Advertisement

ಕಾರ್ಕಳ: ಪತಿಯಿಂದ ವರದಕ್ಷಿಣೆ ಕಿರುಕುಳ; ಆತ್ಮಹತ್ಯೆ ಯತ್ನ!

12:40 AM Jul 23, 2022 | Team Udayavani |

ಕಾರ್ಕಳ: ಫೇಸ್‌ಬುಕ್‌ ಪರಿಚಯದ ಮೂಲಕ ಪ್ರೀತಿಸಿ ವಿವಾಹವಾಗಿದ್ದ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಕಾರ್ಕಳ ಠಾಣೆಗೆ ದೂರು ನೀಡಿದ್ದಾರೆ.

Advertisement

ಬೈಲೂರು ನಿವಾಸಿ ಸೌಮ್ಯಾ ನಾಲ್ಕೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಕಾಸರಗೋಡು ನಿವಾಸಿ ಸುನಿಲ್‌ ಟಿ. ಅವರೊಂದಿಗೆ ಪರಿಚಯವಾಗಿ ಅದು ಪ್ರೀತಿಗೆ ತಿರುಗಿ ಕಾರ್ಕಳ ದೇವಸ್ಥಾನವೊಂದರಲ್ಲಿ ಅವರಿಬ್ಬರು ಮದುವೆಯಾಗಿದ್ದರು. ಆರಂಭದ ಒಂದು ವರ್ಷದವರೆಗೆ ಒಳ್ಳೆಯ ರೀತಿಯಲ್ಲಿ ದಾಂಪತ್ಯ ನಡೆದಿದೆ.

ಅನಂತರದ ದಿನಗಳಲ್ಲಿ ಸುನಿಲ್‌ ಸೌಮ್ಯಾ ಅವರನ್ನು ಹಣಕ್ಕಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, 5 ಲಕ್ಷ ರೂ. ವರದಕ್ಷಿಣೆ ಹಣ ಕೊಡಬೇಕೆಂದು ಒತ್ತಾಯಿಸಿದ್ದ. ಮಹಿಳೆ ಬಂಗಾರ ಅಡವಿಟ್ಟು 80 ಸಾವಿರ ರೂ. ಹಣವನ್ನು ನೀಡಿದ್ದರು.

ಮದುವೆಯ ಬಳಿಕ ಸೌಮ್ಯಾ ಅವರನ್ನು ತಾಯಿ ಮನೆಯಲ್ಲಿಯೇ ಬಿಟ್ಟಿದ್ದ ಪತಿ ಊರಿಗೆ ಹೋದಾಗಲೆಲ್ಲ ಫೋನ್‌ ಮಾಡಿದರೂ ಫೋನ್‌ ಮಾಡದಂತೆ ಬೈಯುತ್ತಿದ್ದ. ಇದರಿಂದ ಬೇಸತ್ತಿದ್ದ ಸೌಮ್ಯಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯಾ ಅವರ ಸಹೋದರರು ಸುನಿಲ್‌ಗೆ ಕರೆ ಮಾಡಿ ತಿಳಿಸಿದಾಗ ಅವಳು ಸಾಯಲಿ ಬರುವುದಿಲ್ಲ ಎಂದು ಹೇಳಿದ್ದ.

ಈ ವಿಚಾರವಾಗಿ ಮಹಿಳೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ದೂರು ಅರ್ಜಿಯ ವಿಚಾರಣೆ ಸಮಯ 15 ದಿನಗಳ ಕಾಲಾವಕಾಶ ಕೊಡಿ ಒಳ್ಳೆಯ ರೀತಿಯಿಂದ ನೋಡಿಕೊಳ್ಳುತ್ತೇನೆಂದು ಈ ಮೊದಲು ಹೇಳಿದ್ದ ಸುನಿಲ್‌ಗೆ ಫೋನ್‌ ಮಾಡಿದಾಗ ಇನ್ನೂ 5 ಲಕ್ಷ ರೂ. ವರದಕ್ಷಿಣೆ ಕೊಡು ಎಂದು ಜೀವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next