Advertisement

ಫ್ಲ್ಯಾಟ್ ನಿಂದ ಚಿನ್ನಾಭರಣ ಕಳವು; ಆರೋಪಿಗಳ ಸೆರೆ

12:01 AM Aug 20, 2022 | Team Udayavani |

ಕಾಪು : ಮೂಳೂರು ಎಸ್‌.ಎಸ್‌. ರೋಡ್‌ ಶ್ರೀ ಸಾಯಿ ವಾರ್ಚರ್‌ ಫ್ಲ್ಯಾಟ್ ನಿಂದ ಚಿನ್ನಾಭರಣ ಸಹಿತ ನಗ-ನಗದು ಕಳವುಗೈದ ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

Advertisement

ಮಂಗಳೂರು ಬಜಪೆ ಮೂಲದ ಪ್ರಸ್ತುತ ಮೂಳೂರು ಶ್ರೀ ಸಾಯಿ ವಾರ್ಚರ್‌ ಫ್ಲ್ಯಾಟ್ ನಲ್ಲಿ ವಾಸವಿರುವ ವಾಜೀದ್‌ ಜೆ. (25) ಮತ್ತು ಉಡುಪಿ ಕಡಿಯಾಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಶಹನಾಜ್‌ (32) ಬಂಧಿತರು.

ಮೂಳೂರು ಶ್ರೀ ಸಾಯಿ ವಾರ್ಚರ್‌ ಪ್ಲಾಟ್‌ನಲ್ಲಿ ವಾಸವಿದ್ದ ಆಜ್ಯೂ ಸರ್ಫ್‌ರಾಜ್‌ ಆ. 8ರಂದು ಫ್ಲ್ಯಾಟ್‌ಗೆ ಬೀಗ ಹಾಕಿ ಉಡುಪಿಯಲ್ಲಿರುವ ತಂಗಿಯ ಮನೆಗೆ ತೆರಳಿದ್ದರು. ಆ. 10ರಂದು ಬೆಳಗ್ಗೆ ಫ್ಲ್ಯಾಟ್ ಗೆ ಬಂದು ಮನೆಯ ಕಪಾಟನ್ನು ತೆರೆದು ನೋಡಿದಾಗ ಡ್ರಾಯರ್‌ನಲ್ಲಿಟ್ಟಿದ್ದ 1.98 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ನಡೆಸಿದ ಕಾಪು ಪೊಲೀಸರು ಸಿಸಿ ಕೆಮರಾ ದೃಶ್ಯ ಸಹಿತ ವಿವಿಧ ದಾಖಲೆ ಪರಿಶೀಲಿಸಿ, ಸಂಶಯದ ಮೇರೆಗೆ ಅದೇ ಫ್ಲ್ಯಾಟ್ ನಲ್ಲಿ ವಾಸವಿದ್ದ ವಾಜೀದ್‌ನನ್ನು ಪೊಲಿಪು ಜಂಕ್ಷನ್‌ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಆರೋಪಿಯು ಫ್ಲ್ಯಾಟ್ ನಿಂದ ವಿವಿಧ ಸೊತ್ತುಗಳನ್ನು ಕಳವುಗೈದಿರುವ ವಿಚಾರವನ್ನು ಬಾಯ್ಬಿಟ್ಟಿದ್ದ. ಮಾತ್ರವಲ್ಲದೇ ಈ ಕೃತ್ಯದಲ್ಲಿ ತನ್ನ ಸ್ನೇಹಿತೆ ಶಹನಾಜ್‌ ಕೂಡಾ ಕೈ ಜೋಡಿಸಿರುವುದಾಗಿ ತಿಳಿಸಿದ್ದ.

ಒಂದನೇ ಮಾಳಿಗೆಯಲ್ಲಿ ವಾಸ
ಪ್ರಮುಖ ಆರೋಪಿ ವಾಜೀದ್‌ ಫ್ಲ್ಯಾಟ್ ನ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದು, ಕಳವುಗೈದ ಮನೆ ಮೂರನೇ ಮಹಡಿಯಲ್ಲಿದೆ. ಮನೆಯ ಒಡತಿ ತನ್ನ ಮನೆಯ ಕೀಲಿಯನ್ನು ಕಾರಿನ ಕೀ ಗೊಂಚಲಿನೊಂದಿಗೆ ಬಿಟ್ಟು ಹೋಗಿದ್ದು, ಆ ಗೊಂಚಲಿನಿಂದ ಮನೆಯ ಕೀಯನ್ನು ಎಗರಿಸಿದ್ದು, ಅದೇ ಕೀಯನ್ನು ಬಳಸಿ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಚಿನ್ನಾಭರಣ ಕಳವುಗೈದಿರುವುದಾಗಿ ತಿಳಿದು ಬಂದಿದೆ.

Advertisement

ಪತ್ತೆಗೆ ನೆರವಾದ ಶ್ವಾನ
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯ ನಡೆಸಿದ ಪೊಲೀಸ್‌ ನಾಯಿ ಮೊದಲನೇ ಮಹಡಿಯಲ್ಲಿ ಬಂದು ನಿಂತಿತ್ತು. ಅದರಂತೆ ಸಿಸಿ ಕೆಮರಾ ಫೂಟೇಜ್‌ ಅನ್ನು ಪರಿಶೀಲಿಸಿದಾಗ ವಾಜೀದ್‌ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಧೃಡಪಟ್ಟಿತ್ತು.

3.38 ಲಕ್ಷ ರೂ. ಸೊತ್ತು ವಶಕ್ಕೆ
ಬಂಧಿತ ಆರೋಪಿ ವಾಜೀದ್‌ ಮನೆ ಕಳವು ಮತ್ತು ವಾಹನ ಕಳವು ಆರೋಪದಲ್ಲಿ ಪೊಲೀಸರಿಗೆ ಬೇಕಿದ್ದ ಆರೋಪಿಯಾಗಿದ್ದು, ಆತನಿಂದ ಸುಮಾರು 1.76 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದಿದ್ದ ದ್ವಿಚಕ್ರ ವಾಹನಗಳು, ಎರಡು ಮೊಬೈಲ್‌ ಫೋನ್‌, ಡ್ರಿಲ್ಲಿಂಗ್‌ ಮಿಷಿನ್‌, ಐರನ್‌ ಬಾಕ್ಸ್‌, ಸ್ಮಾರ್ಟ್‌ ವಾಚ್‌ ಹಾಗೂ ಕಳವಿಗೆ ಬಳಸಿರುವ ಸೊತ್ತುಗಳ ಸಹಿತ ಒಟ್ಟು 3.38 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಹಾಕೆ ಅಕ್ಷಯ್‌ ಮಚಿಂದ್ರಾ, ಹೆಚ್ಚುವರಿ ಎಸ್ಪಿ ಎಸ್‌.ಟಿ. ಸಿದ್ಧಲಿಂಗಯ್ಯ ಅವರ ನಿರ್ದೇಶನದಂತೆ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್‌ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ನೇತೃತ್ವದಲ್ಲಿ ಕಾಪು ಎಸ್ಸೆ$ç ಶ್ರೀಶೈಲ ಮುರಗೋಡ ಹಾಗೂ ಪ್ರೊಬೆಷನರಿ ಎಸ್ಸೆ$ç ಮಹಾಂತೇಶ ಜಾಬಗೌಡ ಹಾಗೂ ಕಾಪು ಪೊಲೀಸ್‌ ಠಾಣೆ ಮತ್ತು ವೃತ್ತ ನಿರೀಕ್ಷಕರ ಅಪರಾಧ ಪತ್ತೆ ದಳದ ಸಿಬಂದಿ ಪ್ರವೀಣ್‌ ಕುಮಾರ್‌, ರಾಜೇಶ್‌, ನಾರಾಯಣ, ಹೇಮರಾಜ್‌, ಸಂದೇಶ್‌, ಸ್ವಾಮಿ ಡಿ.ಎಸ್‌., ಗಣೇಶ್‌ ಶೆಟ್ಟಿ, ಜಗದೀಶ್‌, ಎಸ್ಪಿ ಕಚೇರಿಯ ದಿನೇಶ್‌ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಹತ್ತಕ್ಕೂ ಅಧಿಕ ಪ್ರಕರಣಗಳು
ವಾಜೀದ್‌ ವಿರುದ್ಧ ಹಾಸನ, ಆಲೂರು, ಅರಸೀಕೆರೆ, ಅರೇಹಳ್ಳಿ, ಗಂಡಸಿ, ಪಣಂಬೂರು, ಸುರತ್ಕಲ್‌, ಮೂಲ್ಕಿ, ಕಾರವಾರದ ಮಂಕಿ ಸಹಿತ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು, ದನ ಕಳವು ಪ್ರಕರಣಗಳು ಮತ್ತು ವಾಹನ ಕಳವು, ಮನೆಗಳಲ್ಲಿ ಕಳವು, ಚಿನ್ನಾಭರಣ ಕಳವು ಪ್ರಕರಣಗಳೂ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂಬರ್‌ ಪ್ಲೇಟ್‌ ಬದಲಿಸಿದ್ದ
ಆರೋಪಿ ಮುಂಜಾನೆ ವೇಳೆ ಚಿನ್ನಾಭರಣ ಕಳವುಗೈದಿದ್ದು, ಕಳವುಗೈದ ಚಿನ್ನಾಭರಣಗಳನ್ನು ತನ್ನ ಸ್ನೇಹಿತೆ ಉಡುಪಿ ಕಡಿಯಾಳಿಯಲ್ಲಿರುವ ಶೆಹನಾಜ್‌ಳ ಮನೆಗೆ ಕೊಂಡೊಯ್ದಿದ್ದ. ಆಕೆ ಅದರಲ್ಲಿ ಕೆಲವು ಸೊತ್ತುಗಳನ್ನು ಬ್ಯಾಂಕ್‌ನಲ್ಲಿ ಅಡವಿರಿಸಿ ಅದರಲ್ಲಿ ಬಂದ ಹಣವನ್ನು ಆರೋಪಿಗೆ ನೀಡಿದ್ದಳು. ಆರೋಪಿ ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದಿದ್ದ ದ್ವಿಚಕ್ರ ವಾಹನದ ನಂಬರ್‌ ಪ್ಲೇಟ್‌ ಬದಲಾಯಿಸಿಕೊಂಡು ತಿರುಗಾಡುತ್ತಿದ್ದು, ಅದೇ ಬೈಕ್‌ ಮೂಲಕ ಕದ್ದ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next