Advertisement

ಕರಾವಳಿಯಲ್ಲಿಯೂ ಕೋವಿಡ್‌ 3ನೇ ಅಲೆಯ ಆತಂಕ; ಜನರಲ್ಲಿ ಮತ್ತಷ್ಟು ಜಾಗ್ರತೆ ಅವಶ್ಯ

01:54 AM Jan 06, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ದಿನದ ಪ್ರಕರಣ ಏರಿಕೆ ಕಾಣುತ್ತಿದ್ದು, ಇದೀಗ ನೂರರ ಗಡಿ ತಲುಪಿದೆ. ಅದರಂತೆ ಇದೀಗ ಜಿಲ್ಲೆಯಲ್ಲಿಯೂ ಕೋವಿಡ್‌ ಮೂರನೇ ಅಲೆಯ ಆತಂಕ ಎದುರಾಗಿದೆ.

Advertisement

ದ.ಕ.ದಲ್ಲಿ ವಾರದ ಹಿಂದೆ 20ರಿಂದ 30 ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಇದೀಗ ದಿನದಿಂದ ದಿನಕ್ಕೆ ದಿಢೀರ್‌ ಏರಿಕೆ ಕಾಣುತ್ತಿದೆ. ಮತ್ತೊಂದೆಡೆ, ಒಮಿಕ್ರಾನ್‌ ಬಗ್ಗೆಯೂ ಎಚ್ಚರ ವಹಿಸಬೇಕಾಗಿದೆ. ಈ ನಡುವೆ ಸದ್ಯ ಕೊರೊನಾ ಸೋಂಕಿಗೆ ಒಳಗಾಗುವವರಲ್ಲಿ ಶೇ. 50ರಷ್ಟು ಮಂದಿ ಯುವಕರು ಎಂಬುದು ಗಮನಾರ್ಹ.

ಆರೋಗ್ಯ ಇಲಾಖೆ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಸದ್ಯ ಇರುವ 274 ಸಕ್ರಿಯ ಪ್ರಕರಣದಲ್ಲಿ 121 ಮಂದಿ ಯುವಕರು. ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳು ಆರಂಭಗೊಂಡಿವೆ. ಅದರಲ್ಲಿಯೂ ಕೇರಳದಿಂದ ಇಲ್ಲಿಗೆ ಬಂದ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಕೋವಿಡ್‌ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದ ದ.ಕ. ಕ್ಕೆ ಆಗಮಿಸಲು ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಹೈರಿಸ್ಕ್ ದೇಶಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವವರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಇಂದು ದ್ವಿಗುಣಗೊಂಡ ಕೋವಿಡ್: 4,246 ಪ್ರಕರಣಗಳು; 2 ಸಾವು

ಜಿಲ್ಲೆಗೆ ಹೋಲಿಕೆ ಮಾಡಿದರೆ ಮಂಗಳೂರು ನಗರದಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. .
ಮತ್ತೆ ತೆರೆಯಲಿದೆ ಕೇರ್‌ ಸೆಂಟರ್‌ ದ.ಕ. ಜಿಲ್ಲೆಯಲ್ಲಿ ಸದ್ಯ ದಿನದ ಪ್ರಕರಣ ಮೂರಂಕಿ ತಲುಪಿದ್ದು, ಕೋವಿಡ್‌ ಕೇರ್‌ ಸೆಂಟರ್‌ ತೆರೆಯುವ ನಿಟ್ಟಿನಲ್ಲಿ ಮಾತುಕತೆ ನಡೆಸ ಲಾಗುತ್ತಿದೆ. ಜಿಲ್ಲೆಯಲ್ಲಿ ಲಕ್ಷಣ ವಿಲ್ಲದ ಸೋಂಕಿತರು ಸದ್ಯ ಗೃಹ ನಿಗಾವಣೆಯಲ್ಲಿದ್ದು, ಅಗತ್ಯಬಿದ್ದರೆ ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಇಎಸ್‌ಐ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ತಾಲೂಕು ಮಟ್ಟದಲ್ಲಿ, ಖಾಸಗಿಯಾಗಿಯೂ ಕೇರ್‌ ಸೆಂಟರ್‌ ತೆರೆ ಯಲು ನಿರ್ಧರಿಸಲಾಗಿದೆ.

Advertisement

ಸಾರ್ವಜನಿಕರ ಸಹಕಾರ ಅಗತ್ಯ
ಕೊರೊನಾ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 18 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆದುಕೊಳ್ಳಿ.
– ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next