Advertisement

ಡಿಜಿಟಲ್‌ ವಹಿವಾಟಿಗೆ ವೇಗ ದೇಶದ ಗಡಿದಾಟಿದ ಯುಪಿಐ

12:46 AM Feb 22, 2023 | Team Udayavani |

ಭಾರತ ಡಿಜಿಟಲ್‌ ಪಾವತಿ ವ್ಯವಸ್ಥೆಯತ್ತ ಹೊರಳಿ ದಶಕ ಸಮೀಪಿಸುತ್ತಿದ್ದರೂ ಜನತೆ ಮಾತ್ರ ಕಳೆದ 2-3 ವರ್ಷಗಳಿಂದೀಚೆಗೆ ಇತ್ತ ಆಕರ್ಷಿತರಾಗತೊಡಗಿದ್ದಾರೆ. ಆರ್ಥಿಕ ಚಟುವಟಿಕೆಗಳನ್ನು ಪಾರದರ್ಶಕವಾಗಿಸುವ ಜತೆಯಲ್ಲಿ ನಗದು ವ್ಯವಹಾರಗಳಲ್ಲಿ ನಡೆಯುತ್ತಿರುವ ಅಕ್ರಮ, ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2016ರ ನ.8ರಂದು ಹಳೆಯ 500ರೂ., 1,000ರೂ. ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಜನ ನಿಧಾನವಾಗಿ ಡಿಜಿಟಲ್‌ ವ್ಯವ ಹಾರದತ್ತ ಮುಖ ಮಾಡತೊಡಗಿದ್ದರು. ಆದರೆ ಜನತೆ ನಗದು ವ್ಯವಹಾರವನ್ನೇ ಹೆಚ್ಚು ಅವಲಂಬಿಸಿಕೊಂಡು ಬಂದಿದ್ದರಿಂದಾಗಿ ಡಿಜಿಟಲ್‌ ವ್ಯವಹಾರ ನಿರೀಕ್ಷಿತ ಪ್ರಗತಿ ಕಂಡಿರಲಿಲ್ಲ. ಆದರೆ ಕಳೆದೆರಡು ವರ್ಷಗಳಿಂದೀಚೆಗೆ ದೇಶಾದ್ಯಂತ ಡಿಜಿಟಲ್‌ ವ್ಯವಹಾರ ತೀವ್ರಗತಿಯಲ್ಲಿ ಮುನ್ನೆಲೆಗೆ ಬರುತ್ತಿದ್ದು, ಸದ್ಯದ ವೇಗದಲ್ಲಿ ಜನರು ಡಿಜಿಟಲ್‌ ವ್ಯವಹಾರಕ್ಕೆ ಒಗ್ಗಿಕೊಂಡದ್ದೇಆದಲ್ಲಿ ಮುಂದಿನ ಕೆಲವೇ ತಿಂಗಳುಗಳಲ್ಲಿ ದೇಶದಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ನಗದನ್ನು ಹಿಂದಿಕ್ಕಲಿದೆ.

Advertisement

ದೇಶದಲ್ಲಿ ಪರಿಚಯಿಸಲಾದ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(ಯುಪಿಐ) ಅಂದರೆ ಏಕೀಕೃತ ಪಾವತಿ ವ್ಯವಸ್ಥೆಯಡಿ ಹಲವು ಆ್ಯಪ್‌ಗ್ಳು ಕಾರ್ಯನಿರ್ವಹಿಸುತ್ತಿವೆ. ಈ ವ್ಯವಸ್ಥೆಯಲ್ಲಿ ಜನರು ನಗದು ವಿನಿಮಯದ ಜಂಜಾಟವಿಲ್ಲದೆ ತಮ್ಮಲ್ಲಿರುವ ಮೊಬೈಲ್‌ ಮೂಲಕ ಕ್ಷಣ ಮಾತ್ರದಲ್ಲಿ ಹಣಪಾವತಿ ಅಥವಾ ವರ್ಗಾವಣೆ ಮಾಡಬಹುದಾಗಿದೆ. ಈಗ ಕೇಂದ್ರ ಸರಕಾರ ಮತ್ತು ಆರ್‌ಬಿಐ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈವರೆಗೆ ದೇಶಕ್ಕೆ ಮಾತ್ರ ಸೀಮಿತವಾಗಿದ್ದ ಯುಪಿಐ ಬಳಕೆಯನ್ನು ಸಿಂಗಾಪುರಕ್ಕೂ ವಿಸ್ತರಿಸಿದೆ. ಸಿಂಗಾಪುರದ ಡಿಜಿಟಲ್‌ ಪಾವತಿ ವ್ಯವಸ್ಥೆಯಾದ ಪೇನೌನೊಂದಿಗೆ ಯುಪಿಐ ಸಂಪರ್ಕ ಸಾಧಿಸಿದ್ದು, ಉಭಯ ದೇಶಗಳ ಜನರ ನಡುವಣ ಪಾವತಿ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಸುಲಭಸಾಧ್ಯವಾಗಿಸಲಿದೆ.

ತಿಂಗಳ ಹಿಂದೆಯಷ್ಟೇ ಕೇಂದ್ರ ಸರಕಾರ ಅಮೆರಿಕ, ಆಸ್ಟೇಲಿಯಾ, ಕೆನಡಾ, ಬ್ರಿಟನ್‌, ಸೌದಿ ಅರೇಬಿಯಾ, ಕತಾರ್‌ ಸಹಿತ 10 ದೇಶಗಳಲ್ಲಿನ ಅನಿವಾಸಿ ಭಾರತೀಯರಿಗೆ ಯುಪಿಐ ಬಳಕೆಗೆ ಅವಕಾಶ ಮಾಡಿಕೊಡುವ ನಿರ್ಧಾರ ಕೈಗೊಂ ಡಿತ್ತು. ಎನ್‌ಆರ್‌ಐಗಳು ಭಾರತದಲ್ಲಿನ ಫೋನ್‌ ಸಂಖ್ಯೆಯನ್ನು ಅವಲಂಬಿಸದೇ ವಹಿವಾಟುಗಳಿಗಾಗಿ ಯುಪಿಐ ಸೇವೆ ಬಳಸಲು ಅನುಮತಿ ನೀಡಲು ನಿರ್ಧರಿ ಸಿತ್ತು. ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆಗಳ ಮೂಲಕ ಯುಪಿಐ ಬಳಸಿ ವಹಿವಾಟು ನಡೆಸುವ ಸಂಬಂಧ ಕೆಲವು ನಿರ್ದೇಶನಗಳನ್ನು ರೂಪಿಸಿ ಇವುಗಳನ್ನು ಅನುಸರಿಸಲು ಸಂಬಂಧಿತ ಬ್ಯಾಂಕ್‌ಗಳಿಗೆ ಎ.30ರ ವರೆಗೆ ಕಾಲಾವಕಾಶ ನೀಡಿದೆ.

ಡಿಜಿಟಲ್‌ ವ್ಯವಹಾರ ಮತ್ತು ದೇಶದಲ್ಲಿಯೇ ರೂಪಿತವಾದ ಯುಪಿಐ ವ್ಯವಸ್ಥೆಯ ವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಈ ನಿರ್ಧಾರಗಳು ಅತ್ಯಂತ ಮಹತ್ವಪೂರ್ಣವಾದುದು. ಸ್ವದೇಶಿ ತಂತ್ರಜ್ಞಾನ ಬಳಸಿ ಈ ವ್ಯವಸ್ಥೆಯನ್ನು ರೂಪಿಸಲಾಗಿರುವುದರಿಂದ ಯುಪಿಐ ಸದ್ಯ ಚಾಲ್ತಿಯಲ್ಲಿರುವ ಉಳಿದೆಲ್ಲ ಪಾವತಿ ವ್ಯವಸ್ಥೆಗಿಂತ ಹೆಚ್ಚು ಸುರಕ್ಷಿತ ಎಂಬುದು ಕೇಂದ್ರ ಸರಕಾರ ಮತ್ತು ಆರ್‌ಬಿಐನ ಪ್ರತಿಪಾದನೆ. ಇವೆಲ್ಲದರ ಹೊರತಾಗಿಯೂ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವಂತೆಯೇ ಸೈಬರ್‌ ಖದೀಮರು ಕೂಡ ಚಾಣಾಕ್ಷತೆ ಮೆರೆಯುತ್ತಿರುವು ದ ರಿಂದಾಗಿ ಇವರ ಮೇಲೆ ಸರಕಾರ ಹದ್ದುಗಣ್ಣಿರಿಸುವುದು ಅತ್ಯವಶ್ಯಕ. ಅಷ್ಟು ಮಾತ್ರವಲ್ಲದೆ ಡಿಜಿಟಲ್‌ ಕ್ಷೇತ್ರದಲ್ಲಿ ಖಾಸಗಿತನದ ರಕ್ಷಣೆ ಬಲುದೊಡ್ಡ ಸವಾಲಾ ಗಿದ್ದು ಡಿಜಿಟಲ್‌ ಪಾವತಿದಾರನ ರಹಸ್ಯ ಮಾಹಿತಿಗಳು ಸೋರಿಕೆಯಾಗದಂತೆ ಮತ್ತು ಈ ಮಾಹಿತಿಗಳನ್ನು ಸರಕಾರ ಆದಿಯಾಗಿ ಯಾವೊಂದೂ ಸಂಸ್ಥೆಯಾಗಲೀ ಅನಗತ್ಯವಾಗಿ ದುರುಪಯೋಗಪಡಿಸಿಕೊಳ್ಳದಿರುವ ಖಾತರಿಯನ್ನು ನೀಡುವ ಹೊಣೆಗಾರಿಕೆ ಆರ್‌ಬಿಐ ಮತ್ತು ಸರಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್‌ ವ್ಯವಹಾರಕ್ಕೆ ಉತ್ತೇಜನ ನೀಡುವ ಜತೆಜತೆಯಲ್ಲಿ ಈ ಎರಡು ಪ್ರಮುಖ ಜವಾಬ್ದಾರಿಗಳತ್ತಲೂ ಸರಕಾರ ಇನ್ನಷ್ಟು ಹೆಚ್ಚಿನ ಗಮನಹರಿಸಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next