Advertisement

ಹಗರಣ ಮುಚ್ಚಿಹಾಕಲು ಸದನ ಸಮಿತಿ ರಚಿಸಿ ನಾಟಕ

01:59 PM Jun 10, 2017 | |

ಮೈಸೂರು: ವಿದ್ಯುತ್‌ ಖರೀದಿಯಲ್ಲಿ ನಡೆದಿರುವ 25 ರಿಂದ 30 ಸಾವಿರ ಕೋಟಿ ರೂ. ಮೊತ್ತದ ದೊಡ್ಡ ಹಗರಣವನ್ನು ಮುಚ್ಚಿಹಾಕಲು ರಾಜ್ಯಸರ್ಕಾರ ಸದನ ಸಮಿತಿ ರಚಿಸಿ ನಾಟಕವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ನಾನೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.

Advertisement

ಕಾಲಹರಣ: ಸತತ ಬರಗಾಲದಿಂದ ಬೆಳೆನಷ್ಟಕ್ಕೆ ಒಳಗಾದ ರೈತರಿಗೆ ಒಂದು ರೂಪಾಯಿ ಪರಿಹಾರ ನೀಡದಿರುವ ಸರ್ಕಾರದ ಕ್ರಮವನ್ನು ಟೀಕಿಸಿದ ಅವರು, ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಅನಗತ್ಯ ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.

ಬರ ಪರಿಹಾರ ಕುರಿತು ಚರ್ಚೆ ಕೈಗೆತ್ತಿಕೊಳ್ಳುವುದಾಗಿ ಹೇಳಿ ಪರ್ಜನ್ಯ ಹೋಮದ ಕುರಿತು ಚರ್ಚೆ ಮಾಡುವ ಮೂಲಕ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಯಿತು. ಇನ್ನು ಸದನಕ್ಕೆ ಮಂತ್ರಿಗಳು, ಆಡಳಿತ ಪಕ್ಷದ ಶಾಸಕರೇ ಬರುತ್ತಿಲ್ಲ. ಹೀಗಾಗಿ ಖಾಲಿ ಕುರ್ಚಿಗಳ ಜತೆ ಮಾತನಾಡಲು ನಾವು ಅಧಿವೇಶನಕ್ಕೆ ಹೋಗಬೇಕೇ ಎಂದು ಅವರು ಪ್ರಶ್ನಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ರಾಜ್ಯದ ರೈತರ ಜತೆ ಚೆಲ್ಲಾಟವಾಡುತ್ತಿವೆ. ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ನಾನೂ ಮನ್ನಾ ಮಾಡುತ್ತೇನೆ ಎಂದು ಸಿದ್ದರಾಮಯ್ಯ ರೈತರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ಟೀಕಿಸಿದರು.

ಸಾಲ ಮಾಡಿದ್ದೇ ಸಾಧನೆ: ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದಕ್ಕಿಂತ ಹೆಚ್ಚು ಸಾಲ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ಜರಿದ ಅವರು, ಇತ್ತೀಚೆಗೆ ಸರ್ಕಾರದ ನಾಲ್ಕು ವರ್ಷಗಳ ಸಾಧನಾ ಸಮಾವೇಶ ಮಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ್ದ ಭರವಸೆಗಳ ಪೈಕಿ 150ಕ್ಕೂ ಹೆಚ್ಚು ಭ ರವಸೆ ಈಡೇರಿಸಿದ್ದೇನೆ, ಹಿಂದಿನ ಯಾವ ಮುಖ್ಯಮಂತ್ರಿಯೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದಿದ್ದೀರಿ, ನೀವು ಎಲ್ಲ ಭರವಸೆಗಳನ್ನೂ ಈಡೇರಿಸಿದ ಮೇಲೆ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

Advertisement

ನಿಮ್ಮ ಭರವಸೆಗಳ ಈಡೇರಿಕೆ ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ. ನೀವು ನೀಡಿದ್ದ ಭರವಸೆ ಈಡೇರಿಸಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದರು. ಕೃಷಿ ಉತ್ಪನ್ನಗಳಿಗೆ ರೈತರು ನಿಗದಿ ಮಾಡಿದ ಬೆಲೆ ದೊರೆಯುವಂತೆ ಮಾಡುವೆ ಎಂಬ ನಿಮ್ಮ ಭರವಸೆ ಏನಾಯಿತು ಎಂದು ಟೀಕಿಸಿದರು.

ರಾಜ್ಯದ ಜನರ ಮೇಲೆ ಸಾಲ ಹೊರಿಸುವ ಭರವಸೆಯನ್ನೇನಾದರೂ ನೀಡಿದ್ದರೆ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಿದ್ದಾರೆ ಎಂದು ಕುಹಕವಾಡಿದರು. ಸ್ಟೀಲ್‌ ಬ್ರಿàಡ್ಜ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ವಿವಾದಕ್ಕೆ ಕಾರಣವಾಗುತ್ತಿದೆ. ಇಂತಹ ಉದ್ಧಟತನದ ನಿರ್ಧಾರ ಕೈಗೊಳ್ಳುವ ಸರ್ಕಾರಕ್ಕೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಮರುಜೀವ: ತಮ್ಮ ವೇಗಕ್ಕೆ ಕಡಿವಾಣ ಹಾಕುವ ಸಲುವಾಗಿಯೇ 11 ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ಮಾಡಿದ್ದ ಗಣಿ ಲಂಚ ಆರೋಪ ಪ್ರಕರಣಕ್ಕೆ ಸರ್ಕಾರ ಮರು ಜೀವ ನೀಡಿದೆ. ಜಂತಕಲ್‌ ಮೈನಿಂಗ್‌ ಪ್ರಕರಣದ ಎಸ್‌ಐಟಿ ತನಿಖೆಗೆ ಆದೇಶಿಸುವ ಮೂಲಕ ತಮ್ಮ ವರ್ಚಸ್ಸು ಹಾಳು ಮಾಡಲು ಸುಪ್ರೀಂಕೋರ್ಟ್‌ ವಜಾ ಮಾಡಿರುವ ಪ್ರಕರಣಕ್ಕೆ ಮರು ಜೀವ ನೀಡಲಾಗಿದೆ ಎಂದು ಹರಿಹಾಯ್ದರು.

ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧಪಕ್ಷಗಳು ತೆಗೆದುಕೊಳ್ಳುವ ತೀರ್ಮಾನ ಆಧರಿಸಿ ಜೆಡಿಎಸ್‌ ನಿರ್ಧಾರ ಕೈಗೊಳ್ಳಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಇದಕ್ಕೂ ಮುನ್ನ ಎಚ್‌.ಡಿ.ಕುಮಾರಸ್ವಾಮಿ ಹುಣ್ಣಿಮೆ ನಿಮಿತ್ತ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಜಿ.ಟಿ.ದೇವೇಗೌಡ, ಮೇಯರ್‌ ಎಂ.ಜೆ.ರವಿಕುಮಾರ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next