Advertisement

Dalits,ಅಂಬೇಡ್ಕರ್ ಬಗ್ಗೆ ಮೊಸಳೆ ಕಣ್ಣೀರು: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಕಿಡಿ

06:23 PM Jan 29, 2024 | Team Udayavani |

ಬೀದರ್ : ಚುನಾವಣೆ ವೇಳೆ ದಲಿತರು ಮತ್ತು ಅಂಬೇಡ್ಕರ್ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್‌ನಿಂದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

Advertisement

ನಗರದ ಗಣೇಶ ಮೈದಾನದಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗೆ ದಲಿತರ ಬಗ್ಗೆ ಗೌರವ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ, ಕೇಂದ್ರದ ಮೋದಿ ಸರ್ಕಾರದಲ್ಲಿ ೨೭ ಜನ ದಲಿತರು, ಹಿಂದುಳಿದ ನಾಯಕರೇ ಸಚಿವರಾಗಿದ್ದಾರೆ ಎಂಬುದು ಗೊತ್ತಿರಲಿ. ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್, ಸೋಲಿಸಿದ್ದ ವ್ಯಕ್ತಿಗೆ ಭಾರತ ರತ್ನ ನೀಡಿದ್ದಾರೆ. ಅವರ ಸಾವಿನ ನಂತರ ಗೌರವ ಪೂರ್ವಕ ಅಂತ್ಯಸಂಸ್ಕಾರಕ್ಕೂ ಅವಕಾಶ ಮಾಡಿಕೊಡಲಿಲ್ಲ. ಇದೇನಾ ದಲಿತರು, ಅಂಬೇಡ್ಕರ್ ಬಗ್ಗೆ ಇರುವ ಗೌರವ ಎಂದು ಪ್ರಶ್ನಿಸಿದರು.

ಈಗ ಕಾಲ ಸಂಪೂರ್ಣ ಬದಲಾಗಿದೆ. ಅಂಬೇಡ್ಕರ್ ಜನ್ಮಸ್ಥಳ ಸೇರಿ ಪಂಚ ಕ್ಷೇತ್ರಗಳನ್ನು ಮೋದಿ ಸರ್ಕಾರ ಅಭಿವೃದ್ಧಿಗೊಳಿಸಿದೆ ಎಂದು ಹೇಳಿದ ವಿಜಯೇಂದ್ರ, ಬಿಜೆಪಿ ಎಲ್ಲ ಜಾತಿ, ವರ್ಗದವರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಅಹಿಂದ್ ಎನ್ನುತ್ತ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ‘ಹಿಂದ್’ ಪಕ್ಕಕ್ಕಿಟ್ಟು ಕೇವಲ ಅಲ್ಪಸಂಖ್ಯಾತರರ ಜಪ ಮಾಡುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಐದು ದಶಕಗಳ ಕಾಲ ಗಾಂಧಿ ಕುಟುಂಬದವರೇ ಪ್ರಧಾನಿಗಳಾಗಿದ್ದರು. ಕಾಂಗ್ರೆಸ್‌ನಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಭ್ರಮ ಹುಟ್ಟಿಸಲಾಗಿತ್ತು. ಮುಗ್ದ ಜನರು ಅದನ್ನು ನಂಬಿ ಅವರಿಗೆ ಬೆಂಬಲಿಸುತ್ತ ಬಂದಿದ್ದರು. ದೇಶದಲ್ಲಿ ಬಡವರು, ಅವಿದ್ಯಾವಂತರು ಇದ್ದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡತನ ನಿರ್ಮೂಲನೆ ಆಗಲೇ ಇಲ್ಲ. ಹಾಗಾಗಿ ದೇಶದಲ್ಲಿ ಬಡತನಕ್ಕೆ ಕಾಂಗ್ರೆಸ್ ಕಾರಣ ಎಂದು ಕಿಡಿಕಾರಿದರು.

ದೇಶದಲ್ಲಿ ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಆಡಳಿತ ನಡೆಸಲು ಸಾಧ್ಯವಿದೆ ಎಂದು ಪ್ರಧಾನಿ ಮೋದಿ 2014ರ ಚುನಾವಣೆ ಮೊದಲೇ ಹೇಳಿದ್ದರು. ಈ ಹತ್ತು ವರ್ಷದಲ್ಲಿ ಮೋದಿ ಒಂದು ದಿನವೂ ವಿಶ್ರಾಂತಿ ಪಡೆಯದೇ, ಒಬ್ಬ ತಪಸ್ವಿಯಂತೆ ಭ್ರಷ್ಟಾಚಾರ ಮುಕ್ತ ಆಡಳಿತದ ಮೂಲಕ ಭಾರತವನ್ನು ಅಗ್ರಗಣ್ಯ ರಾಷ್ಟ್ರವನ್ನಾಗಿಸಿದ್ದಾರೆ. ಈಗ ಮತ್ತೊಮ್ಮೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ರಾಷ್ಟ್ರದ ಜನರು ಕಾಯುತ್ತಿದ್ದಾರೆ. ಹಾಗಾಗಿ ರಾಜ್ಯದ 28 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರಧಾನಿಗಳ ಕೈ ಬಲಪಡಿಸಬೇಕಿದೆ. ಈ ಯಶಸ್ಸಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

‘ಮಜಾ ಮಾಡಲು ಸರ್ಕಾರ ಬೇಕು’

ಕಾಂಗ್ರೆಸ್‌ಗೆ ಅಧಿಕಾರ ನಡೆಸಲು ಮತ್ತು ಮಜಾ ಮಾಡಲು ಸರ್ಕಾರ ಬೇಕು. ಆದರೆ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲು ಖಜಾನೆಯಲ್ಲಿ ಹಣ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ, ರೈತರ ಆತ್ಮಹತ್ಯೆಗಳು ಹೆಚ್ಚುತ್ತಿದ್ದರೂ ನೆರವಾಗಬೇಕಾಗಿದ್ದ ಸರ್ಕಾರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಬೊಟ್ಟು ಮಾಡುತ್ತಿದೆ. ಹಾಗಾದರೆ ನಿಮ್ಮನ್ನು ಜನ ಅಧಿಕಾರಕ್ಕೆ ತಂದಿರುವುದೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರ ಆವರಿಸಿದಾಗ ಸಿಎಂ ಅಗಿದ್ದ ಯಡಿಯೂರಪ್ಪ ಅವರು ಕೇಂದ್ರದಿಂದ ಅನುದಾನಕ್ಕಾಗಿ ಕಾಯದೇ ಕೃಷಿಕರಿಗೆ ಹೆಚ್ಚುವರಿ ಪರಿಹಾರ ಕೊಟ್ಟು ಸ್ಪಂದಿಸಿದ್ದರು. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಅವರಿಗಾಗಿ ಪ್ರತ್ಯೇಕ ಬಜೆಟ್‌ನ್ನೇ ನೀಡಿದ್ದ ಬಿಎಸ್‌ವೈ ದೇಶದಲ್ಲೇ ಒಬ್ಬ ಧೀಮಂತ ಮುಖ್ಯಮಂತ್ರಿ ಎಂದು ಬಣ್ಣಿಸಿದರು.

ರಾಮ ಭಕ್ತರ ಅಪಮಾನ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಪೊಲೀಸರ ಮೂಲಕ ಹನುಮ ಧ್ವಜವನ್ನು ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಾಮ ಭಕ್ತರನ್ನು ಅಪಮಾನ ಮಾಡಿದೆ. ಕಾಂಗ್ರೆಸ್ಸಿಗರ ದರ್ಪ ಬಹಳ ದಿನ ನಡೆಯುವುದಿಲ್ಲ. ರಾಜ್ಯ ಸರ್ಕಾರ ಮತ್ತು ನಾಯಕರ ವರ್ತನೆ, ನಡೆಯನ್ನು ಜನ ಗಮನಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ಬೀದರಗೆ ಆಗಮಿಸಿದ್ದ ವಿಜಯೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮತ್ತು ನೂತನ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ್, ಸಿದ್ದು ಪಾಟೀಲ, ಬಸವರಾಜ ಮತ್ತಿಮಾಡು, ಎಂಎಲ್‌ಸಿ ರಘುನಾಥ ಮಲ್ಕಾಪುರೆ, ಮಾಜಿ ಶಾಸಕರಾದ ಪಿ. ರಾಜೀವ್, ಗುಂಡಪ್ಪ ವಕೀಲ್, ಸುಭಾಷ ಗುತ್ತೇದಾರ್, ಸುನೀಲ ವಲ್ಲೇಪುರ್, ಅಮರನಾಥ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಮುಖರಾದ ಬಾಬು ವಾಲಿ, ಈಶ್ವರಸಿಂಗ್ ಠಾಕೂರ್ ಮತ್ತಿತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next