ಹೊಸದಿಲ್ಲಿ: 1983ರ ವಿಶ್ವಕಪ್ ಗೆಲುವು ಭಾರತದ ಕ್ರಿಕೆಟ್ ಚಿತ್ರಣವನ್ನೇ ಬದಲಿಸಿತು ಎಂದು ಅಂದಿನ ಹೀರೋ ಮೊಹಿಂದರ್ ಅಮರನಾಥ್ ಹೇಳಿದ್ದಾರೆ.
“ಭಾರತದ ಕ್ರಿಕೆಟ್ ಕ್ರಾಂತಿಗೆ ನಾಂದಿ ಹಾಡಿದ್ದೇ 1983ರ ವಿಶ್ವಕಪ್ ಗೆಲುವು. ಅಲ್ಲಿಯ ತನಕ ಹಾಕಿ ಹೊರತುಪಡಿಸಿ ವಿಶ್ವ ಕ್ರೀಡಾಕೂಟದಲ್ಲಿ ಭಾರತ ಯಾವುದೇ ಉನ್ನತ ಸಾಧನೆ ಮಾಡಿರಲಿಲ್ಲ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಏನಾದರೊಂದು ಸಾಧನೆ ಮಾಡಬಲ್ಲೆವೆಂಬ ವಿಶ್ವಾಸ ಮೂಡಿಸಿದ್ದೇ ಈ ವಿಶ್ವಕಪ್’ ಎಂಬುದಾಗಿ ಆ ಜಯಭೇರಿಯ 37ನೇ ವರ್ಷದ ಸಂಭ್ರಮದ ವೇಳೆ ಮೊಹಿಂದರ್ ಹೇಳಿದರು.
“ಇದಕ್ಕೂ ಮೊದಲು ನಾವು ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲವೆಂದಲ್ಲ. ಆದರೆ ಯಾವುದೇ ಸಾಧನೆ ಮಾಡಿರಲಿಲ್ಲ. ಎಲ್ಲರೂ ಹಾಕಿ ಮೇಲೆ ವಿಶೇಷ ಒಲವು ಇರಿಸಿಕೊಂಡಿದ್ದರು. ಆದರೆ ಯಾವಾಗ ನಾವು ವಿಶ್ವಕಪ್ ಗೆದ್ದೆವೋ, ಆಗ ಎಲ್ಲ ಹೆತ್ತವರು ತಮ್ಮ ಮಕ್ಕಳೂ ಕ್ರಿಕೆಟ್ ಆಡಲಿ, ದೇಶವನ್ನು ಪ್ರತಿನಿಧಿಸಲಿ ಎಂಬ ಉತ್ಸಾಹ ತೋರಲಾರಂಭಿಸಿದರು’ ಎಂಬುದಾಗಿ ಮೊಹಿಂದರ್ ಹೇಳಿದರು.
“ನಾವೆಲ್ಲ ತಂಡವಾಗಿ ಆಡಿದೆವು. ಚಾಂಪಿಯನ್ ಎನಿಸಿಕೊಳ್ಳಲು ಟೀಮ್ ವರ್ಕ್ ಅತ್ಯಗತ್ಯ. ಸಂದರ್ಭ ಹಾಗೂ ಅಗತ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದೆವು. ತಂಡದಲ್ಲಿ ಒಗ್ಗಟ್ಟಿತ್ತು’ ಎಂದು “ಜಿಮ್ಮಿ’ ಅಮರನಾಥ್ ಹೇಳಿದರು.