ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಒಂದೆಡೆ ಓಂ ಶಕ್ತಿ ದೇವಾಲಯದ ತಮಿಳುನಾಡು ಪ್ರವಾಸ ಕೈಗೊಂಡ ಮಹಿಳಾ ಭಕ್ತರು ಸೋಂಕಿಗೆ ಒಳಗಾಗುತ್ತಿದ್ದರೆ, ಮತ್ತೂಂದೆಡೆ ಇದನ್ನು ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆಗೆ ಕೊರೊನಾ ಶಾಕ್ ನೀಡಿದೆ.
ಪೊಲೀಸ್ ಇಲಾಖೆಗೆ ಕೊರೊನಾಘಾತ ಸಂಭವಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯ ವಿವಿಧ ಉಪವಿಭಾಗಗಳ ಹಾಗೂ
ಪೊಲೀಸ್ ಠಾಣೆಗಳ ಅಧಿಕಾರಿಗಳು ಸೇರಿದಂತೆ 16 ಮಂದಿ ಸಾಮೂಹಿಕವಾಗಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ವಿ.ಧನಂಜಯ, ಮಂಡ್ಯ ಡಿವೈಎಸ್ಪಿ ಟಿ.ಮಂಜುನಾಥ್, ಮಳವಳ್ಳಿ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಮಂಡ್ಯ ಗ್ರಾಮಾಂತರ ಸಿಪಿಐ ಆನಂದೇಗೌಡ, ಶ್ರೀರಂಗಪಟ್ಟಣ ಸಿಪಿಐ ಪುನೀತ್, ಕೆ.ಆರ್.ಪೇಟೆ ಗ್ರಾಮಾಂತರ ಸಿಪಿಐ ನಿರಂಜನ್ ಸೇರಿದಂತೆ 16 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸಾಲು ಸಾಲು ಕಾರ್ಯಕ್ರಮ: ಜತೆಗೆ ಇವರ ಸಂಪರ್ಕದಲ್ಲಿದ್ದ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬದವರು ಹೋಮ್ಐಸೋಲೇಷನ್ಗೆ ಒಳಗಾಗಿದ್ದಾರೆ. ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯಲ್ಲಿ ಸಾಲು ಸಾಲು ದೊಡ್ಡ ಕಾರ್ಯಕ್ರಮಗಳು ನಡೆದಿದ್ದವು. ಮೊದಲಿಗೆ ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆದಿತ್ತು. ಬೆನ್ನಲ್ಲೇ ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ರಾಜ್ಯ ಯುವಜನೋತ್ಸವ ಆಯೋಜನೆಯಾಗಿತ್ತು.
Related Articles
ಇದರ ನಡುವೆಯೇ ಮಂಡ್ಯದಲ್ಲಿ ಪೊಲೀಸ್ ಇಲಾಖೆಯಿಂದ 145 ಸಿವಿಲ್ ಪೊಲೀಸ್ ಪೇದೆಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ಎರಡು ದಿನಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆದಿದೆ. ಮೂರು ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯರಾಗಿದ್ದರು.
ಈ ಸಂದರ್ಭದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕುತಗುಲಿರಬಹುದು ಎಂದು ಶಂಕಿಸಲಾಗಿದೆ.ಕೊರೊನಾ ಮೊದಲೆರಡು ಅಲೆಗಳ ಸಂದರ್ಭದಲ್ಲಿಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಫ್ರಂಟ್ಲೆçನ್ ವಾರಿಯರ್ಗಳಾಗಿ ಹಗಲಿರುಳು ಶ್ರಮಿಸಿದ್ದರು.
ಆಗಲೂ ಸಾಕಷ್ಟು ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆಗ ಕೆಲವು ಪೊಲೀಸ್ ಠಾಣೆಗಳನ್ನೇ ಸೀಲ್ಡೌನ್ ಮಾಡಲಾಗಿತ್ತು.
ಇದೀಗ 3ನೇ ಅಲೆಯಲ್ಲಿ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮೂಹಿಕವಾಗಿ ಸೋಂಕಿಗೆಒಳಗಾಗಿರುವುದು ಆತಂಕ ಮೂಡಿಸಿದೆ. ಹೀಗಾಗಿ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಗಂಟಲು ದ್ರವವನ್ನು ಸಂಗ್ರಹಿಸಿಪರೀಕ್ಷೆಗಾಗಿ ಕಳುಹಿಸಲಾಗಿದೆ. ಜತೆಗೆ,ಅವರೆಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ಹೋಮ್ ಐಸೋಲೇಷನ್ಗೆ ಒಳಪಡಿಸಲಾಗಿದೆ.
ಮೈಸೂರು ಎಎಸ್ಪಿಗೆ ಮಂಡ್ಯ ಹೊಣೆ : ಮಂಡ್ಯ ಎಸ್ಪಿ, ಎಎಸ್ಪಿ, ಡಿವೈಎಸ್ಪಿಗಳು ಸಾಮೂಹಿಕವಾಗಿ ಸೋಂಕಿಗೆ ಒಳಗಾಗಿರುವುದರಿಂದ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಉಸ್ತುವಾರಿ ಜವಾಬ್ದಾರಿಯನ್ನು ಮೈಸೂರುಎಎಸ್ಪಿ ಶಿವಕುಮಾರ್ ಅವರಿಗೆ ನೀಡಲಾಗಿದೆ. ಅವರು ಮಂಡ್ಯ ಜಿಲ್ಲೆಗೆ ಆಗಮಿಸಿ, ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ 16 ಮಂದಿ ಪೊಲೀಸ್ ಸಿಬ್ಬಂದಿ ಗಳು ಕೊರೊನಾ ಸೋಂಕಿಗೆಒಳಗಾಗಿದ್ದೇವೆ. ಯಾರಿಗೂಯಾವುದೇ ಆರೋಗ್ಯ ಸಮಸ್ಯೆಯಿಲ್ಲ. ರೋಗ ಲಕ್ಷಣಗಳೂ ಇಲ್ಲ. ಆದರೂಸೋಂಕು ದೃಢಪಟ್ಟಿದ್ದು, ಮುನ್ನೆಚ್ಚರಿಕೆ ಯಾಗಿ ಎಲ್ಲರಿಗೂ ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. –ಎನ್.ಯತೀಶ್, ಎಸ್ಪಿ, ಮಂಡ್ಯ
ಹೊರ ರಾಜ್ಯದಿಂದ ಬರುತ್ತಿರುವ ಯಾತ್ರಿಕರು, ಸಾರ್ವಜನಿಕರನ್ನು ಕೋವಿಡ್ ನಿಯಮಗಳನ್ವಯಕ್ವಾ ರಂಟೈನ್ಗೆ ಒಳಪಡಿಸಲು ಆರೋಗ್ಯ ಇಲಾಖೆಯೊಂದಿಗೆ ಪೊಲೀಸರೂಕೈ ಜೋಡಿಸಿದ್ದಾರೆ. ಆಸಂದರ್ಭದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯೂ ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ. ಎಲ್ಲ ಸೋಂಕಿತರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. –ಡಾ.ಟಿ.ಎನ್.ಧನಂಜಯ, ಡಿಎಚ್ಒ, ಮಂಡ್ಯ