು.

ತನಿಖೆಯನ್ನು ಹಳ್ಳ ಹಿಡಿಸುವ ಹುನ್ನಾರ ಎದ್ದು ಕಾಣುತ್ತಿದೆ. ಒಂದೇ ಪ್ರಕರಣದ ತನಿಖೆಯನ್ನು ಎರಡು ಸಂಸ್ಥೆಗಳು ಏಕಕಾಲಕ್ಕೆ ನಡೆಸುವ ಅಗತ್ಯವಿಲ್ಲ. ಯೂನಿಯನ್‌ ಬ್ಯಾಂಕ್‌ ನೀಡಿದ ದೂರಿನ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದ್ದು, ರಾಜ್ಯ ಸರಕಾರ ಒಪ್ಪಿಗೆ ನೀಡಬೇಕು. 700 ಕೋ.ರೂ.ಗಳಿಗೂ ಹೆಚ್ಚು ಖಾತೆಗೆ ಹಣ ವರ್ಗಾವಣೆ ಯಾಗಿದ್ದು, ಇದೊಂದು ಅಂತಾರಾಜ್ಯ ಹಗರಣ. ಇದರ ತನಿಖೆಗೆ ಸಂಬಂಧಿಸಿ ರಾಜ್ಯ ಹಣಕಾಸು ಇಲಾಖೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

Advertisement

ಸಚಿವ ಶರಣ್‌ ಪ್ರಕಾಶ್‌ ಪಾಟೀಲ್‌ ಅವರ ಕಚೇರಿಯಲ್ಲಿ ಕುಳಿತು ಶಾಸಕ ಬಸವರಾಜ್‌ ದದ್ದಲ್‌ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ನಡೆಸಿದ್ದರು. ಸಿಎಂ ಅಧಿಕಾರ ವ್ಯಾಪ್ತಿಯಲ್ಲೇ ಹಗರಣ ನಡೆದಿದೆ. ಹೀಗಾಗಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸಿ.ಟಿ. ರವಿ ಆಗ್ರಹಿಸಿದರು.

ವಾಲ್ಮೀಕಿ ನಿಗಮ ಅವ್ಯವಹಾರ ಸಂಬಂಧ ಈಗಾಗಲೇ ಒಂದು ವಿಕೆಟ್‌ ಪತನವಾಗಿದೆ. ಇನ್ನೂ ಹಲವು ಇಲಾಖೆಗಳ ವ್ಯಾಪ್ತಿಯಲ್ಲಿ ನಡೆದಿರುವಈ ಹಗರಣದಲ್ಲಿ 3-4 ವಿಕೆಟ್‌ ಉರುಳಲಿವೆ. ಅಧಿವೇಶನದಲ್ಲೂ ಹೋರಾಟ ನಡೆಸಲಿದ್ದೇವೆ.
-ಆರ್‌. ಅಶೋಕ್‌, ವಿಪಕ್ಷ ನಾಯಕ

ಹಗರಣದ ಬಗ್ಗೆ ಎಸ್‌ಐಟಿ,ಸಿಐಡಿ ತನಿಖೆ ನಡೆಸುತ್ತಿವೆ. ಈಗ ರಾಜಕಾರಣಕ್ಕಾಗಿ ಬಿಜೆಪಿ ಹೋರಾಟ ನಡೆಸುತ್ತಿದೆ. ಸಿಐಡಿ ಮೇಲೆ ಒತ್ತಡ ಹಾಕುವ ಕೆಲಸ ಮಾಡಿಲ್ಲ.
-ಸಿದ್ದರಾಮಯ್ಯ , ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next