Advertisement

ಜಿಲ್ಲೆಯಲ್ಲಿ ಅತಿವೃಷ್ಟಿಗೆ 1,320 ಹೆಕ್ಟೇರ್‌ ಬೆಳೆ ಹಾನಿ

02:27 PM Dec 01, 2021 | Team Udayavani |

ಮೈಸೂರು: ಇತ್ತೀಚೆಗೆ ಸುರಿದ ಹಿಂಗಾರು ಸತತ ಮಳೆಯಿಂದಾಗಿ ಮೈಸೂರು ಜಿಲ್ಲೆಯಲ್ಲಿ 1320 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕೃಷಿ, ತೋಟಗಾರಿಕೆ ಫ‌ಸಲು ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತೆ, ವರ್ಷವಿಡೀ ಶ್ರಮಪಟ್ಟು ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಳೆಯಿಂದಾಗಿ ನೆಲ ಕಚ್ಚಿದೆ.

Advertisement

ಸತತ ಒಂದು ತಿಂಗಳು ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಮೈಸೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಬೆಳೆದಿದ್ದ ಬೆಳೆ ಹೊಲದಲ್ಲೇ ಕೊಳೆತು ಹೋಗಿದ್ದು, ರೈತರು ನಷ್ಟ ಅನುಭವಿಸಿದಂತಾಗಿದೆ.

945.7 ಹೆಕ್ಟೇರ್‌ನಲ್ಲಿ ಬೆಳೆ ನಾಶ: ಜಿಲ್ಲೆಯ ಹುಣಸೂರು, ಎಚ್‌.ಡಿ.ಕೋಟೆ, ಕೆ.ಆರ್‌. ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಶ್ರಿತ ಮತ್ತು ನೀರಾವರಿ ಆಶ್ರಿತ ಕೃಷಿ ಭೂಮಿಯಲ್ಲಿ 1,384 ರೈತರು 945.7 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಹತ್ತಿ, ರಾಗಿ, ಭತ್ತ, ಮೆಕ್ಕೆ ಜೋಳ, ಚಿಯಾ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದ್ದು, ಸುಮಾರು 72.47 ಲಕ್ಷ ರೂ. ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

375 ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶ: ಸತತ ಒಂದು ತಿಂಗಳು ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ನಂಜನಗೂಡು, ಮೈಸೂರು ತಾಲೂಕು, ಪಿರಿಯಾಪಟ್ಟಣ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ 375 ಹೆಕ್ಟೇರ್‌ ತೋಟಗಾರಿಕೆ ಬೆಳೆ ನೆಲ ಕಚ್ಚಿದೆ. ಸರಿಸುಮಾರು 67 ಲಕ್ಷ ರೂ. ಮೌಲ್ಯದ ತರಕಾರಿ ಬೆಳೆ, ಬಾಳೆ, ಶುಂಠಿ ಕೊಳೆತು ಹೋಗಿದ್ದು, ಉತ್ತಮ ಫ‌ಸಲು ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗುವಂತಾಗಿದೆ.

ಅವೈಜ್ಞಾನಿಕ ಬೆಳೆ ಪರಿಹಾರ: ಕೃಷಿ ಭೂಮಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಫ‌ಸಲು ಕಳೆದುಕೊಂಡ ರೈತನಿಗೆ ವೈಜ್ಞಾನಿಕವಾಗಿ ಬೆಳೆ ಪರಿಹಾರ ನೀಡದ ಕೃಷಿ ಇಲಾಖೆ ಪ್ರತಿ ಹೆಕ್ಟೇರ್‌ಗೆ ಕೇವಲ 6,800 ರೂ. ಮತ್ತು 13,500 ರೂ. ನಂತೆ ಪರಿಹಾರ ವಿತರಿಸುತ್ತಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಎಂಬ ಗಾದೆ ಮಾತಿನಂತಾಗಿದೆ. ಜೊತೆಗೆ ತೋಟಗಾರಿಕೆ ಬೆಳೆಯಲ್ಲಿ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ. ನೀಡುತ್ತಿರುವುದು ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ ಎಂಬುದು ರೈತರ ಅಳಲಾಗಿದೆ.

Advertisement

ಇಕ್ಕಟ್ಟಿನ ಸ್ಥಿತಿಯಲ್ಲಿ ರೈತ: ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ ಕಡೆ ಭತ್ತ, ರಾಗಿ ಕಟಾವಿಗೆ ಬಂದಿದೆ. ಆದರೆ ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಮಳೆ ಬೀಳುವ ಆತಂಕದಲ್ಲಿರುವ ರೈತರು ಕೈಗೆ ಬಂದಿರುವ ಬೆಳೆಯನ್ನು ಮನೆಗೆ ಕೊಂಡೊಯ್ಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಪರಿಣಾಮ ಶೇ.90 ರಷ್ಟು ರೈತರ ಭತ್ತ ಮತ್ತು ರಾಗಿ ಗದ್ದೆ-ಹೊಲದಲ್ಲೇ ಮೊಳಕೆಯೊಡೆಯುತ್ತಿದ್ದು, ಇದರಿಂದ ಅನ್ನದಾತ ಕಂಗಾಲಾಗಿ¨ªಾನೆ. ಈಗಾಗಲೇ ರೈತರು ಉಳುಮೆ, ನಾಟಿ, ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳಿಗೆ ಮಾಡಿದ್ದ ಖರ್ಚು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

 ರೈತರ ಖಾತೆಗೆ ಶೀಘ್ರ ಬೆಳೆ ಪರಿಹಾರ ಹಣ ಜಮೆ

ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಶೀಘ್ರವೇ ರೈತರ ಖಾತೆಗೆ ಬೆಳೆ ಪರಿಹಾರ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ.

ಜಿಲ್ಲೆಯಲ್ಲಿ 945.7 ಹೆಕ್ಟೇರ್‌ ಮಳೆಯಾಶ್ರಿತ ಮತ್ತು ನಿರಾವರಿ ಭೂಮಿಯಲ್ಲಿ ಬೆಳೆದಿದ್ದ ಫ‌ಸಲು ನಾಶವಾಗಿದ್ದು, ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ ಗೆ 6800 ರೂ., ನೀರಾವರಿಯಾಶ್ರಿತ ಪ್ರತಿ ಹೆಕ್ಟೇರ್‌ಗೆ 13,500 ರೂ. ಪರಿಹಾರ ನೀಡಲಾಗುವುದು ಎಂದು ಕೃಷಿ ಇಲಾಖೆ ಉಪನಿರ್ದೇಶಕ ಮಹಂತೇಶಪ್ಪ ತಿಳಿಸಿದರು.

 ಅಕ್ಟೋಬರ್‌-ನವೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ 375 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ನಾಶವಾಗಿರುವುದನ್ನು ಸರ್ವೆ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ. ಬೆಳೆ ಪರಿಹಾರ ವಿತರಿಸಲಾಗುವುದು. ರುದ್ರೇಶ್‌, ಉಪನಿರ್ದೇಶಕ ತೋಟಗಾರಿಕೆ ಇಲಾಖೆ, ಮೈಸೂರು.

 – ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next