Advertisement

ಕೌಟುಂಬಿಕ ವಿಚಾರ : ಮಂಡ್ಯ ಮೂಲದ ಒಂದೇ ಕುಟುಂಬದ ಐವರು ಸಾವು

11:26 PM Sep 17, 2021 | Team Udayavani |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಒಂದೇ ಕುಟುಂಬ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಒಂಭತ್ತು ತಿಂಗಳ ಹಸುಗೂಸು ಆಹಾರವಿಲ್ಲದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಸಂಜೆ ಬ್ಯಾಡರಹಳ್ಳಿಯ ತಿಗರಪಾಳ್ಯದಲ್ಲಿ ನಡೆದಿದೆ.

Advertisement

ಹಲ್ಲೆಗೆರೆ ಶಂಕರ್‌ ಅವರ ಪತ್ನಿ ಭಾರತಿ (51), ಅವರ ಮೊದಲ ಪುತ್ರಿ ಸಿಂಚನಾ (34),ಎರಡನೇ ಪುತ್ರಿ ಸಿಂಧೂರಾಣಿ (31) ಮತ್ತು ಪುತ್ರ ಮಧು ಸಾಗರ್‌ (25) ಮತ್ತು ಸಿಂಧೂರಾಣಿಯ 9 ತಿಂಗಳ ಗಂಡು ಮಗು ಆಹಾರವಿಲ್ಲದೆ ಮೃತಪಟ್ಟಿದೆ. ಐದು ಮೃತದೇಹಗಳ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಮಧ್ಯೆ ಎರಡೂವರೆ ವರ್ಷದ ಪ್ರೇಕ್ಷಾ ಎಂಬ ಹೆಣ್ಣು ಮಗು ಪವಾಡದಂತೆ ಬದುಕುಳಿದಿದೆ.

ಈ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಸೆ.12ರಂದೇ ದುರ್ಘ‌ಟನೆ ನಡೆದಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಶಂಕರ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಿಡಿಯೋ ಚಿತ್ರೀಕರಣದ ಮೂಲದ ಬಾಗಿಲು ಮುರಿದು ನೋಡಿದಾಗ ಕೊಣೆಯೊಂದರಲ್ಲಿ ತಾಯಿ, ಮಕ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 9 ತಿಂಗಳ ಮಗು ಬೆಡ್‌ ಮೇಲೆ ಮೃತಪಟ್ಟಿತ್ತು. ಇನ್ನು ಬದುಕುಳಿದ ಪ್ರೇಕ್ಷಾ ಅಸ್ವಸ್ಥಗೊಂಡು ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಉಪ್ಪುಂದ ಮೀನುಗಾರಿಕೆಗೆ ತೆರಳಿದ ದೋಣಿ ದುರಂತ : 6 ಮಂದಿ ಪಾರು, ಇಬ್ಬರು ನಾಪತ್ತೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬ್ಯಾಡರಹಳ್ಳಿ ಪೊಲೀಸರು ಹಾಗೂ ಡಿಸಿಪಿ ಸಂಜೀವ್‌ ಎಂ. ಪಾಟೀಲ್‌ ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಶಂಕರ್‌ ಸೆ.12 ಕುಟುಂಬಸ್ಥರ ಜತೆ ಗಲಾಟೆ ಮಾಡಿಕೊಂಡು ಮನೆಯಿಂದ ಹೊರ ಹೋಗಿದ್ದರು. ಬಳಿಕ ಐದು ದಿನಗಳಿಂದಲೂ ಮನೆಗೆ ಬಂದಿರಲಿಲ್ಲ. ಗುರುವಾರ ಸಂಜೆ ಮನೆಗೆ ಬಂದಾಗ ಮನೆ ಬಾಗಿಲು ಹಾಕಿದ್ದರಿಂದ ಮತ್ತೆ ಹೊರಗಡೆ ಹೋಗಿದ್ದಾರೆ. ಆದರೆ, ಐದು ದಿನಗಳಿಂದ ಯಾರು ಮನೆಯಿಂದ ಹೊರಬಂದಿರುವುದನ್ನು ಸ್ಥಳೀಯರು ನೋಡಿಲ್ಲ. ಅಲ್ಲದೆ, ಶುಕ್ರವಾರ ಮಧ್ಯಾಹ್ನ ಶಂಕರ್‌ ಮನೆಯಿಂದ ಕೊಳತೆ ವಾಸನೆ ಬರುತ್ತಿತ್ತು. ಅದರಿಂದ ಅನುಮಾನಗೊಂಡು ಸ್ಥಳೀಯರೇ ಶಂಕರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಏಳು ಗಂಟೆ ಸುಮಾರಿಗೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಕೌಟುಂಬಿಕ ವಿಚಾರವೇ ಘಟನೆಗೆ ಕಾರಣ
ಶಂಕರ್‌ “ಶಾಸಕ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದು, ಬ್ಯಾಡರಹಳ್ಳಿಯ ತಿಗಳರ ಪಾಳ್ಯದ ಚೇತನ್‌ ವೃತ್ತದ 4ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಕುಟುಂಬ ಸದಸ್ಯರ ಜತೆ ವಾಸವಾಗಿದ್ದರು. ಕಳೆದ ಹತ್ತು ವರ್ಷಗಳಿಂದ ಶಂಕರ್‌ ಮತ್ತು ಪತ್ನಿ, ಮಕ್ಕಳ ನಡುವೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಶಂಕರ್‌ ಎರಡನೇ ಪುತ್ರಿ ಸಿಂಧುರಾಣಿ ಎಂಬವರನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ, ಪತಿಯ ಜತೆಗೆ ಜಗಳವಾಡಿಕೊಂಡ ಪತ್ನಿ ಸಿಂಧುರಾಣಿ ತವರು ಮನೆಗೆ ವಾಪಸ್‌ ಬಂದಿದ್ದರು. ಅಲ್ಲದೆ, ಹತ್ತು ದಿನಗಳ ಹಿಂದೆ 9 ತಿಂಗಳ ಗಂಡು ಮಗುವಿನ ನಾಮಕಾರಣ ವಿಚಾರದಲ್ಲಿ ಸಿಂಧುರಾಣಿ ಪತಿಯ ಮನೆ ಮತ್ತು ಶಂಕರ್‌ ಕುಟುಂಬ ನಡುವೆ ಜಗಳ ನಡೆದಿತ್ತು. ಮಗುವಿಗೆ ಕಿವಿಚುಚ್ಚಿಸುವಂತೆ ಶಂಕರ್‌ ಕುಟುಂಬ ಹೇಳಿತ್ತು. ಆದರೆ, ಸಿಂಧೂರಾಣಿ ಪತಿ ಕುಟುಂಬ ಅದಕ್ಕೆ ನಿರಾಕರಿಸಿತ್ತು. ಅದೇ ವಿಚಾರಕ್ಕೆ ಆಕೆ ಗಲಾಟೆ ಮಾಡಿಕೊಂಡು ತವರು ಮನೆಗೆ ಬಂದಿದ್ದು, ಆತ್ಮಹತ್ಯೆಗೂ ಯತ್ನಿಸಿದ್ದರು. ಇನ್ನು ಶಂಕರ್‌ ಮತ್ತು ಪುತ್ರ ಮಧುಸೂದನ್‌ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿದ್ದು, ಹತ್ತು ಲಕ್ಷ ರೂ. ಹಣ ಕೊಡುವಂತೆ ಪುತ್ರ ಮತ್ತು ಪತ್ನಿ ಶಂಕರ್‌ಗೆ ಒತ್ತಾಯಿಸಿದ್ದರು. ಆದರೆ, ಶಂಕರ್‌ ಕೊಡಲು ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಈ ಎಲ್ಲ ವಿಚಾರಗಳಿಗೆ ಭಾನುವಾರ ಶಂಕರ್‌ ಮತ್ತು ಪತ್ನಿ, ಮಕ್ಕಳ ನಡುವೆ ಗಲಾಟೆ ಆಗಿತ್ತು. ಅದರಿಂದ ಬೇಸರಗೊಂಡು ಶಂಕರ್‌ ಕೆಲಸದ ಹೆಸರಿನಲ್ಲಿ ಮೈಸೂರಿಗೆ ಹೋಗಿದ್ದರು ಎಂದು ಹೇಳಲಾಗಿದೆ. ಅವರು ವಾಪಸ್‌ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಐದು ದಿನ ಶವಗಳ ಮುಂದೆ ಕಣ್ಣಿರಿಟ್ಟು ಬದುಕಿದ ಪ್ರೇಕ್ಷಾ
ತಾಯಿ, ಚಿಕ್ಕಮ್ಮ, ಅಜ್ಜಿ ಮತ್ತು ಮಾವ ನೇಣಿಗೆ ಶರಣಾದ ಬಳಿಕ ದಿಕ್ಕು ತೋಚದೆ ಎರಡೂವರೆ ವರ್ಷದ ಸಿಂಚನಾ ಪುತ್ರಿ ಪ್ರೇಕ್ಷಾ, ಶವಗಳ ಮುಂದೆಯೇ ಕಣ್ಣಿರು ಸುರಿಸಿ ಅಸ್ವಸ್ಥಗೊಂಡು ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದಳು. ಪೊಲೀಸರು ಬಾಗಿಲು ಒಡೆದು ಒಳಹೋಗಿ ನೋಡಿದಾಗ ಪ್ರೇಕ್ಷಾ ಬದುಕಿರುವುದನ್ನು ಖಚಿತ ಪಡಿಸಿಕೊಂಡು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐದು ದಿನಗಳಿಂದ ಆಹಾರ ಸೇವಿಸದರಿಂದ ಆಕೆ ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.

ಆಹಾರವಿಲ್ಲದೆ ಮೃತ ಪಟ್ಟ 9ತಿಂಗಳ ಮಗು
ಸಿಂಧೂರಾಣಿಯ 9 ತಿಂಗಳ ಮಗು ಹಾಲು, ಆಹಾರವಿಲ್ಲದೆ ಮೃತಪಟ್ಟಿರುವುದು ಪತ್ತೆಯಾಗಿದೆ. ಸೆ.12ರಂದು ಮಗುವಿಗೆ ಹಾಲು ಕುಡಿಸಿ ಬೆಡ್‌ ಮೇಲೆ ಮಲಗಿಸಿದ್ದಾರೆ. ಅನಂತರ ಮಗುವಿಗೆ ಯಾವುದೇ ಆಹಾರ ಸೇವಿಸಿಲ್ಲ. ಹೀಗಾಗಿ ಮಗು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next