Advertisement

ಕೇವಲ 3000 ರೂ.ಕ್ಕಾಗಿ ಸ್ನೇಹಿತನ ಬರ್ಬರ ಕೊಲೆ

04:09 PM Sep 06, 2020 | Suhan S |

ಕಲಬುರಗಿ: ಕೇವಲ ಮೂರು ಸಾವಿರ ರೂಪಾಯಿಗಾಗಿ ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದ ಘಟನೆ ಶುಕ್ರವಾರ ತಡರಾತ್ರಿ ನಗರದ ಸೈಯದ್‌ ಗಲ್ಲಿಯಲ್ಲಿ ನಡೆದಿದೆ.

Advertisement

ರೋಜಾ ಬಡಾವಣೆಯ ಅಬ್ದುಲ್‌ ಇಮಶಾದ್‌ (32) ಕೊಲೆಯಾದ ದುರ್ದೈವಿ. ಅದೇ ಬಡಾವಣೆಯ ರವಿ, ಭೀಮಾ, ಅರುಣ್‌ ಮತ್ತು ಶರಣು ಎಂಬುವರೇ ಕೊಲೆಗೈದ ಆರೋಪಿಗಳು. ಇಮಶಾದ್‌ ತನ್ನ ಮನೆ ಬಳಿ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ರವಿ, ಭೀಮಾ, ಅರುಣ್‌, ಶರಣು ಈ ನಾಲ್ವರ ಜತೆಗೂ ಇಮಶಾದ್‌ ಉತ್ತಮ ಸ್ನೇಹ ಹೊಂದಿದ್ದ. ನಿತ್ಯ ಐವರು ಸೇರಿ ಹರಟೆ ಹೊಡೆಯುತ್ತಿದ್ದರು. ಇವರ ಮನೆಗೆ ಅವರು, ಅವರ ಮನೆಗೆ ಇವರು ಹೋಗಿ ಬಂದು ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಇಮಶಾದ್‌ ಸ್ನೇಹಿತರ ಬಳಿ ಮೂರು ಸಾವಿರ ರೂ. ಹಣ ಪಡೆದಿದ್ದ. ನಂತರ ಇದೇ ವಿಷಯವಾಗಿ ಜಗಳವಾಗಿ ಇಮಾಶಾದ್‌ನೊಂದಿಗೆ ವೈಷಮ್ಯ ಬೆಳೆಯಲು ಕಾರಣವಾಗಿತ್ತು. ಶುಕ್ರವಾರ ರಾತ್ರಿ ಮನೆ ಬಳಿಯಿದ್ದ ಇಮಶಾದ್‌ನನ್ನು ಮಾತನಾಡೋದಿದೆ ಎಂದು ಹೇಳಿ ಕರೆದುಕೊಂಡು ಬಂದು ರಾತ್ರಿ 12.30ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಟ್ಟೆ ಮತ್ತು ದೇಹದ ವಿವಿಧ ಭಾಗಗಳಿಗೆ ಇರಿದು ಕೊಲೆ ಮಾಡಲಾಗಿದೆ. ಘಟನೆಯ ವಿಷಯ ತಿಳಿದು ರೋಜಾ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಅಸ್ಲಂ ಬಾಷಾ ಮತ್ತು ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next