Advertisement

ಮಾನದಂಡ ಬದಲಾವಣೆ ಅಗತ್ಯ: ರಾಜ್ಯ ಮಾನವಹಕ್ಕು ಆಯೋಗ

09:26 PM May 29, 2019 | sudhir |

ಕಾಸರಗೋಡು: ಪಡಿತರ ಚೀಟಿಯ ಆದ್ಯತೆ ಪಟ್ಟಿಯ ಮಾನದಂಡ ಗಳಲ್ಲಿ ಬದಲಾವಣೆ ನಡೆಸಬೇಕು ಎಂದು ರಾಜ್ಯ ಮಾನವ ಹಕ್ಕು ಆಯೋಗ ಆಗ್ರಹಿಸಿದೆ.

Advertisement

ರಾಜ್ಯದ ಪ್ರತ್ಯೇಕ ಸಾಮಾಜಿಕ ಪರಿಸ್ಥಿತಿ ಗಳ ಹಿನ್ನೆಲೆಯಲ್ಲಿ ರಾಷ್ಟಿÅàಯ ಮಟ್ಟದ ಮಾನದಂಡಗಳನ್ನು ಬಳಸಿ ಪಡಿತರ ಚೀಟಿಯ ಆದ್ಯತೆ ಮತ್ತು ಆದ್ಯತೆಯೇತರ ಪಟ್ಟಿಯನ್ನು ಸಿದ್ಧಗೊಳಿಸುವಲ್ಲಿ ವೈಜ್ಞಾನಿಕ ವಾಗಿ ಬದಲಾವಣೆ ನಡೆಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಕೇರಳದ ಹಿನ್ನೆಲೆಯಲ್ಲಿ ದೇಶ ಮಟ್ಟದ ಮಾನದಂಡ ಪಾಲನೆ ಪ್ರಾಯೋಗಿಕವಲ್ಲ. 1200 ಚದರ ಅಡಿ ವಿಸ್ತೀರ್ಣ ಹೊಂದಿರುವ ಮನೆ ಕೇರಳದಲ್ಲಿ ಶ್ರೀಮಂತಿಕೆಯ ಸಂಕೇತವಲ್ಲ. ಜಾಗವನ್ನು ಅಡವಿರಿಸಿ, ದೀರ್ಘಾವ ಧಿಯ ಬ್ಯಾಂಕ್‌ ಸಾಲ ಪಡೆದು ರಾಜ್ಯದ ಬಹುತೇಕ ಮಂದಿ ಮನೆ ಕಟ್ಟಿಕೊಳ್ಳುತ್ತಾರೆ. ಈ ಹಿನ್ನೆಲೆಯನ್ನು ಗಮನಿಸದೆ ದೇಶೀಯ ಮಟ್ಟದ ಪಡಿತರ ಮಾನದಂಡ ಹೇರಿಕೆ ಸಲ್ಲದು ಎಂದು ಆಯೋಗ ವಿಶ್ಲೇಷಿಸಿದೆ.

ನಗರದ ಪಿಲಿಕುಂಜೆ ವಿಶ್ರಾಂತಿ ಗೃಹದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಆಯೋಗ ತನ್ನ ಅಭಿಮತ ಮಂಡಿಸಿದೆ.

ಆಯೋಗ ಸದಸ್ಯ ಕೆ. ಮೋಹನ್‌ ಕುಮಾರ್‌ ಅವರ ನೇತೃತ್ವದಲ್ಲಿ ಈ ಸಭೆ ಜರಗಿದೆ. ಒಟ್ಟು 27 ದೂರುಗಳನ್ನು ಪರಿಶೀಲಿಸಲಾಗಿದೆ.

ಸೂಕ್ತ ಚಿಕಿತ್ಸೆ ಲಭಿಸದೇ ಇದ್ದ ಕಾರಣ ಗರ್ಭಸ್ಥ ಶಿಶು ಮೃತಪಟ್ಟಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಸಲ್ಲಿಸಿದ ವರದಿಯಲ್ಲಿ ದೂರುದಾತನಿಗೆ ತೃಪ್ತಿ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಲು ಪರಿಣತ ತಂಡವೊಂದನ್ನು ನೇಮಿಸಲು ಆಯೋಗ ಸಂಬಂಧಪಟ್ಟವರಿಗೆ ಆದೇಶಿಸಿದೆ.

Advertisement

ನೆಲ್ಲಿಕುಂಜೆ ನಿವಾಸಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಕಾಸರ ಗೋಡು ಜನರಲ್‌ ಆಸ್ಪತ್ರೆಯಲ್ಲಿ ಪೂರ್ಣ ಗರ್ಭಿಣಿಯಾಗಿದ್ದ ತನ್ನ ಪತ್ನಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಿದೇ ಇದ್ದುದರಿಂದ ಗರ್ಭಸ್ಥ ಶಿಶು ಮೃತಪಟ್ಟಿತ್ತು ಎಂದು ದೂರುದಾತ ಆರೋಪಿಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೂಕ್ತ ಪ್ರಮಾಣದ ಸೌಲಭ್ಯಗಳಿಲ್ಲದ ಆ್ಯಂಬುಲೆನ್ಸ್‌ ಒಂದರಲ್ಲಿ ತನ್ನ ಪತ್ನಿಯನ್ನು ಕರೆದೊಯ್ಯಲಾಗಿತ್ತು. ಅಲ್ಲಿನ ಚಿಕಿತ್ಸೆಗಾಗಿ 1.5 ಲಕ್ಷ ರೂ. ವೆಚ್ಚವಾಗಿತ್ತು. ಆದರೂ ಮಗು ಮೃತಪಟ್ಟಿತ್ತು. ಜನರಲ್‌ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸಿದ್ದಲ್ಲಿ ತನ್ನ ಮಗು ಬದುಕಿ ಉಳಿಯುತ್ತಿತ್ತು ಎಂದು ದೂರುದಾತ ಆರೋಪಿಸಿದ್ದಾರೆ.

ಈ ಸಂಬಂಧ ವರದಿ ಸಲ್ಲಿಸುವಂತೆ ಆಯೋಗ ಆದೇಶಿಸಿತ್ತು. ಜಿಲ್ಲಾ ವೈದ್ಯಾಧಿಕಾರಿ ಸಲ್ಲಿಸಿದ ವರದಿಯಲ್ಲಿ ಮಹಿಳೆಗೆ ತೀವ್ರ ರಕ್ತ ಸ್ರಾವ ಸಂಭವಿಸಿದುದೇ ಮಗುವಿನ ಸಾವಿಗೆ ಕಾರಣ. ಚಿಕಿತ್ಸೆ ನೀಡಿದ್ದ ವೈದ್ಯರಿಂದ ಲೋಪ ಸಂಭವಿಸಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ ದೂರುದಾತ ಇದನ್ನು ಆಕ್ಷೇಪಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಮುಂದೆ ಯಾರೊಬ್ಬರಿಗೂ ತಮಗಾದ ಅನ್ಯಾಯವಾಗ ಕೂಡದು ಎಂದು ದೂರುದಾತ ತಿಳಿಸಿದ್ದಾರೆ.

ಬಂದಡ್ಕ ಬಸ್‌ ನಿಲ್ದಾಣ ಆವರಣದಲ್ಲಿ ಬಿವರೇಜ್‌ ಕಾರ್ಪೊರೇಷನ್‌ನ ವಿದೇಶಿ ಮದ್ಯದಂಗಡಿ ಸ್ಥಾಪನೆ ಸಂಬಂಧ ದೂರಿಗೆ ಸಂಬಂ ಧಿಸಿ ಕಾರ್ಪೊರೇಷನ್‌ ಪ್ರತಿನಿ ಧಿಗಳು ಆಯೋಗಕ್ಕೆ ತಮ್ಮ ಉತ್ತರ ಸಲ್ಲಿಸಿದ್ದಾರೆ. ಬಸ್‌ ನಿಲ್ದಾಣದ ಬಳಿಯೇ ಎರಡು ಖಾಸಗಿ ಬಾರ್‌ಗಳು ಚಟುವಟಿಕೆ ನಡೆಸುತ್ತಿದ್ದರೂ, ಆ ಬಗ್ಗೆ ಆಕ್ಷೇಪಿಸದೆ, ನಿಗಮದ ಅಂಗಡಿಯಿಂದ ಮಾತ್ರ ಕುಡುಕರ ಹಾವಳಿ ಹೆಚ್ಚಲಿದೆ ಎಂದು ದೂರುದಾತರು ತಿಳಿಸಿರುವುದು ಸರಿಯಲ್ಲ. ಜತೆಯಲ್ಲಿ ನಿಗಮದ ಅಂಗಡಿಯಲ್ಲಿ ಮಾರಾಟ ನಡೆಯುತ್ತದೆಯೇ ಹೊರತು ಕುಳಿತು ಕುಡಿಯುವ ಅವಕಾಶ ಇಲ್ಲದೇ ಇರುವುದರಿಂದ ಕುಡುಕರ ಹಾವಳಿ ಅಸಾಧ್ಯ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಈ ಸಂಬಂಧ ದೂರುದಾತರಲ್ಲಿ ವಿಚಾರಣೆ ನಡೆಸಿದಾಗ, ಈ ಪ್ರದೇಶದಲ್ಲಿ ಬೇರೆ ಮದ್ಯದಂಗಡಿಗಳಿಲ್ಲ ಎಂದು ಅವರು ತಿಳಿಸಿದ್ದು, ಸ್ಪಷ್ಟ ಉತ್ತರ ಲಭಿಸಿರಲಿಲ್ಲ. ಈ ಕುರಿತು ಲಿಖೀತ ಸ್ಪಷ್ಟೀಕರಣ ನೀಡುವಂತೆ ಆಯೋಗ ತಿಳಿಸಿದಾಗ ದೂರುದಾತರೂ ಅದಕ್ಕೂ ಸಿದ್ಧರಾಗಿರಲಿಲ್ಲ. ಕೊನೆಗೆ ಈ ಸಂಬಂಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಆಯೋಗ ಪೊಲೀಸರಿಗೆ ಆದೇಶಿಸಿದೆ.

ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಸಾಲೆಯ ಮೈದಾನದ ಮೇಲ್ಭಾಗದಲ್ಲಿ ಹೈಟೆನ್ಶನ್‌ ತಂತಿ ಸ್ಥಾಪನೆ ಸಂಬಂಧ ದೂರು ಸಲ್ಲಿಕೆಯಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಬೇರೆಡೆ ಸ್ಥಾಪಿಸುವಂತೆ ದೂರಿನಲ್ಲಿ ಆಗ್ರಹಿಸಿದೆ. ಈ ಕುರಿತು ವರ್ಕಾಡಿ ಗ್ರಾಮ ಪಂಚಾಯತ್‌ ಮತ್ತು ಎ.ಎಸ್‌.ಇ.ಬಿ. ವರದಿ ಸಲ್ಲಿಸುವಂತೆ ಆಯೋಗ ಆದೇಶಿಸಿದೆ. ಜನ ಶತಾಬ್ಧಿಯಂಥಾ ರೈಲುಗಳಲ್ಲಿ ಪ್ರಯಾಣಿಕರ ಬ್ಯಾಗ್‌ ಇತ್ಯಾದಿ ಕಳವು ಹೆಚ್ಚುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡುವಂತೆ ರೈಲ್ವೇ ಪೊಲೀಸರಲ್ಲಿ ಆಯೋಗ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next