Advertisement

ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ ನಗದೀಕರಣ ವಂಚನೆ

12:51 AM Sep 15, 2022 | Team Udayavani |

ಮಂಗಳೂರು: ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ ನಗದೀಕರಣ ಮಾಡಿಕೊಡುವುದಾಗಿ ಹೇಳಿ ಒಟಿಪಿ ಪಡೆದು ವಂಚಿಸುವ ಖದೀಮರ ಬಗ್ಗೆ ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

Advertisement

ಮಂಗಳೂರಿನ ವೈದ್ಯರೊಬ್ಬರು ಆಸ್ಪತ್ರೆಯಲ್ಲಿದ್ದಾಗ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ನಿಮ್ಮ ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ ಗಳನ್ನು ಬಳಸಿಕೊಳ್ಳಲು ಇಂದು ಕೊನೆಯ ದಿನಾಂಕವಾಗಿದೆ. ಕೂಡಲೇ ಅದನ್ನು ನಗದೀಕರಣ ಮಾಡಿ ಇಲ್ಲವೆ ಗಿಫ್ಟ್ ಪಡೆದುಕೊಳ್ಳಿ ಎಂದು ಹೇಳಿದ್ದಾನೆ.

ಇದನ್ನು ನಂಬಿದ ವೈದ್ಯರು ಪಾಯಿಂಟ್ಸ್‌ಗಳನ್ನು ನಗದೀಕರಣ ಮಾಡಿಕೊಡುವಂತೆ ಹೇಳಿದ್ದಾರೆ. ಆಗ ಅಪರಿಚಿತ ವ್ಯಕ್ತಿ ತಾನು ಹಾಗೆಯೇ ಮಾಡುವುದಾಗಿ ಹೇಳಿದ್ದಾನೆ. ಬಳಿಕ ವೈದ್ಯರು ಅವರ ಮೊಬೈಲ್‌ಗೆ ಬಂದ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದ್ದಾರೆ. ಆ ಬಳಿಕ ವೈದ್ಯರ ಖಾತೆಗೆ ಯಾವುದೇ ಹಣ ಬಂದಿರಲಿಲ್ಲ. ಬದಲಾಗಿ ಹಂತ ಹಂತವಾಗಿ ವೈದ್ಯರ ಖಾತೆಯಿಂದಲೇ ಒಟ್ಟು 60,000 ರೂ. ಯಾವುದೋ ಖಾತೆಗೆ ವರ್ಗಾವಣೆಯಾಗಿದೆ.

ಮತ್ತೊಂದು ವಂಚನೆಗೆ ಯತ್ನ
ವೈದ್ಯರು ಹಣ ಕಳೆದುಕೊಂಡ ಮರುದಿನ ಮತ್ತೂಂದು ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ, ನೀವು ನಿನ್ನೆ ಕಳೆದುಕೊಂಡ ಹಣವನ್ನು ವಾಪಸ್‌ ತೆಗೆದುಕೊಡುತ್ತೇವೆ. 10,000 ರೂ. ಮುಂಗಡವಾಗಿ ನೀಡಿ ಎಂದಿದ್ದಾನೆ. ವೈದ್ಯರು ಅದಕ್ಕೆ ನಿರಾಕರಿಸಿದ್ದಾರೆ.

ಒಟಿಪಿ ಕೊಡಬೇಡಿ
ಕ್ರೆಡಿಟ್‌ ಕಾರ್ಡ್‌ನ ಮಾಹಿತಿ ಯನ್ನು ಯಾರೊಂದಿಗೂ ಹಂಚಿಕೊಳ್ಳ ಬಾರದು. ಯಾವುದೇ ಕಾರಣಕ್ಕೂ ಒಟಿಪಿಯನ್ನು ಯಾರಿಗೂ ನೀಡ ಬಾರದು ಎಂದು ಸೈಬರ್‌ ಭದ್ರತಾ ತಜ್ಞರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Advertisement

ಸೈಬರ್‌ ವಲ್ಚರ್‌ಗಳ ಬಗ್ಗೆ ಎಚ್ಚರದಿಂದಿರಿ
ವಂಚನೆಗೊಳಗಾದವರಿಗೆ ಕರೆ ಮಾಡುವ ವ್ಯಕ್ತಿಗಳು ಹಣ ವಾಪಸ್‌ ಕೊಡಿಸುವುದಾಗಿ ಹೇಳಿ ವಂಚಿಸುವ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಇಂತಹ ವಂಚಕರನ್ನು ಸೈಬರ್‌ ವಲ್ಚರ್ಸ್‌ ಎಂದು ಕರೆಯಲಾಗುತ್ತದೆ. ಈ ಬಗ್ಗೆಯೂ ಎಚ್ಚರ ವಹಿಸಬೇಕು. ಸೈಬರ್‌ ವಂಚಕರು ತಾವು ವಂಚಿಸಲು ಗುರಿಯಾಗಿರಿಸಿದ ವ್ಯಕ್ತಿ ಅಗತ್ಯ ತುರ್ತು ಕೆಲಸದಲ್ಲಿದ್ದಾಗಲೇ ಯಾಮಾರಿಸಲು ಯತ್ನಿಸುತ್ತಾರೆ ಎಂದು ಮಂಗಳೂರಿನ ಸೈಬರ್‌ ತಜ್ಞ ಡಾ| ಅನಂತ ಪ್ರಭು ಗುರುಪುರ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next