Advertisement

ಮುಂದಿನ ತಿಂಗಳಲ್ಲೇ ಕೋವಿಡ್ 3ನೇ ಅಲೆ : ಸೆಪ್ಟಂಬರ್‌ ನಲ್ಲಿ ಉತ್ತುಂಗಕ್ಕೆ : ವರದಿ

02:21 AM Jul 06, 2021 | Team Udayavani |

ಹೊಸದಿಲ್ಲಿ: ಲಾಕ್‌ ಡೌನ್‌ಗಳು ತೆರವಾದವು ಎಂದು ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಮುಂದಿನ ತಿಂಗಳಲ್ಲೇ ದೇಶಾದ್ಯಂತ ಕೊರೊನಾದ 3ನೇ ಅಲೆಯು ಅಪ್ಪಳಿಸುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

Advertisement

ಹೀಗೆಂದು ಎಸ್‌ಬಿಐ ರಿಸರ್ಚ್‌ ಪ್ರಕಟಿಸಿದ ವರದಿ ಹೇಳಿದೆ. “ಕೋವಿಡ್‌-19 – ದಿ ರೇಸ್‌ ಟು ಫಿನಿಶಿಂಗ್‌ ಲೈನ್‌’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯು, ದೇಶಕ್ಕೆ ಆಗಸ್ಟ್‌ ತಿಂಗಳಲ್ಲಿ 3ನೇ ಅಲೆ ಅಪ್ಪಳಿಸಲಿದ್ದು, ಸೆಪ್ಟಂಬರ್‌ ನಲ್ಲಿ ಅದು ಉತ್ತುಂಗಕ್ಕೇರಲಿದೆ ಎಂದು ಹೇಳಿದೆ. ಪ್ರಸ್ತುತ ದತ್ತಾಂಶಗಳ ಪ್ರಕಾರ, ಜುಲೈ 2ನೇ ವಾರದಲ್ಲಿ ದೇಶದಲ್ಲಿ ಸುಮಾರು 10 ಸಾವಿರದಷ್ಟು ಪ್ರಕರಣಗಳು ದಾಖಲಾಗಲಿವೆ. ಆಗಸ್ಟ್‌ ಎರಡನೇ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರುಮುಖವಾಗಿ ಸಾಗಲಿದೆ ಎಂದು ವರದಿ ಅಂದಾಜಿಸಿದೆ. ರವಿವಾರದಿಂದ ಸೋಮವಾರಕ್ಕೆ ದೇಶದಲ್ಲಿ 39,796 ಪ್ರಕರಣ ಪತ್ತೆಯಾಗಿ, 723 ಮಂದಿ ಸಾವಿಗೀಡಾಗಿದ್ದಾರೆ.

ಪನೇಸಿಯಾ ಬಯೋಗೆ ಅನುಮತಿ: ಈ ನಡುವೆ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆ ತಯಾರಿಕೆಗೆ ಪನೇಸಿಯಾ ಬಯೋಟೆಕ್‌ ಸಂಸ್ಥೆಗೆ ಭಾರತದ ಔಷಧ ಮಹಾನಿರ್ದೇಶನಾಲಯ ಪರವಾನಿಗೆ ನೀಡಿದೆ. ಹಿಮಾಚಲ ಪ್ರದೇಶದ ಘಟಕದಲ್ಲಿ ಲಸಿಕೆ ಉತ್ಪಾದನೆಯಾಗಲಿದೆ. ಇದೇ ವೇಳೆ, 12ರಿಂದ 17ರ ವಯೋಮಾನದ ಮಕ್ಕಳ ಮೇಲೆ ಸ್ಪುಟ್ನಿಕ್‌ ವಿ ಪ್ರಯೋಗವು ಸೋಮವಾರದಿಂದ ಮಾಸ್ಕೋದಲ್ಲಿ ಆರಂಭವಾಗಿದೆ.

ಎಲುಬಿನ ಕೋಶ ಸಾವು: 3 ಪ್ರಕರಣ ಪತ್ತೆ
ಮತ್ತೂಂದು ಕೊರೊನೋತ್ತರ ಸಮಸ್ಯೆಯಾದ “ಎಲುಬಿನ ಕೋಶಗಳ ಸಾವು’ ಅಥವಾ ಎವಾಸ್ಕಾಲರ್‌ ನೆಕ್ರಾಸಿಸ್‌ನ ಮೂರು ಪ್ರಕರಣಗಳು ಮುಂಬೈಯಲ್ಲಿ ಪತ್ತೆಯಾಗಿವೆ. ಮುಂಬರುವ ತಿಂಗಳುಗಳಲ್ಲಿ ಇಂಥ ಇನ್ನಷ್ಟು ಕೇಸುಗಳು ಪತ್ತೆಯಾಗುವ ಭೀತಿಯಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದುಜಾ ಆಸ್ಪತ್ರೆಯಲ್ಲಿ 40 ವಯಸ್ಸಿನೊಳಗಿನ ಮೂವರು ರೋಗಿಗಳಲ್ಲಿ ಕೊರೊನಾದಿಂದ ಗುಣಮುಖರಾದ 2 ತಿಂಗಳ ಬಳಿಕ ಎಲುಬಿನ ಕೋಶಗಳು ಸಾವಿ ಗೀ ಡಾ ಗುವಂಥ ಸಮಸ್ಯೆ ಕಂಡು ಬಂದಿದೆ. ಸ್ಟಿರಾ ಯ್ಡ ಗಳ ಅತಿ ಯಾದ ಬಳ ಕೆಯೇ ಈ ಸಮ ಸ್ಯೆಗೂ ಕಾರಣ ಎಂದು ವೈದ್ಯರು ಹೇಳಿ ದ್ದಾ ರೆ.

ಸಿಂಹಕ್ಕೂ ನೆಗೆಟಿವ್‌ ಕಡ್ಡಾಯ!
ಕೇವಲ ಮನುಷ್ಯರಿಗೆ ಮಾತ್ರವಲ್ಲ, ಭಾರತ ಪ್ರವೇಶಿಸುವ ಪ್ರಾಣಿಗಳೂ ಇನ್ನು ಕೊರೊನಾ ನೆಗೆಟಿವ್‌ ವರದಿ ತರುವುದು ಕಡ್ಡಾಯ. ಹುಲಿ, ಸಿಂಹ, ಚಿರತೆ ಸೇರಿದಂತೆ ಯಾವುದೇ ಪ್ರಾಣಿಯನ್ನು ದೇಶಕ್ಕೆ ಆಮದು ಮಾಡಿಕೊಳ್ಳುವುದಿದ್ದರೂ 3 ದಿನಗಳ ಮುಂಚಿತವಾಗಿ ಪರೀಕ್ಷಿಸಿ ಪಡೆಯಲಾದ ಕೊರೊನಾ ನೆಗೆಟಿವ್‌ ಪ್ರಮಾಣಪತ್ರವನ್ನು ಹೊಂದಿರಬೇಕಾದ್ದು ಕಡ್ಡಾಯ ಎಂದು ಕಸ್ಟಮ್ಸ್‌ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಇಲಾಖೆ ಸೂಚಿಸಿದೆ. ಕೇವಲ ವನ್ಯ ಪ್ರಾಣಿಗಳು ಮಾತ್ರವಲ್ಲದೇ, ವಿದೇಶದಲ್ಲಿರುವ ಭಾರತೀಯರು ದೇಶಕ್ಕೆ ಬರುವಾಗ ತಮ್ಮ ಸಾಕು ಪ್ರಾಣಿಗಳನ್ನು ತರುವುದಿದ್ದರೆ ಅವುಗಳಿಗೂ ಈ ನಿಯಮ ಅನ್ವಯ ಎಂದೂ ಇಲಾಖೆ ಹೇಳಿದೆ.

Advertisement

ಲಸಿಕೆ ಪಡೆದ ಬಳಿಕ ದೃಷ್ಟಿ ಬಂತು!
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ, ಮಹಾರಾಷ್ಟ್ರದ ಮಹಿಳೆಯೊಬ್ಬರಿಗೆ ಲಸಿಕೆಯೇ “ವರ’ ವಾಗಿ ಪರಿಣಮಿಸಿದೆ. ವಾಶಿಂ ಜಿಲ್ಲೆಯ 70 ವರ್ಷದ ಮಹಿಳೆಯೊಬ್ಬರಿಗೆ ಕೊವಿಶೀಲ್ಡ್‌ ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ “ದೃಷ್ಟಿ’ ಬಂದಿದೆ. ಕಳೆದ 9 ವರ್ಷಗಳಿಂದಲೂ ಮಥುರಾಬಾಯಿ ಬಿದ್ವೆ ಅವರಿಗೆ ಎರಡೂ ಕಣ್ಣುಗಳು ಕಾಣಿಸುತ್ತಿರಲಿಲ್ಲ. ಜೂ.26ರಂದು ಅವರು ಕೊವಿಶೀಲ್ಡ್‌ನ ಮೊದಲ ಡೋಸ್‌ ಪಡೆದಿದ್ದರು. ಮಾರನೇ ದಿನವೇ ಒಂದು ಕಣ್ಣಿಗೆ ಶೇ.30-40ರಷ್ಟು ದೃಷ್ಟಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next