ಹುಣಸೂರು: ನಗರದಲ್ಲಿ ಕರ್ನಾಟಕ ಗೃಹರಕ್ಷಕ ದಳದ ವತಿಯಿಂದ ಕೋವಿಡ್ ಜಾಗೃತಿ ಜಾಥಾ ನಡೆಸಿ, ಬೀದಿ ಬದಿ ವ್ಯಾಪಾರಿಗಳು ಹಾಗೂ ವಾಹನ ಸವಾರರಿಗೆ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಜಾಥಾಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಅನುಷಾ ಮಾತನಾಡಿ, ಕೋವಿಡ್ ಸೋಂಕಿನ ಬಗ್ಗೆ ಹೆದರಿಕೆ ಬೇಡ ಆದರೆ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ. ಕಳೆದ 8 ತಿಂಗಳಿನಲ್ಲಿ ಕೋವಿಡ್ ಸೋಂಕಿನಿಂದ ಪೊಲೀಸ್ ಪೇದೆ ಸೇರಿದಂತೆ 27 ಮಂದಿ ಸಾವನ್ನಪ್ಪಿದ್ದಾರೆ. ಶೀಘ್ರ ಸೋಂಕಿಗೆ ಲಸಿಕೆ ಬರಲಿದೆ. ಆದರೂ ಮುನ್ನೆಚ್ಚರಿಕೆ ವಹಿಸುವ ಮೂಲಕ ರೋಗವನ್ನು ತಡೆಗಟ್ಟಬಹುದಾಗಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗೃಹರಕ್ಷಕರು ಸಾರ್ವಜನಿಕರಲ್ಲಿ ಮತ್ತಷ್ಟು ಅರಿವು ಮೂಡಿಸುವ ಕಾರ್ಯನಡೆಸುತ್ತಿರುವುದು ಶ್ಲಾಘನೀಯ ಎಂದರು.
ನಿಮ್ಮ ಜೊತೆಯಲ್ಲಿ ನಿಮ್ಮ ಕುಟುಂಬವಿದೆ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬರೂ ಸಹ ಮನೆಯಿಂದ ಹೊರಬರುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರಕಾರ ಸಾಕಷ್ಡು ಮುನ್ನೆಚ್ಚರಿಕೆ ಕಾರ್ಯ ಕ್ರಮ ರೂಪಿಸಿದ್ದರೂ ಅಲ್ಲಲ್ಲಿ ಸಾವಿನ ವರದಿ ಕೇಳುತ್ತಿದ್ದೇವೆ. ಎಲ್ಲರೂ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ನಗರದ ಡಿವೈಎಸ್ ಪಿ ಕಚೇರಿಯಿಂದ ಹೊರಟ ಜಾಥಾದಲ್ಲಿ ಸ್ವತಃ ಅಧ್ಯಕ್ಷೆ ಅನುಷಾ ಅವರು ಬೀದಿ ಬದಿ ವ್ಯಾಪಾರಿಗಳು, ವಾಹನ ಸವಾರರಿಗೆ ಮಾಸ್ಕ್ ವಿತರಿಸುವ ಮೂಲಕ ಎಚ್ಚರಿಸಿದರು.
ಈ ವೇಳೆ ನಗರಸಭೆ ಸದಸ್ಯ ಸೈಯದ್ ಯೂನಸ್, ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಆದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡೆಪ್ಯುಟಿ ಕಮಾಂಡೆಂಟ್ ವೆಂಕಟೇಶ್, ಸಹಾಯಕ ಬೋಧಕ ಗೋವಿಂದ, ತಾಲೂಕು ಘಟಕಾಧಿಕಾರಿ ಸಂಪತ್ ಕುಮಾರ್, ಎ.ಎಸ್.ಐ.ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.