Advertisement

ಕೆಂಪೇಗೌಡ ಪ್ರಶಸ್ತಿಗೆ “ಮಾನ’ದಂಡ

12:10 PM Dec 16, 2018 | |

ಬೆಂಗಳೂರು: ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 550ಕ್ಕೂ ಹೆಚ್ಚು ಮಂದಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಇದೀಗ ಕೆಂಪೇಗೌಡ ಪ್ರಶಸ್ತಿಯ ಮೌಲ್ಯ ಹೆಚ್ಚಿಸಲು ಮುಂದಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಯಾವುದೇ ಮಾನದಂಡ ಅನುಸರಿಸದೆ 550ಕ್ಕೂ ಹೆಚ್ಚು ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪರಿಣಾಮ ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆಯ ಗೂಡಾಗಿ ಪರಿಣಮಿಸಿತ್ತು. ಜತೆಗೆ ನೂರಾರು ಪುರಸ್ಕೃತರಿಗೆ ಪ್ರಶಸ್ತಿ ಫ‌ಲಕ ಹಾಗೂ ಸ್ಮರಣಿಕೆಗಳೇ ದೊರೆಯದೆ ಪಾಲಿಕೆ, ಪುರಸ್ಕೃತರಿಬ್ಬರೂ ಮುಜುಗರ ಅನುಭವಿಸುವಂತಾಗಿತ್ತು. ಜತೆಗೆ ಕಾರ್ಯಕ್ರಮ ನೋಡಲು ಬಂದವರೂ ಪ್ರಶಸ್ತಿ ಪಡೆಯುವ ಮೂಲಕ ಪಾಲಿಕೆಯ ಆಡಳಿತ ವೈಫ‌ಲ್ಯವನ್ನು ಬಯಲು ಮಾಡಿದ್ದರು. 

ಈ ಅದ್ವಾನ, ಅವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ಬೇಕಾಬಿಟ್ಟಿಯಾಗಿ ಪ್ರಶಸ್ತಿ ನೀಡುವ ಮೂಲಕ ನಾಡಪ್ರಭು ಕೆಂಪೇಗೌಡರ ಹೆಸರಿಗೆ ಅಗೌರವ ತೋರಿರುವ ಪಾಲಿಕೆ ಆಡಳಿತ, ಪ್ರಶಸ್ತಿಯ ಮೌಲ್ಯವನ್ನು ಹಾಳು ಮಾಡುತ್ತಿದೆ ಎಂದು ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕ ವಲಯದಿಂದ ಕೇಳಿಬಂದ ಟೀಕೆ, ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಮುಂದಿನ ವರ್ಷ ಕೆಂಪೇಗೌಡ ಪ್ರಶಸ್ತಿ ನೀಡುವ ವೇಳೆ ಸಾಧಕರನ್ನು ಗುರುತಿಸಲು ಮಾನದಂಡ ನಿಗದಿಪಡಿಸುವ ಜತೆಗೆ, ಸಾಧಕರ ಆಯ್ಕೆಗೆ ಸಮಿತಿ ರಚಿಸುವಂತೆ ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಪತ್ರದ ಬರೆದಿದ್ದರು.

ಶಿವರಾಜು ಅವರ ಪತ್ರಕ್ಕೆ ಸ್ಪಂದಿಸಿರುವ ಪರಮೇಶ್ವರ್‌ ಅವರು, ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಅನುಸರಿಸುವ ಮಾನದಂಡಗಳನ್ನೇ ಕೆಂಪೇಗೌಡ ಪ್ರಶಸ್ತಿ ಆಯ್ಕೆಗೂ ಅಳವಡಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದ್ದು, ಮಾನದಂಡಗಳ ಕರಡು ಸಿದ್ಧಪಡಿಸಿ ಸರ್ಕಾರದಿಂದ ಆದೇಶ ಹೊರಡಿಸಲು ಚಿಂತನೆ ನಡೆಸಿದೆ. ಆ ಮೂಲಕ ಅರ್ಹರಿಗೆ ಮಾತ್ರ ಪ್ರಶಸ್ತಿ ನೀಡುವತ್ತ ಪಾಲಿಕೆ ಹೆಜ್ಜೆಯಿರಿಸಿದೆ. 

Advertisement

ಪ್ರಶಸ್ತಿಗಳ ಸಂಖ್ಯೆ ಗೊಂದಲ: ಈ ನಡುವೆ, ಪ್ರಶಸ್ತಿಯನ್ನು ಎಷ್ಟು ಜನರಿಗೆ ನೀಡಬೇಕು ಎಂಬುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಸಂದಿರುವ ವರ್ಷಗಳ ಲೆಕ್ಕದಲ್ಲಿ ಅಥವಾ ಮೇಯರ್‌ಗಳ ಸಂಖ್ಯೆಗೆ ಅನುಗುಣವಾಗಿ ಪ್ರಶಸ್ತಿ ನೀಡಬೇಕೆ ಎಂಬ ಗೊಂದಲಕ್ಕೆ ಒಳಗಾಗಿರುವ ಪಾಲಿಕೆ, ಕೌನ್ಸಿಲ್‌ ಸಭೆಯಲ್ಲಿ ವಿಷಯ ಮಂಡಿಸಿ, ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.

ಜನಪ್ರತಿನಿಧಿಗಳ ಬೆಂಬಲ ದೊರೆಯುವುದೇ?: ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಜನಪ್ರತಿನಿಧಿಗಳು ತಮ್ಮ ಮತ ಬ್ಯಾಂಕ್‌ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದಾಗಿ ಕಾರ್ಪೊರೇಟರ್‌ಗಳು ವಾರ್ಡ್‌ನಲ್ಲಿ ತಮ್ಮ ಪರವಾಗಿ ಕೆಲಸ ಮಾಡುವವರಿಗೆ ಪ್ರತಿ ವರ್ಷ ಕೆಂಪೇಗೌಡ ಪ್ರಶಸ್ತಿ ನೀಡಿ “ಋಣ ತೀರಿಸುವ’ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ಆಯ್ಕೆ ಸಮಿತಿ ರಚನೆಯಾಗಿ, ಮಾನದಂಡಗಳನ್ನು ನಿಗದಿಪಡಿಸಿದರೆ ಜನಪ್ರತಿನಿಧಿಗಳ ಈ ಆಟಾಟೋಪ ತಪ್ಪಲಿದೆ. ದರೆ, ಆಯ್ಕೆ ಸಮಿತಿ ರಚನೆ ಮತ್ತು ಮಾನದಂಡಗಳ ನಿಗದಿಗೆ ಕಾರ್ಪೊರೇಟರ್‌ಗಳು ಅವಕಾಶ ನೀಡುವರೇ ಎಂಬುದೇ ಈಗಿರುವ ಪ್ರಶ್ನೆ.

ಪ್ರಶಸ್ತಿ ನೀಡಿ ಓಲೈಸುವ ಇರಾದೆ?: 2020ರಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮುಖಂಡರಿಗೆ ಕೆಂಪೇಗೌಡ ಪ್ರಶಸ್ತಿ ಕೊಡಿಸಿ ಅವರನ್ನು ಓಲೈಸುವ ಆಲೋಚನೆ ಮೂರೂ ಪಕ್ಷಗಳ ಬಹುತೇಕ ಸದಸ್ಯರದ್ದಾಗಿದೆ. ಸದಸ್ಯರ ಆಲೋಚನೆ, ಇರಾದೆ ಮೀರಿ ಈ ಬಾರಿಯಾದರೂ ಪ್ರಶಸ್ತಿಗೆ “ಅರ್ಹರನ್ನು’ ಆಯ್ಕೆ ಮಾಡುವ ಮೂಲಕ ಕೆಂಪೇಗೌಡ ಪ್ರಶಸ್ತಿಯ ಮೌಲ್ಯ ಹೆಚ್ಚಿಸುವ ಕೆಲಸವನ್ನು ಪಾಲಿಕೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಮಾನದಂಡಗಳ ನಿಗದಿ ಮತ್ತು ತಜ್ಞರ ಸಮಿತಿ ರಚನೆ ಮನವಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಸಹಮತ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು 100ಕ್ಕೆ ಸೀಮಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. 
-ಎಂ.ಶಿವರಾಜು, ಪಾಲಿಕೆ ಆಡಳಿತ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next